ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ನಾವಲ್ಲ, ಕಾಂಗ್ರೆಸ್: ಬಿಜಿಪಿ ಮುಖಂಡ ವಿನಯ್ ಕಟಿಯಾರ್
ಅಯೋದ್ಯಾ, ಅಕ್ಟೋಬರ್ 2: ವಿವಾದಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಗಳನ್ನು ಬಿಜೆಪಿ ಮುಖಂಡ ವಿನಯ್ ಕಟಿಯಾರ್ ನಿರಾಕರಿಸಿದ್ದಾರೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಕೆ ಅಡ್ವಾಣಿ, ವಿನಯ್ ಕಟಿಯಾರ್ ಸೇರಿದಂತೆ ಎಲ್ಲ 32 ಆರೋಪಿಗಳನ್ನು ನಿರಪರಾಧಿಗಳು ಎಂದು ಲಕ್ನೋ ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ವಿವಿಧ ರಾಜ್ಯಗಳಲ್ಲಿನ ತಮ್ಮ ಪಕ್ಷದ ಸರ್ಕಾರಗಳನ್ನು ಉರುಳಿಸಲು ಕಾಂಗ್ರೆಸ್ ಮಸೀದಿಯನ್ನು ಧ್ವಂಸಗೊಳಿಸಿತ್ತು ಎಂದು ಅವರು ಆರೋಪಿಸಿದ್ದಾರೆ.
''5 ಗಂಟೆಯೊಳಗೆ ಮಸೀದಿ ಕೆಡವಲಾಗಿದೆ, ಪೂರ್ವ ನಿಯೋಜಿತವಲ್ಲವೇ?"
ಸೆ. 30ರಂದು 2,300 ಪುಟಗಳ ತೀರ್ಪಿನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ, ಅಯೋಧ್ಯಾದಲ್ಲಿನ ವಿವಾದಾತ್ಮಕ ಕಟ್ಟಡವನ್ನು ಉರುಳಿಸುವ ಕೃತ್ಯವು ಪೂರ್ವ ನಿಯೋಜಿತ ಸಂಚು ಅಲ್ಲ. ಇದರಲ್ಲಿನ ಎಲ್ಲ 32 ಆರೋಪಿಗಳ ವಿರುದ್ಧ ಯಾವುದೇ ಸೂಕ್ತ ಪುರಾವೆಗಳಿಲ್ಲ ಎಂದಿತ್ತು. 28 ವರ್ಷಗಳ ಹಿಂದೆ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಲ್ಕೆ ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಎಲ್ಲ ಆರೋಪಿಗಳನ್ನೂ ನಿರ್ದೋಷಿಗಳೆಂದು ತೀರ್ಪು ನೀಡಿತ್ತು. ಮುಂದೆ ಓದಿ.
ಯಾವುದೇ ಸಂಚು ನಡೆದಿರಲಿಲ್ಲ
ಈ ತೀರ್ಪಿಗೆ ಪ್ರತಿಕ್ರಿಯಿಸಿರುವ ವಿನಯ್ ಕಟಿಯಾರ್, ಬಾಬ್ರಿ ಮಸೀದಿಯನ್ನು ಉರುಳಿಸುವ ಹಿಂದಿನ ದಿನವಾದ 1992ರ ಡಿಸೆಂಬರ್ 5ರಂದು ತಮ್ಮ ಮನೆಯಲ್ಲಿ ನಡೆದ ಸಭೆಯಲ್ಲಿ ಯಾವುದೇ ಸಂಚು ನಡೆದಿರಲಿಲ್ಲ. ಅಲ್ಲಿ ಸಾಂಕೇತಿಕ ಕರಸೇವೆಯ ಬಗ್ಗೆ ಮಾತ್ರವೇ ಚರ್ಚೆ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಕಟಿಯಾರ್ ಮನೆಯಲ್ಲಿ ನಡೆದಿದ್ದ ಔತಣ
ಬಾಬ್ರಿ ಮಸೀದಿ ಧ್ವಂಸ ನಡೆದ ಹಿಂದಿನ ದಿನ ರಾತ್ರಿ 10 ಗಂಟೆಗೆ ಭಜರಂಗ ದಳದ ಮುಖಂಡ ಮತ್ತು ಮಾಜಿ ಸಂಸದ ವಿನಯ್ ಕಟಿಯಾರ್ ಅವರ ಮನೆಯಲ್ಲಿ ನಡೆದ ಔತಣ ಕೂಟದಲ್ಲಿ ಎಲ್ಕೆ ಅಡ್ವಾಣಿ ಹಾಗೂ ಸಂಘ ಪರಿವಾರದ ಇತರೆ ಮುಖಂಡರು ಭಾಗವಹಿಸಿದ್ದರು. ಮಸೀದಿ ಕೆಡವಲು ಸಂಚು ರೂಪಿಸಲಾಗಿತ್ತು ಎನ್ನುವುದಕ್ಕೆ ಇದೇ ಪುರಾವೆ ಎಂದು ಸಿಬಿಐ ಪರ ವಕೀಲರು ಹೇಳಿದ್ದರು. ಆದರೆ ಇದು ಸತ್ಯವಲ್ಲ ಎಂದು ಕಟಿಯಾರ್ ತಿಳಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಇದರಿಂದ: ಬಾಬ್ರಿ ಮಸೀದಿ ತೀರ್ಪಿಗೆ ಓವೈಸಿ ಪ್ರತಿಕ್ರಿಯೆ
ಮಸೀದಿ ಸಮೀಪ ಅವಕಾಶ ಬೇಡ ಎಂದಿದ್ದೆವು
ಅಡ್ವಾಣಿ ಅವರು ಹಿಂದಿನ ರಾತ್ರಿ ಅಯೋಧ್ಯಾಕ್ಕೆ ಬಂದು ಜಂಕಿ ಮಹಲ್ನಲ್ಲಿ ಉಳಿದುಕೊಂಡಿದ್ದರು. ಅವರು ನನ್ನ ಹಿರಿಯ ನಾಯಕರು. ಹೀಗಾಗಿ ನನ್ನ ಮನೆಗೆ ಊಟಕ್ಕೆ ಕರೆದಿದ್ದೆ. ಊಟ ಮಾಡುವಾಗ ಮರುದಿನದ ಸಾಂಕೇತಿಕ ಕರಸೇವೆಯ ಬಗ್ಗೆ ಮಾತನಾಡಿದ್ದೆವು. ಬಾಬ್ರಿ ಮಸೀದಿ ಸಮೀಪ ಯಾವುದೇ ಕರಸೇವಕ್ಕೆ ಅವಕಾಶ ನೀಡಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದೆವು ಎಂದು ಹೇಳಿದ್ದಾರೆ.
ಮಸೀದಿ ಉರುಳಿಸಿದ್ದು ಕಾಂಗ್ರೆಸ್
'ಬಾಬ್ರಿ ಮಸೀದಿಯನ್ನು ಉರುಳಿಸಿದ್ದು ಕಾಂಗ್ರೆಸ್. ಆದರೆ ನಮ್ಮನ್ನು ಆರೋಪಿಗಳನ್ನಾಗಿಸಲಾಯಿತು. ಮಸೀದಿ ಧ್ವಂಸದ ಮೂಲಕ ರಾಜ್ಯಗಳಲ್ಲಿನ ನಮ್ಮ ಸರ್ಕಾರಗಳನ್ನು ಉರುಳಿಸುವುದು ಕಾಂಗ್ರೆಸ್ನ ಸಂಚಾಗಿತ್ತು' ಎಂದು ಆರೋಪಿಸಿರುವ ಕಟಿಯಾರ್, ಮಸೀದಿ ಉರುಳಿಸುವುದನ್ನು ತಾವು ಬಯಸಿರಲಿಲ್ಲ ಎಂದಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ತೀರ್ಪು: ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಲಿ!
ದುಷ್ಕರ್ಮಿಗಳನ್ನು ಕಾಂಗ್ರೆಸ್ ಸೇರಿಸಿತ್ತು
ಕರಸೇವಕರ ತಂಡದೊಂದಿಗೆ ಸಂಚಿನ ಭಾಗವಾಗಿ ಕೆಲವು ಅಪರಿಚಿತ ದುಷ್ಕರ್ಮಿಗಳನ್ನು ಕಾಂಗ್ರೆಸ್ ಸೇರ್ಪಡೆ ಮಾಡಿತ್ತು. ಅವರು ಪ್ರಚೋದನೆ ಮಾಡಿ ಮಸೀದಿಯನ್ನು ಹಾಳುಗೆಡವಲು ಪ್ರಾರಂಭಿಸಿದರು. ಸಾಂಕೇತಿಕ ಕರಸೇವೆಗೆ ಸ್ವಲ್ಪ ಮರಳು ಮತ್ತು ಸರಯೂ ನೀರನ್ನು ತರುವಂತೆ ಮಾತ್ರವೇ ಕರಸೇವಕರಿಗೆ ತಿಳಿಸಿದ್ದೆವು. ಆದರೆ ಜನರು ನಮ್ಮ ನಿಯಂತ್ರಣ ಮೀರಿ ಹೇಗೆ ಹೋದರು ಎನ್ನುವುದು ನಮಗೆ ಅರ್ಥಮಾಡಿಕೊಳ್ಳಲು ಆಗಿರಲಿಲ್ಲ ಎಂದು ಹೇಳಿದ್ದಾರೆ.
ಬೇರೆ ಮಸೀದಿ ಮುಟ್ಟುವುದಿಲ್ಲ
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಅದರ ನಾಯಕರ ಪಾತ್ರದ ಬಗ್ಗೆ ವಿಚಾರಣೆ ಮಾಡಲು ತನಿಖೆ ನಡೆಯಬೇಕು ಎಂದು ಕಟಿಯಾರ್ ಒತ್ತಾಯಿಸಿದ್ದಾರೆ. ಕಾಶಿಯಲ್ಲಿನ ಗ್ಯಾನ್ವಪಿ ಮಸೀದಿ ಹಾಗೂ ಮಥುರಾದಲ್ಲಿನ ಶಾಹಿ ಈದ್ಗಾ ಮಸೀದಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕಟಿಯಾರ್, ಈಗ ಯಾವುದೇ ಮಸೀದಿಗಳನ್ನು ಮುಟ್ಟುವುದಿಲ್ಲ. ದೇಶದಲ್ಲಿ ಶಾಂತಿ ನೆಲೆಸಲಿ' ಎಂದಿದ್ದಾರೆ.