ಬನಾರಸ್ ಹಿಂದೂ ವಿವಿಗೆ ನೀತಾ ಅಂಬಾನಿ ವಿಸಿಟಿಂಗ್ ಪ್ರೊಫೆಸರ್!: ವಿವಾದ ಸೃಷ್ಟಿಸಿದ ನಡೆ
ಲಕ್ನೋ, ಮಾರ್ಚ್ 17: ಉತ್ತರ ಪ್ರದೇಶದಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಅವರನ್ನು ವಿಸಿಟಿಂಗ್ ಪ್ರೊಫೆಸರ್ ಆಗಿ ನೇಮಕ ಮಾಡಿರುವುದು ತೀವ್ರ ವಿವಾದ ಸೃಷ್ಟಿಸಿದೆ. ಈ ಆಯ್ಕೆಗೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯವು 'ಕೆಟ್ಟ ಉದಾಹರಣೆ' ಸೃಷ್ಟಿಸಿದೆ ಎಂದು ಟೀಕಿಸಿದ್ದಾರೆ.
ವಿವಿಯ ಆವರಣದಲ್ಲಿರುವ ಉಪ ಕುಲಪತಿ ರಾಕೇಶ್ ಭಟ್ನಾಗರ್ ಅವರ ನಿವಾಸದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ಗುಂಪು, ಈ ಕುರಿತು ಮನವಿ ಪತ್ರ ಸಲ್ಲಿಸಿದೆ. ತಮ್ಮ ಮಹಿಳಾ ಅಧ್ಯಯನ ಕೇಂದ್ರಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇರಿಕೊಳ್ಳುವಂತೆ ನೀತಾ ಅಂಬಾನಿ ಅವರಿಗೆ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ವಿಭಾಗ ಆಹ್ವಾನ ನೀಡಿತ್ತು.
ರಿಲಯನ್ಸ್-ಫ್ಯೂಚರ್ ಗ್ರೂಪ್ ಬಹುಕೋಟಿ ಡೀಲ್ಗೆ ದಿಲ್ಲಿ ಹೈಕೋರ್ಟ್ ತಡೆ: ಅಂಬಾನಿಗೆ ಹಿನ್ನಡೆ
ನೀತಾ ಅಂಬಾನಿ ಅವರಿಗೆ ಈ ಪ್ರಸ್ತಾವನೆ ರವಾನಿಸಿದ ಬೆನ್ನಲ್ಲೇ ವಿಶ್ವವಿದ್ಯಾಲಯದ ಅಧಿಕಾರಿಗಳು, ಬಾಕಿ ಉಳಿದ ಎರಡು ಸಂದರ್ಶನ ಪ್ರಾಧ್ಯಾಪಕ ಸಿಬ್ಬಂದಿ ಹುದ್ದೆಗಳಿಗೆ ಕೋಟ್ಯಧಿಪತಿ ಉದ್ಯಮಿ ಗೌತಮ್ ಅದಾನಿ ಅವರ ಪತ್ನಿ ಪ್ರೀತಿ ಅದಾನಿ ಮತ್ತು ಬ್ರಿಟನ್ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಪತ್ನಿ ಉಷಾ ಮಿತ್ತಲ್ ಅವರನ್ನು ಸಹ ಪರಿಗಣಿಸಿದ್ದಾಗಿ ತಿಳಿಸಿದ್ದಾರೆ.
ಮುರು ಹುದ್ದೆಗಳಿವೆ
ಸುಮಾರು ಎರಡು ವರ್ಷಗಳ ಹಿಂದೆ ಬನಾರಸ್ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಿದ್ದ ಮಹಿಳಾ ಅಧ್ಯಯನ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಕರಿಗಾಗಿ ಮೂರು ಹುದ್ದೆಗಳಿವೆ. ನೀತಾ ಅಂಬಾನಿ ಮತ್ತು ಇತರೆ ಪ್ರಭಾವಿ ಮಹಿಳೆಯರು ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸುವುದು ಈ ನೇಮಕದ ಉದ್ದೇಶವಾಗಿದೆ ಎಂದು ವಿವಿಯ ಮೂಲಗಳು ತಿಳಿಸಿವೆ.
ಮಹಿಳೆಯರಿಗೆ ಪ್ರಯೋಜನ
'ನೀತಾ ಅಂಬಾನಿ ಒಬ್ಬ ಮಹಿಳಾ ಉದ್ಯಮಿ. ಅವರು ನಮ್ಮ ಕೇಂದ್ರವನ್ನು ಸೇರಿಕೊಂಡರೆ ಅವರ ಅನುಭವದಿಂದ ಪೂರ್ವಾಂಚಲ ಭಾಗದ ಮಹಿಳೆಯರಿಗೆ ಉತ್ತಮ ಪ್ರಯೋಜನವಾಗಲಿದೆ. ಇದು ಮಹಿಳೆಯರಿಗೆ ಭವಿಷ್ಯದಲ್ಲಿ ಸ್ಫೂರ್ತಿ ನೀಡಲಿದೆ' ಎಂದು ಮಹಿಳಾ ಅಧ್ಯಯನ ಕೇಂದ್ರದ ಸಮನ್ವಯ ಅಧಿಕಾರಿ ನಿಧಿ ಶರ್ಮಾ ಹೇಳಿದ್ದಾರೆ.
ಮುಕೇಶ್ ಅಂಬಾನಿ ಬಳಿಕ ವಾರೆನ್ ಬಫೆಟ್ರನ್ನೇ ಹಿಂದಿಕ್ಕಿದ ಚೀನಾದ ಝಾಂಗ್ ಶಾನ್ಷನ್
ಶ್ರೀಮಂತನ ಪತ್ನಿಯಾಗಿರುವುದು ಸಾಧನೆಯಲ್ಲ
ವಿಶ್ವವಿದ್ಯಾಲಯದ ನಡೆ ವಿದ್ಯಾರ್ಥಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಇದೊಂದು ದೊಡ್ಡ ಸಂಚು ಎಂದು ಸಂಶೋಧನಾ ವಿದ್ಯಾರ್ಥಿ ಶುಭಂ ತಿವಾರಿ ಆರೋಪಿಸಿದ್ದಾರೆ. 'ನಾವು ಕೆಟ್ಟ ನಿದರ್ಶನ ಸೃಷ್ಟಿಸುತ್ತಿದ್ದೇವೆ. ಶ್ರೀಮಂತ ವ್ಯಕ್ತಿಯ ಪತ್ನಿಯಾಗಿರುವುದು ದೊಡ್ಡ ಸಾಧನೆಯಲ್ಲ. ಇಂತಹ ವ್ಯಕ್ತಿಗಳು ನಮಗೆ ಆದರ್ಶಪ್ರಾಯವಾಗಿರಲು ಕೂಡ ಸಾಧ್ಯವಿಲ್ಲ. ನೀವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವುದಾದರೆ ಅರುಣಿಮಾ ಸಿನ್ಹಾ, ಬಚೇಂದ್ರಿ ಪಾಲ್, ಮೇರಿ ಕೋಮ್ ಅಥವಾ ಕಿರಣ್ ಬೇಡಿ ಅವರಂತಹ ಅನುಕರಣೀಯ ಮಹಿಳೆಯರನ್ನು ಆಹ್ವಾನಿಸಿ' ಎಂದು ಹೇಳಿದ್ದಾರೆ.
ಲೋಕೋಪಕಾರಿ ಕೆಲಸ ಮಾಡುತ್ತಿದ್ದಾರೆ
'ನಾವು ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳ ಜತೆಗೆ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳನ್ನು ಕೂಡ ಮಾಡುತ್ತಿದ್ದೇವೆ. ಲೋಕೋಪಕಾರಿ ಉದ್ಯಮಿಗಳನ್ನು ಆಹ್ವಾನಿಸುವ ಬಿಎಚ್ಯು ಸಂಪ್ರದಾಯದಂತೆ ನೀತಾ ಅಂಬಾನಿ ಅವರು ಮಹಿಳಾ ಅಧ್ಯಯನ ಕೇಂದ್ರಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇರ್ಪಡೆಯಾಗುವಂತೆ ರಿಲಯನ್ಸ್ ಫೌಂಡೇಷನ್ಗೆ ಪತ್ರ ಕಳುಹಿಸಿದ್ದೇವೆ. ರಿಲಯನ್ಸ್ ಫೌಂಡೇಷನ್ ಮಹಿಳಾ ಸಬಲೀಕರಣದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಅವರ ಅನುಭವದಿಂದ ನಾವು ಲಾಭ ಪಡೆಯಬಹುದು' ಎಂದು ಸಮಾಜ ವಿಜ್ಞಾನಗಳ ವಿಭಾಗದ ಡೀನ್ ಕಿಶೋರ್ ಮಿಶ್ರಾ ಹೇಳಿದ್ದಾರೆ.
ವರದಿ ಸತ್ಯಕ್ಕೆ ದೂರ
ಬಿಎಚ್ಯುಗೆ ನೀತಾ ಅಂಬಾನಿ ಅವರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ಮಾಡುವ ಪ್ರಸ್ತಾವದ ಕುರಿತಾದ ವರದಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ನಿರಾಕರಿಸಿದೆ. ಈ ವರದಿಗಳು ಸತ್ಯಕ್ಕೆ ದೂರ. ಅಂತಹ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಕಂಪೆನಿ ವಕ್ತಾರರು ತಿಳಿಸಿದ್ದಾರೆ. ವಿಶ್ವವಿದ್ಯಾಲಯ ಕೂಡ ಈ ಕುರಿತು ಸ್ಪಷ್ಟನೆ ನೀಡಿದೆ. ಸಂದರ್ಶಕ ಪ್ರಾಧ್ಯಾಪಕರ ನೇಮಕಕ್ಕೆ ಅಧಿಕಾರಿಗಳ ಅನುಮತಿ ಕಡ್ಡಾಯ. ಈ ರೀತಿಯ ಯಾವುದೇ ಪ್ರಸ್ತಾಪವನ್ನು ಅಧಿಕಾರಿಗಳ ಮುಂದೆ ಇರಿಸಿಲ್ಲ ಎಂದು ಬಿಎಚ್ಯು ತಿಳಿಸಿದೆ.