ಸೆ.30ರಂದು ಬಾಬ್ರಿ ಮಸೀದಿ ತೀರ್ಪು, ಅಡ್ವಾಣಿ ಹಾಜರಿಗೆ ಸೂಚನೆ
ಲಕ್ನೋ, ಸೆ. 16: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಸೆಪ್ಟೆಂಬರ್ 30ರಂದು ನೀಡಲು ಲಕ್ನೋದ ಸಿಬಿಐ ಕೋರ್ಟ್ ಮುಂದಾಗಿದೆ. ತೀರ್ಪಿನ ದಿನದಂದು ಪ್ರಮುಖ ಆರೋಪಿಗಳಾದ ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಸೇರಿದಂತೆ ಆರೋಪಿಗಳಿಗೆ ಹಾಜರಿರುವಂತೆ ಕೋರ್ಟ್ ಸೂಚಿಸಿದೆ.
ಬಾಬ್ರಿ ಮಸೀದಿ ಧ್ವಂಸ ನಡೆದು 27 ವರ್ಷಗಳು ಕಳೆದಿದೆ. ಉತ್ತರ ಪ್ರದೇಶದ ಅಯೋಧ್ಯಾ ನಗರದಲ್ಲಿ ಹಿಂದೂ ಪರ ಸಂಘಟನೆಗಳು ಅಂದು ನಡೆಸಿದ ಕೃತ್ಯ, ಕರಸೇವಕರ ಪಾಲಿಗೆ ಶೌರ್ಯ ದಿವಸವಾಗಿದ್ದರೆ, ಮುಸ್ಲಿಂ ಸಂಘಟನೆಗಳಿಗೆ ಕಪ್ಪು ದಿನವಾಗಿದೆ. 92 ವರ್ಷ ವಯಸ್ಸಿನ ಅಡ್ವಾಣಿ ಅವರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
25
ವರ್ಷಗಳ
ಬಾಬ್ರಿ
ಮಸೀದಿ
ವಿವಾದ,
ಟೈಮ್
ಲೈನ್
ವಿಶೇಷ ಜಡ್ಜ್ ಎಸ್. ಕೆ ಯಾದವ್ ಮುಂದೆ ಅಡ್ವಾಣಿ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ವಿಚಾರಣೆ ಮೂಲಕ ಹಾಜರಾಗಿದ್ದಾರೆ. ಈ ಹಿಂದೆ ಏಪ್ರಿಲ್ 2020ರ ಒಳಗೆ ತೀರ್ಪು ನೀಡಬೇಕು ಎಂದು ಹೇಳಿತ್ತು. ನ್ಯಾಯಾಧೀಶರು ವಿನಂತಿಯ ಮೇರೆಗೆ ಗಡುವನ್ನು ಆಗಸ್ಟ್ 31ಕ್ಕೆ ವಿಸ್ತರಿಸಲಾಗಿತ್ತು. ನಂತರ ಇದೀಗ ಸೆಪ್ಟೆಂಬರ್ 30ಕ್ಕೆ ಅವಧಿ ವಿಸ್ತರಿಸಲಾಗಿದೆ. ನ್ಯಾಯಮೂರ್ತಿ ಆರ್.ಎಫ್ ನಾರಿಮನ್, ನವೀನ್ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ನೇತೃತ್ವದ ನ್ಯಾಯಾಧೀಶರ ಪೀಠವು ವರದಿಯನ್ನು ಗಣನೆಗೆ ತೆಗೆದುಕೊಂಡ ನಂತರ ಗಡುವು ಇನ್ನೂ ಒಂದು ತಿಂಗಳು ವಿಸ್ತರಿಸಿತ್ತು.
32 ಆರೋಪಿಗಳ ಹೇಳಿಕೆ ದಾಖಲು
1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಮಾಜಿ ಉಪ ಪ್ರಧಾನಿ ಎಲ್ಕೆ ಅಡ್ವಾಣಿ, ಮಾಜಿ ಕೇಂದ್ರ ಸಚಿವರಾದ ಮುರಳಿ ಮನೋಹರ್ ಜೋಷಿ ಮತ್ತು ಉಮಾ ಭಾರತಿ ಸೇರಿದಂತೆ ಪ್ರಮುಖವಾಗಿ 13 ಮಂದಿ ಆರೋಪಿಗಳಿದ್ದಾರೆ. ಎಲ್ಲಾ 32 ಆರೋಪಿಗಳ ಹೇಳಿಕೆಯನ್ನು ಸಿಆರ್ ಪಿಸಿ ಸೆಕ್ಷನ್ 313 ಅಡಿಯಲ್ಲಿ ಕೋರ್ಟ್ ದಾಖಲಿಸುತ್ತಿದೆ. ವಿಶೇಷ ಜಡ್ಜ್ ಎಸ್. ಕೆ ಯಾದವ್ ಮುಂದೆ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯನ್ನು ಆರೋಪಿಗಳು ಎದುರಿಸಿದರು.
ಜಸ್ಟೀಸ್ ಆರ್ ಎಫ್ ನಾರಿಮನ್ ನ್ಯಾಯಪೀಠದ ಆದೇಶ
ಎಲ್ ಕೆ ಅಡ್ವಾಣಿ ಸೇರಿದಂತೆ 13 ಜನ ಆರೋಪಿಗಳ ಮೇಲಿನ ಆರೋಪ ಪಟ್ಟಿ ರದ್ದು ಮಾಡದಂತೆ ಸಿಬಿಐ ಕೋರಿದ್ದ ಅರ್ಜಿಗೆ ಪುರಸ್ಕಾರ ಸಿಕ್ಕಿತ್ತು. ಕಲ್ಯಾಣ್ ಸಿಂಗ್ ಹೊರತುಪಡಿಸಿ ಉಳಿದವರ ಮೇಲೆ ವಿಚಾರಣೆ ನಡೆಸಲು ಆದೇಶಿಸಲಾಗಿತ್ತು. ಕಲ್ಯಾಣ್ ಸಿಂಗ್ ನಂತರ ಜಾಮೀನು ಪಡೆದುಕೊಂಡಿದ್ದರು. ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ಸಂಸದರಾದ ಬ್ರಿಜ್ ಭೂಷಣ್ ಸಿಂಗ್, ಸಾಕ್ಷಿ ಮಹಾರಾಜ್, ಭೂಷಣ ಸಿಂಗ್, ಆರ್ ಎನ್ ಶ್ರೀವಾಸ್ತವ, ಲಲ್ಲು ಸಿಂಗ್ ಸೇರಿದಂತೆ 32 ಜನರ ವಿರುದ್ಧ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಬಳಸಿ ಮುಕ್ತಾಯಗೊಳಿಸಬಹುದು ಎಂದು ಜಸ್ಟೀಸ್ ಆರ್ ಎಫ್ ನಾರಿಮನ್ ಹಾಗೂ ನ್ಯಾ ಸೂರ್ಯಕಾಂತ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣ
1992ರಲ್ಲಿ ಅಯೋಧ್ಯೆಯಲ್ಲಿದ್ದ 16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಶಿ ಇತರ ಹನ್ನೆರಡು ಮಂದಿ ವಿರುದ್ಧದ ಸಂಚು ರೂಪಿಸಿದ ಆರೋಪವನ್ನು ರಾಯ್ ಬರೇಲಿ ಕೋರ್ಟ್ ಕೈಬಿಟ್ಟು, ಖುಲಾಸೆ ಮಾಡಿತ್ತು. 2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿತ್ತು. ಇದೀಗ ಸಿಬಿಐ ಹೈಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು
ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಗೌಪ್ಯ ಸಭೆ
ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಗೌಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು.ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು 1990ರಲ್ಲಿ ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್ ಶೀಟ್ ನಲ್ಲಿ ಹೇಳಿದೆ.