ಸಿಎಎ ವಿರೋಧಿ ಭಾಷಣ: ಡಾ. ಕಫೀಲ್ ಖಾನ್ ಬಿಡುಗಡೆಗೆ ಹೈಕೋರ್ಟ್ ಆದೇಶ
ಲಕ್ನೋ, ಸೆಪ್ಟೆಂಬರ್ 1: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದಡಿ ಬಂಧಿತರಾಗಿದ್ದ ಉತ್ತರ ಪ್ರದೇಶದ ವೈದ್ಯ ಡಾ. ಕಫೀಲ್ ಖಾನ್ ಅವರ ತತ್ಕ್ಷಣದ ಬಿಡುಗಡೆಗೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
ಕಫೀಲ್ ಖಾನ್ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಈ ವರ್ಷದ ಆರಂಭದಲ್ಲಿ ದಾಖಲು ಮಾಡಲಾಗಿದ್ದ ಪ್ರಕರಣಗಳನ್ನು ಸಹ ಕೈಬಿಡುವಂತೆಯೂ ಅದು ಸೂಚನೆ ನೀಡಿದೆ. 2019ರ ಡಿಸೆಂಬರ್ 10ರಂದು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣಕ್ಕಾಗಿ ಕಫೀಲ್ ಖಾನ್ ಅವರನ್ನು ಜನವರಿಯಲ್ಲಿ ಬಂಧಿಸಲಾಗಿತ್ತು.
ಸಿಎಎ ಪ್ರತಿಭಟನೆ ವೇಳೆ ಅವಹೇಳನಕಾರಿ ಹೇಳಿಕೆ: ಡಾ. ಕಫೀಲ್ ಖಾನ್ ಬಂಧನ
ಅಲಿಗಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದಂತೆ 2020ರ ಫೆಬ್ರವರಿ 13ರಂದು ಅವರ ವಿರುದ್ಧ ಎನ್ಎಸ್ಎ ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಆಗಸ್ಟ್ 16ರಂದು ಎನ್ಎಸ್ಎ ಅಡಿಯಲ್ಲಿನ ಬಂಧನವನ್ನು ಎರಡನೆಯ ಬಾರಿಗೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿತ್ತು.
ಇದರ ವಿರುದ್ಧ ಕಫೀಲ್ ಖಾನ್ ಅವರ ತಾಯಿ ನುಜತ್ ಪರ್ವೀನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾಯಮೂರ್ತಿ ಸೌಮಿತ್ರಾ ದಯಾಳ್ ಅವರನ್ನು ಒಳಗೊಂಡ ನ್ಯಾಯಪೀಠ, ಕಫೀಲ್ ಖಾನ್ ಬಂಧನದ ಅವಧಿ ವಿಸ್ತರಣೆ ಅಕ್ರಮ ಎಂದು ತೀರ್ಪಿತ್ತಿತು.
ವ್ಯಕ್ತಿಯಿಂದ ರಾಷ್ಟ್ರೀಯ ಭದ್ರತೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆ ಇದೆ ಎಂದು ಅಧಿಕಾರಿಗಳಿಗೆ ಅನಿಸಿದರೆ ಎನ್ಎಸ್ಎ ಅಡಿ ಆರೋಪಪಟ್ಟಿ ದಾಖಲು ಮಾಡದೆಯೇ 12 ತಿಂಗಳವರೆಗೆ ಬಂಧನದಲ್ಲಿರಿಸಲು ಅವಕಾಶವಿದೆ. ಖಾನ್ ಅವರನ್ನು ಐಪಿಸಿ ಸೆಕ್ಷನ್ 153ಎ ಅಡಿ (ಧರ್ಮದ ಆಧಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದನೆ) ಪ್ರಕರಣ ದಾಖಲು ಮಾಡಲಾಗಿತ್ತು. ನಂತರ 153 ಬಿ ಮತ್ತು 505 (2) ಸೆಕ್ಷನ್ಗಳನ್ನು ಎಫ್ಐಆರ್ನಲ್ಲಿ ಸೇರಿಸಲಾಗಿತ್ತು.
ಉತ್ತರ ಪ್ರದೇಶದ ಗೋರಖ್ಪುರದ ಆಸ್ಪತ್ರೆಯೊಂದರಲ್ಲಿ ಸುಮಾರು 71 ಶಿಶುಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕಫೀಲ್ ಖಾನ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಬಂಧಿಸಲಾಗಿತ್ತು.