ಅಯೋಧ್ಯೆ ಭೂಮಿಪೂಜೆಗೆ ಆಮಂತ್ರಿತ ಈ 'ವಿಶೇಷ ವ್ಯಕ್ತಿ'ಯ ಕಿರು ಪರಿಚಯ
ಲಕ್ನೋ, ಆ 4: ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿಪೂಜೆಗೆ ಪೂರ್ವ ತಯಾರಿಗಳು ಭರದಿಂದ ಸಾಗುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.
Recommended Video
ಈಗಾಗಲೇ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳ ಪಟ್ಟಿ ಅಂತಿಮವಾಗಿದ್ದು, ಮುಸ್ಲಿಂ ಸಮುದಾಯದ ಕೆಲವು ಪ್ರಮುಖರನ್ನೂ ಆಹ್ವಾನಿಸಲಾಗಿದೆ. ಈ ಪಟ್ಟಿಯಲ್ಲಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಷರೀಫ್ ಕೂಡಾ ಸೇರಿದ್ದಾರೆ.
ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಯಾರಿಗೆಲ್ಲಾ ಆಹ್ವಾನ? ಇಲ್ಲಿದೆ ಪಟ್ಟಿ
ಆಗಸ್ಟ್ 05ರ ಮಧ್ಯಾಹ್ನ 12.15ಕ್ಕೆ ಸಲ್ಲುವ 'ಅಭಿಜಿತ್ ಮುಹೂರ್ತ' ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಸಾವಿರಾರು ಅನಾಥ ಶವಗಳ ಸಂಸ್ಕಾರ ನಡೆಸಿರುವ, ಪದ್ಮಶ್ರೀ ಪುರಸ್ಕೃತ ಮೊಹಮ್ಮದ್ ಷರೀಫ್ ಅವರಿಗೆ, ಶ್ರೀರಾಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನ ಕಳುಹಿಸಿದೆ. ಇನ್ನು, ಈ ಐತಿಹಾಸಿಕ ಕಾರ್ಯಕ್ರಮದ ಮೊದಲ ಆಹ್ವಾನ ಪತ್ರಿಕೆ, ಜಮೀನು ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿಗೆ ನೀಡಲಾಗಿದೆ. ಮೊಹಮ್ಮದ್ ಷರೀಫ್ ಬಗ್ಗೆ, ಮುಂದೆ..
ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಷರೀಫ್
ಅಯೋಧ್ಯೆ (ಫೈಜಾಬಾದ್) ಮೂಲದ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಷರೀಫ್ ಅವರಿಗೆ ಆಮಂತ್ರಣ ಹೋಗಿದೆ. ಅವರ ಕುಟುಂಬದ ಪ್ರಕಾರ, ಇದುವರೆಗೆ ಷರೀಫ್, 25 ಸಾವಿರಕ್ಕೂ ಹೆಚ್ಚು, ಅನಾಥ ಶವಗಳ ಶವಸಂಸ್ಕಾರ ನಡೆಸಿದ್ದಾರೆ. ಈ ಕಾರ್ಯ ನಡೆಸುವುದಕ್ಕೆ ಯಾವುದೇ ಜಾತಿಧರ್ಮವನ್ನು ಷರೀಫ್ ನೋಡಲಿಲ್ಲ.
ಸ್ಥಳೀಯವಾಗಿ ಷರೀಫ್ ಚಾಚಾ ಎಂದೇ ಹೆಸರು
ಸ್ಥಳೀಯವಾಗಿ ಷರೀಫ್ ಚಾಚಾ ಎಂದೇ ಹೆಸರಾಗಿರುವ ಇವರು ಮೂರು ಸಾವಿರಕ್ಕೂ ಹೆಚ್ಚು ಹಿಂದೂ, ಒಂದೂವರೆ ಸಾವಿರಕ್ಕೂ ಅಧಿಕ ಮುಸ್ಲಿಂ ಸಮುದಾಯದವರ ಶವಸಂಸ್ಕಾರವನ್ನು ನಡೆಸಿದ್ದಾರೆ. ಎಂಬತ್ತು ವರ್ಷದ ಇವರು, ಕಳೆದ 27ವರ್ಷಗಳಿಂದ ಈ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ.
ರಾಮ ಮಂದಿರ ಭೂಮಿ ಪೂಜೆಗೆ ಕರ್ನಾಟಕದ 8 ಗಣ್ಯರಿಗೆ ಆಹ್ವಾನ
ಯಾವ ಹಿಂದೂ, ಯಾವ ಮುಸ್ಲಿಂ, ಮೊದಲು ಮಾನವೀಯತೆ
"ಯಾವ ಹಿಂದೂ, ಯಾವ ಮುಸ್ಲಿಂ, ಮೊದಲು ಮಾನವೀಯತೆ"ಎಂದು ಷರೀಫ್, ಭೂಮಿಪೂಜೆಗೆ ಆಹ್ವಾನ ಬಂದಿದ್ದಕ್ಕೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ಸೈಕಲ್ ಮೆಕ್ಯಾನಿಕ್ ಆಗಿರುವ ಷರೀಫ್, ಸಣ್ಣ ಮನೆಯೊಂದರಲ್ಲಿ ಸಂಸಾರ ನಡೆಸುತ್ತಿದ್ದಾರೆ. ಮೊದಮೊದಲು ಅನಾಥ ಶವಗಳನ್ನು ತನ್ನ ಸೈಕಲಿನಲ್ಲೇ ಸ್ಮಶಾನಕ್ಕೆ ಷರೀಫ್ ತೆಗೆದುಕೊಂಡು ಹೋಗುತ್ತಿದ್ದರು.
ಮಗನ ಶವ ಪಕ್ಕದ ರೈಲ್ವೇ ಟ್ರ್ಯಾಕ್ ನಲ್ಲಿ ಬಿದ್ದಿತ್ತು
"ಹಲವು ವರ್ಷಗಳ ಹಿಂದೆ, ನನ್ನ ಸ್ವಂತ ಮಗನ ಶವ ಪಕ್ಕದ ರೈಲ್ವೇ ಟ್ರ್ಯಾಕ್ ನಲ್ಲಿ ಬಿದ್ದಿತ್ತು. ಪ್ರಾಣಿಗಳು ದೇಹವನ್ನು ಅರ್ಧಬಂರ್ಧ ತಿಂದು ಹಾಕಿದ್ದವು. ಆ ದೇಹದ ಸಂಸ್ಕಾರ ನಡೆಸಿದ ನಂತರ, ಯಾರಿಗೂ ಇಂತಹ ಸ್ಥಿತಿ ಬಾರದೇ ಇರಲಿ, ಎಂದು ಅನಾಥ ಶವಗಳ ಸಂಸ್ಕಾರಕ್ಕೆ ಮುಂದಾದೆ" ಎಂದು ಷರೀಫ್ ಹೇಳುತ್ತಾರೆ.
ಸಾಮಾಜಿಕ ಕೆಲಸಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಮೊಹಮ್ಮದ್ ಷರೀಫ್
ಸಾಮಾಜಿಕ ಕೆಲಸಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಮೊಹಮ್ಮದ್ ಷರೀಫ್, ರಾಮ ಮಂದಿರದ ಭೂಮಿಪೂಜೆಯಲ್ಲಿ ಭಾಗವಹಿಸುವ ಸಾಧ್ಯತೆ ಕಮ್ಮಿ. ಕಾರಣ ವಯಸ್ಸು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.