ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿರುದ್ಧ 16.5 ಕೋಟಿ ಭೂ ಅವ್ಯವಹಾರದ ಆರೋಪ
ಲಕ್ನೋ, ಜೂನ್ 14: ಕಳೆದ ವರ್ಷ ಕೇಂದ್ರ ಸರ್ಕಾರ ಸ್ಥಾಪಿಸಿದ ರಾಮಮಂದಿರ ಟ್ರಸ್ಟ್ ವಿರುದ್ಧ ಈಗ ಗಂಭೀರ ಭೂಹಗರಣದ ಆರೋಪ ಕೇಳಿ ಬಂದಿದೆ. ಉತ್ತರಪ್ರದೇಶದ ವಿರೋಧ ಪಕ್ಷಗಳಾದ ಸಮಾಜವಾದಿ ಹಾಗೂ ಆಮ್ ಆದ್ಮಿ ಪಕ್ಷ ಈ ಆರೋಪವನ್ನು ಮಾಡಿದ್ದು ಕಳೆದ ಮಾರ್ಚ್ ತಿಂಗಳನಲ್ಲಿ ಟ್ರಸ್ಟ್ ಈ ಅವ್ಯವಹಾರವನ್ನು ಮಾಡಿದೆ ಎಂದಿದೆ.
ಆಸ್ತಿ ಖರೀದಿಯ ಸಂದರ್ಭದಲ್ಲಿ ಟ್ರಸ್ಟ್ ಇಬ್ಬರು ಡೀಲರ್ಗಳಿಂದ 18.5 ಕೋಟಿ ರೂಪಾಯಿಗೆ ಖರೀದಿಸಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಈ ಕೆಲವೇ ನಿಮಿಷಗಳ ಮುನ್ನ ಈ ಆಸ್ತಿಯನ್ನು ಈ ಡೀಲರ್ಗಳು 2 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು. ಆ ನಂತರ ಟ್ರಸ್ಟ್ ಈ ದೊಡ್ಡ ಮೊತ್ತವನ್ನು ನೀಡಿ ಖರೀದಿಸಿದೆ. ಈ ಮೂಲಕ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಟ್ರಸ್ಟ್ ನಿರಾಕರಿಸಿದೆ.
ನೇಪಾಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ!
ಪ್ರಧಾನಿ ನರೇಂದ್ರ ನೇತೃತ್ವದ ಕೇಂದ್ರ ಸರ್ಕಾರ ಈ ಟ್ರಸ್ಟ್ಅನ್ನು 2020ರ ಫೆಬ್ರವರಿ ತಿಂಗಳಿನಲ್ಲಿ ಸ್ಥಾಪನೆ ಮಾಡಿತು. ಸುಪ್ರೀಮ್ ಕೋರ್ಟ್ ತೀರ್ಪಿನಂತೆ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಈ ಟ್ರಸ್ಟ್ನ ಮೂಲಕ ಮಾಡಲಾಗುತ್ತಿದೆ. ಇದರಲ್ಲಿ 15 ಮಂದಿ ಸದಸ್ಯರಿದ್ದು ಇದರಲ್ಲಿ 12 ಮಂದಿ ಸದಸ್ಯರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಉತ್ತರ ಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಭಾನುವಾರ ಅಯೋಧ್ಯೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಆರೋಪಗಳನ್ನು ಮಾಡಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರ ಹಾಗೂ ಟ್ರಸ್ಟ್ನ ಕೆಲ ಸದಸ್ಯರ ಸಹಕಾರದೊಂದಿಗೆ ಈ ಅವ್ಯವಹಾರವನ್ನು ನಡೆಸಲಾಗಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳನ್ನು ಕೂಡ ಪ್ರದರ್ಶಿಸಿದ ಪವನ್ ಪಾಂಡೆ ಈ ವ್ಯವಹಾರಕ್ಕೆ ಸಾಕ್ಷಿಗಳಾಗಿ ಅಯೋಧ್ಯೆಯ ಮೇಯರ್ ಹಾಗೂ ಟ್ರಸ್ಟ್ನ ಸದಸ್ಯರೊಬ್ಬರು ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
"ಕೆಲವೇ ನಿಮಿಷಗಳಲ್ಲಿ ಈ ಆಸ್ತಿಯ ಬೆಲೆ ₹ 2 ಕೋಟಿಯಿಂದ ₹ 18 ಕೋಟಿಗೆ ಏರಿದೆ ಎಂದರೆ ಅದರ ಅರ್ಥವೇನು? ಅಂಥಾದ್ದು ಅಲ್ಲಿ ಏನಾಯಿತು? ಇದರರ್ಥ ₹ 16.5 ಕೋಟಿಗಳಷ್ಟು ಲೂಟಿ ನಡೆದಿದೆ ಎಂಬುದು. ಇದನ್ನು ಸಿಬಿಐ ವಿಚಾರಣೆ ನಡೆಸಬೇಕಿದೆ" ಎಂದು ಪವನ್ ಪಾಂಡೆ ಗಂಭೀರ ಆರೋಪವನ್ನು ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಜನರು ಕೋಟ್ಯಂತರ ರೂಪಾಯಿಯನ್ನು ದಾನವಾಗಿ ನೀಡಿದ್ದಾರೆ. ತಮ್ಮ ಉಳಿತಾಯದ ಹಣವನ್ನು ಅವರು ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ. ಆದರೆ ಅವರು ನೀಡಿದ ಹಣಕ್ಕೆ ಇದಾ ನೀವು ನೀಡುತ್ತಿರುವ ಗೌರವ? ಇದು ದೇಶದ 120 ಕೋಟಿ ಜನರಿಗೆ ನೀವು ಮಾಡಿದ ಅವಮಾನ" ಎಂದು ಪವನ್ ಪಾಂಡೆ ತಿವಿದಿದ್ದಾರೆ.
ಇನ್ನು ಮತ್ತೊಂದೆಡೆ ಎಎಪಿ ಪಕ್ಷದ ನಾಯಕ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಕೂಡ ಪ್ರತ್ಯೇಕ ಪತ್ರಿಕಾಗೋಷ್ಠಿ ಕರೆದು ಇದೇ ಆರೋಪವನ್ನು ಮಾಡಿದ್ದಾರೆ. "ಶ್ರೀರಾಮ ದೇವರ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಎಂದು ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ಆದರೆ ಈ ದಾಖಲೆಗಳು ಕೋಟ್ಯಂತರ ರೂಪಾಯಿಯ ಅವ್ಯವಹಾರ ನಡೆದಿರುವುದನ್ನು ಸ್ಪಷ್ಟಪಡಿಸುತ್ತಿದೆ" ಎಂದಿದ್ದಾರೆ.
ಆದರೆ ಈ ಆರೋಪಗಳನ್ನು ಟ್ರಸ್ಟ್ ನೇರವಾಗಿ ನಿರಾಕರಿಸಿದೆ. "ಈ ರೀತಿಯ ಆರೋಪಗಳನ್ನು ಶತಮಾನಗಳಿಂದಲೂ ನಡೆಸಲಾಗುತ್ತಿದೆ. ಕೆಲವರು ನಮ್ಮನ್ನು ಮಹಾತ್ಮ ಗಾಂಧಿ ಹತ್ಯೆ ವಿಚಾರವಾಗಿಯೂ ಆರೋಪ ಮಾಡಿದ್ದಾರೆ. ಆದರೆ ನಾವು ಈ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಕೂಡ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ" ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯದರ್ಶಿ ವಿಹೆಚ್ಪಿ ನಾಯಕ ಚಂಪತ್ ರಾಯ್ ಪ್ರತಿಕ್ರಿಯಿಸಿದ್ದಾರೆ.