ವೈರಲ್ ವಿಡಿಯೋ: ಕೇಳಲೇ ಬೇಕಾದ ಪಿಯುಸಿ ವಿದ್ಯಾರ್ಥಿಯ ಭಾಷಣ
ವಾರಣಾಸಿ, ಸೆಪ್ಟೆಂಬರ್ 19: ವಾಟ್ಸ್ಆಫ್, ಫೇಸ್ಬುಕ್ ಗಳ ಮೂಲಕ ಸ್ಥಾಪಿತ ಪಡಿಸಲಾದ ವಿಷಯಗಳನ್ನೇ ಸತ್ಯಗಳೆಂದು ನಂಬಿಕೊಂಡು, ದೇಶದ ನಿಜ ನಾಯಕರನ್ನು ವಿಲನ್ಗಳೆಂಬಂತೆ ಕಾಣುತ್ತಿರುವ ಕಾಲಘಟ್ಟದಲ್ಲಿ ನಾವೀಗ ಇದ್ದೇವೆ.
ವಾದಕ್ಕಿಂತಲೂ ವಿತಂಡ ವಾದಗಳೇ ಹೆಚ್ಚು ಸದ್ದು ಮಾಡುತ್ತಿರುವ, ಸತ್ಯಕ್ಕಿಂತಲೂ ಹೆಚ್ಚು ಜನರಿಂದ ಹೇಳಲ್ಪಡುತ್ತಿರುವ ಸುಳ್ಳೇ ಹೆಚ್ಚು ವಿಜೃಂಭಿಸುತ್ತಿರುವ ಸಮಯದಲ್ಲಿ ಕೆಲವರಾದರೂ ಒಬ್ಬಂಟಿಯಾಗಾದರೂ ನಿಂತು ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅವರೆಡೆಗೆ ಕಿವಿಗೊಡಬೇಕಾದ ಅಗತ್ಯತೆ ಸಮಾಜಕ್ಕೆ ಇದೆ. ಅಂತಹಾ ಒಂದು ಪ್ರಯತ್ನ ವಾರಣಾಸಿಯಲ್ಲಿ ಇತ್ತೀಚೆಗೆ ದಾಖಲಾಗಿದೆ.
ಜನಪ್ರಿಯತೆ ಕಳೆದುಕೊಳ್ಳದ ಬದನಾಳು ಖಾದಿ!
ವಾರಣಾಸಿಯ ಸೆಂಟ್ರಲ್ ಹಿಂದು ಬಾಯ್ಸ್ ಶಾಲೆಯಲ್ಲಿ ಹನ್ನೊಂದನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಆಯುಷ್ ಚತುರ್ವೇದಿ ಮಾಡಿರುವ ಭಾಷಣ ಭಾರಿ ವೈರಲ್ ಆಗಿದ್ದು, ಟ್ವಿಟ್ಟರ್, ಫೇಸ್ಬುಕ್ಗಳಲ್ಲಿ ಬಿಸಿ ದೋಸೆಯಂತೆ ಶೇರ್ ಆಗುತ್ತಿದೆ. ಕೇವಲ 2.19 ನಿಮಿಷದ ಭಾಷಣದಲ್ಲಿ ಆ ವಿದ್ಯಾರ್ಥಿ ಹೇಳಿದ ವಿಷಯಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಇಲ್ಲಿ ನೀಡಲಾಗಿದೆ.
'ಯಾವ ಆಂಗ್ಲ ಆ ವ್ಯಕ್ತಿಯನ್ನು ರೈಲಿನ ಬೋಗಿಯಿಂದ ಹೊರಗೆ ಬಿಸಾಡಿದನೊ ಅವನಿಗೆ ಅಂದು ಗೊತ್ತಿರಲಿಲ್ಲ, ಹೊರಗೆ ತಳ್ಳಲ್ಪಟ್ಟ ವ್ಯಕ್ತಿ ಒಂದು ದಿನ ಇಡೀಯ ವಿಶ್ವದಿಂದ ಆಂಗ್ಲರನ್ನು ಹೊರಗೆ ಓಡಿಸಲು ಕಾರಣಕರ್ತನಾಗುತ್ತಾನೆಂದು, ಗೊತ್ತಿದ್ದಿದ್ದರೆ ಆತ , ಗಾಂಧಿಯನ್ನು ಹೊರಗೆ ತಳ್ಳುತ್ತಿರಲಿಲ್ಲ'.
|
'ಗಾಂಧಿ ದೇಶದವರೇ ಅವರ ಬಗ್ಗೆ ತಿಳಿದುಕೊಂಡಿಲ್ಲ'
'ಎಂತಹಾ ವಿಡಂಬನೆ ಇದು, ಗಾಂಧಿ ಹುಟ್ಟಿದ ದೇಶದ ಜನರೇ ಗಾಂಧಿ ಬಗ್ಗೆ ಕಡಿಮೆ ಓದಿದ್ದಾರೆ ಮತ್ತು ತಿಳಿದುಕೊಂಡಿದ್ದಾರೆ. ಹ್ಯಾರಿ ಪಾಟರ್, ಚೇತನ್ ಭಗತ್ ಪುಸ್ತಕಗಳನ್ನು ಹಗಲು-ರಾತ್ರಿ ಎನ್ನದೆ ಓದುವ ಭಾರತದ ಯುವ ಪೀಳಿಗೆ, ಗಾಂಧಿ ಬಗ್ಗೆ ಓದಿಬಿಟ್ಟಿದ್ದರೆ ಇಂದಿನ ಯುವಪೀಳಿಗೆಯ ವಿಧಾನವೇ ಬೇರೆಯಾಗಿಬಿಟ್ಟಿರುತ್ತಿತ್ತು'.
'ಗಾಂಧಿ ಅವರ ಹೇ ರಾಮ್ ನಿಂದ ಯಾರಿಗೂ ಭಯ ಆಗುತ್ತಿರಲಿಲ್ಲ'
'ನಾವು ಗಾಂಧಿ ಕುರಿತು ಓದಲಿಲ್ಲ, ಹಾಗಾಗಿ ಇಂದು ವಾಟ್ಸ್ಆಫ್, ಫೇಸ್ಬುಕ್ ಜ್ಞಾನವೇ ನಮ್ಮನ್ನು ಸುತ್ತುವರೆದಿದೆ. ಇದರ ಕಾರಣದಿಂದಾಗಿಯೇ ವಿಭಜನೆಯ ಮುಖ್ಯ ಕಾರಣ ಗಾಂಧಿ ಎಂದು ವಾದಿಸಲಾಗುತ್ತಿದೆ, ಗಾಂಧಿ ಮುಸ್ಲಿಂ ಪರ, ಹಿಂದು ವಿರೋಧಿ ಎಂಬಂತೆ ಚಿತ್ರಿಸಲಾಗುತ್ತಿದೆ. ಆದರೆ ನಾನು ಹೇಳಿಬಿಡುತ್ತೇನೆ ಗಾಂಧಿ ಗಿಂತಲೂ ಉತ್ತಮ ಹಿಂದು ಮತ್ತೊಬ್ಬರಿರಲಿಲ್ಲ, ಆದರೆ ಗಾಂಧಿ ಹೇಳುತ್ತಿದ್ದ 'ಹೇ ರಾಮ್' ನಿಂದ ಉಳಿದ ಧರ್ಮದ ಜನ ಭಯಪಡುತ್ತಿರಲಿಲ್ಲ, ಏಕೆಂದರೆ ಗಾಂಧಿ ಭಾರತದಲ್ಲಿ ಧರ್ಮ ಸಾಮರಸ್ಯದ ಪ್ರತೀಕದಂತಿದ್ದರು'.
ಗಾಂಧಿ ಮೌಲ್ಯ ಪಾಲಿಸುವ ಮೋದಿ: ಮುಸ್ಲಿಂ ಮುಖಂಡನ ಶ್ಲಾಘನೆಯಿಂದ 'ಕೈ'ಗೆ ಮುಜುಗರ
'ಇಂದಿನ ದಿನಗಳಲ್ಲಿ ಅಹಿಂಸೆ ಬಗ್ಗೆ ಕೆಟ್ಟ ಅಭಿಪ್ರಾಯವಿದೆ'
'ಇಂದಿನ ದಿನಗಳಲ್ಲಿ ಅಹಿಂಸೆಯನ್ನು ಪುಕ್ಕಲುತನ, ಕೈಲಾಗದವರ ಕಾರ್ಯವೆಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಆದರೆ ನೆನಪಿರಲಿ, ವಿಶ್ವದ ಅತಿ ದೊಡ್ಡ ಸೇನೆಯನ್ನು ಆಯುಧಗಳಿಂದ ಸೋಲಿಸಲು ಸಾಧ್ಯವಿಲ್ಲ. ಅದಕ್ಕೆ ಅವರಿಗಿಂತಲೂ ದೊಡ್ಡ ಅಸ್ತ್ರದ ಅವಶ್ಯಕತೆ ಇರುತ್ತದೆ, ಅದುವೇ ಅಹಿಂಸೆ. 'ಕಣ್ಣಿನ ಬದಲಿಗೆ ಕಣ್ಣು ಎಂದು ಚುಚ್ಚುತ್ತಾ ಹೋದರೆ ಪೂರ್ತಿ ಪ್ರಪಂಚ ಕುರುಡಾಗುತ್ತದೆ' ಎಂಬುದು ಗಾಂಧಿ ಅವರ ನಂಬಿಕೆ ಆಗಿತ್ತು, ಅವರು ಮತ್ತೊಂದು ಮಾತು ಹೇಳಿದ್ದರು, 'ಯಾವ ಶಿಕ್ಷಣ ವ್ಯಕ್ತಿತ್ವವನ್ನು ವಿಕಸನಗೊಳಿಸುವುದಿಲ್ಲವೊ ಅದು ಕೆಲಸಕ್ಕೆ ಬಾರದ ಶಿಕ್ಷಣ' ಎಂದಿದ್ದರು ಗಾಂಧಿ'
'ಗಾಂಧಿ ಕೇವಲ ಹೆಸರಲ್ಲ ಅದು ವಿಚಾರಧಾರೆ'
''ಗಾಂಧೀಜಿ ಮತ್ತು ಇನ್ನಿತರೆ ಅನೇಕ ನಾಯಕರುಗಳ ತ್ಯಾಗ, ಬಲಿದಾನಗಳಿಂದಾಗಿ ನಮಗೆ ಸ್ವಾತಂತ್ರ್ಯ ದೊರೆಯಿತು, ಆದರೆ ನಾವದೆಷ್ಟು ಗಾಂಧಿ ಅವರನ್ನು ಪ್ರೀತಿಸುತ್ತಿದ್ದೆವೆಂದರೆ ಸ್ವಾತಂತ್ರ್ಯ ಬಂದ ವರ್ಷದ ಒಳಗಾಗಿ ನಾವು ಅವರನ್ನು ಗುಂಡು ಹಾರಿಸಿ ಕೊಂದು ಸಮಾಧಿ ಕಟ್ಟಿಬಿಟ್ಟೆವು'. ಆದರೆ ಗಾಂಧಿ ಎಂದೂ ಸಾಯುವುದಿಲ್ಲ, ಗಾಂಧಿ ಕೇವಲ ವ್ಯಕ್ತಿಯಲ್ಲ ಗಾಂಧಿ ಎಂಬುದು ಆದರ್ಶ, ವ್ಯಕ್ತಿಗೆ ಸಾವಿದೆ, ಆದರೆ ಆದರ್ಶಕ್ಕೆ, ವಿಚಾರಕ್ಕೆ ಸಾವಿಲ್ಲ'.
ಕವನದ ಮೂಲಕ ಭಾಷಣ ಮುಗಿಸಿದ ಆಯುಶ್
'ದೇವರು ಇದ್ದಾನೋ ಇಲ್ಲವೊ, ಕನಸುಗಳು ನನಸಾಗುವುವೊ ಇಲ್ಲವೊ ಗೊತ್ತಿಲ್ಲ. ಕಲ್ಲುಗಳು ಕರಗುವುದಿಲ್ಲವೆಂದು ನನಗೂ ಗೊತ್ತಿದೆ. ಆದರೆ ನಾನು ಕಾಯುತ್ತಿದ್ದೇನೆ, ಧ್ವನಿಯಲ್ಲಾದರೂ ಬದಲಾವಣೆ ಬರುತ್ತದೇನೋ ಎಂದು' ಎಂದು ದುಷ್ಯಂತ್ ಕುಮಾರ್ ಅವರ ಕನವದ ಸಾಲುಗಳನ್ನು ಹೇಳಿ ಭಾಷಣ ಮುಗಿಸಿದರು .