ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 10 ಕೋಟಿ
ಲಕ್ನೋ, ಫೆಬ್ರವರಿ.11: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದ ಬೆನ್ನಲ್ಲೇ ದೇಗುಲ ನಿರ್ಮಾಣ ಕಾರ್ಯ ಚುರುಕು ಪಡೆದುಕೊಂಡಿದೆ. ಇದರ ಹಿನ್ನೆಲೆಯಲ್ಲಿ ಪಾಟ್ನಾದ ಮಹಾವೀರ ದೇವಸ್ಥಾನ ಮಂಡಳಿಯು ರಾಮಮಂದಿರ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಕಾಣಿಕೆ ನೀಡುವುದಾಗಿ ತಿಳಿಸಿದೆ.
ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಾಮಮಂದಿರ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದು, ಈ ಟ್ರಸ್ಟ್ ಗೆ ಕಾಣಿಕೆಯ ಹಣವನ್ನು ನೀಡಲಾಗುತ್ತದೆ ಎಂದು ಪಾಟ್ನಾದ ಮಹಾವೀರ ದೇವಸ್ಥಾನ ಮಂಡಳಿಯ ಕಾರ್ಯದರ್ಶಿ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕಿಶೋರ್ ಕುನಾಲ್ ತಿಳಿಸಿದ್ದಾರೆ.
ಫೆ.19ರಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೊದಲ ಸಭೆ
ಇನ್ನು, 10 ಕೋಟಿ ರೂಪಾಯಿ ಕಾಣಿಕೆಯನ್ನು ವಿವಿಧ ಹಂತಗಳಲ್ಲಿ ನೀಡುವುದಾಗಿ ಕಿಶೋರ್ ಕುನಾಲ್ ತಿಳಿಸಿದ್ದಾರೆ. ಪ್ರಾಥಮಿಕವಾಗಿ 2 ಕೋಟಿ ರೂಪಾಯಿ ಚೆಕ್ ನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಗೆ ನೀಡಲಾಗುತ್ತದೆ. ಉಳಿದ ಹಣವನ್ನು ನೀಡುವುದಕ್ಕೆ ಕಾಲಾವಕಾಶವನ್ನು ಕೋರಲಾಗಿದೆ.
ಚಿನ್ನದಲ್ಲೇ ಆಗಬೇಕು ದೇಗುಲ ಗರ್ಭಗುಡಿ:
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ದೇವಸ್ಥಾನದ ಗರ್ಭಗುಡಿಯು ಚಿನ್ನದ ಲೇಪನದಿಂಲೇ ಆಗಬೇಕು ಎಂದು ಕಿಶೋರ್ ಕುನಾಲ್ ಒತ್ತಾಯಿಸಿದ್ದಾರೆ. ಬೇಕಿದ್ದಲ್ಲಿ ಚಿನ್ನದ ಗರ್ಭಗುಡಿ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ವೆಚ್ಚವನ್ನು ಪಾಟ್ನಾದ ಮಹಾವೀರ ದೇವಸ್ಥಾನ ಮಂಡಳಿಯೇ ವಹಿಸಿಕೊಳ್ಳಲಿದೆ ಎಂದು ದೇವಸ್ಥಾನ ಮಂಡಳಿಯ ಕಾರ್ಯದರ್ಶಿ ಕಿಶೋರ್ ಕುನಾಲ್ ತಿಳಿಸಿದ್ದಾರೆ.
ಇನ್ನು, ಖಾಸಗಿ ಮಾಧ್ಯಮದ ಜೊತೆ ಮಾತನಾಡಿರುವ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟಿ ಕಾಮೇಶ್ವರ ಚೌಪಾಲ್, ಮುಂದಿನ ಎರಡು ವರ್ಷಗಳಲ್ಲೇ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, 2022ರ ವೇಳೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ನವೆಂಬರ್.09, 2019ರಲ್ಲಿ ಅಯೋಧ್ಯಾ ರಾಮಮಂದಿರ ಕುರಿತು ತೀರ್ಪು ನೀಡಿದ ಸುಪ್ರೀಂಕೋರ್ಟ್, 67 ಎಕರೆ ಪ್ರದೇಶದಲ್ಲಿ ರಾಮಜನ್ಮ ಭೂಮಿ ನಿರ್ಮಾಣಕ್ಕೆ ಅನುಮತಿ ನೀಡಿತ್ತು.