ಎಷ್ಟೇ ಪ್ರತಿಭಟನೆ ಮಾಡಿ, ಸಿಎಎಯಿಂದ ಹಿಂದೆ ಸರಿಯುವ ಮಾತೇ ಇಲ್ಲ: ಅಮಿತ್ ಶಾ
ಲಕ್ನೋ, ಜನವರಿ 21: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿದ್ದರೂ ಈ ವಿವಾದಾತ್ಮಕ ಕಾಯ್ದೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ.
ಲಕ್ನೋದಲ್ಲಿ ಸಿಎಎ ಪರ ಸಮಾವೇಶದಲ್ಲಿ ಮಾತನಾಡಿದ ಅವರು, 'ಸಿಎಎ ವಿಚಾರದಲ್ಲಿ ಸರ್ಕಾರ ಮತ್ತೆ ಹಿಂದಡಿ ಇಡುವುದಿಲ್ಲ ಎಂದು ಪುನಃ ಹೇಳಲು ಬಯಸುತ್ತೇನೆ. ಪ್ರತಿಭಟನೆ ಮಾಡಲು ಬಯಸುವವರು ಬೇಕಾದರೆ ಅದನ್ನು ಮುಂದುವರಿಸಿಕೊಳ್ಳಲಿ' ಎಂದರು.
ಪಾಕಿಸ್ತಾನದ ಭಾಷೆ, ರಾಹುಲ್ ಗಾಂಧಿ ಭಾಷೆ ಒಂದೇ- ಅಮಿತ್ ಶಾ
ಈ ಕಾಯ್ದೆಯು ದೇಶದ ಜನರಿಗೆ ಯಾವುದೇ ರೀತಿ ಸಂಬಂಧಿಸಿದ್ದಲ್ಲ ಎಂದ ಅವರು, ಸಿಎಎ ಕುರಿತು ವಿರೋಧಪಕ್ಷಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದು ಹರಿಹಾಯ್ದರು. ಸಿಎಎದಲ್ಲಿ ಯಾರದ್ದೇ ಪೌರತ್ವವನ್ನು ಕಿತ್ತುಕೊಳ್ಳಲು ಅವಕಾಶವಿಲ್ಲ. ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಮತ್ತು ಟಿಎಂಸಿಗಳು ಸಿಎಎ ವಿರುದ್ಧ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಆರೋಪಿಸಿದರು.
ನಿಲುವು ಬದಲಾಗುವುದಿಲ್ಲ
ಸಿಎಎ ಕುರಿತಾದ ಚರ್ಚೆಗೆ ಬರುವಂತೆ ವಿರೋಧಪಕ್ಷಗಳಿಗೆ ಸವಾಲು ಹಾಕಿದ ಅವರು, ಏನೇ ಬಂದರೂ ಕಾಯ್ದೆಯ ನಿಲುವು ಬದಲಾಗುವುದಿಲ್ಲ ಎಂದು ಹೇಳಿದರು. 'ಅವರು ಅಲ್ಲಿ ಇಲ್ಲಿ ಹೇಳಿಕೊಳ್ಳಲಿ. ಕಾಯ್ದೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ಯಾರು ಪ್ರತಿಭಟನೆ ಮಾಡುತ್ತಾರೋ ಮಾಡಿಕೊಳ್ಳಲಿ. ನಾವು ವಿರೋಧಿಗಳಿಗೆ ಹೆದರುವುದಿಲ್ಲ. ನಾವು ಅದರಲ್ಲಿಯೇ ಹುಟ್ಟಿದ್ದೇವೆ' ಎಂದರು.
ಚರ್ಚೆಗೆ ಬರುವಂತೆ ಸವಾಲು
'ಮಮತಾ ದೀದಿ, ರಾಹುಲ್ ಜಿ, ಅಖಿಲೇಶ್ಜಿ, ಮಾಯಾವತಿ ಜಿ, ದೇಶದ ಯಾವುದೇ ಭಾಗದಲ್ಲಿ ಪೌರತ್ವ ಕಾಯ್ದೆಯ ಕುರಿತು ಚರ್ಚೆಗೆ ಸವಾಲು ಹಾಕುತ್ತೇನೆ. ಯಾರದ್ದೇ ಪೌರತ್ವವನ್ನು ಕಸಿದುಕೊಳ್ಳುವ ಬಗ್ಗೆ ಮಸೂದೆಯ ಯಾವುದಾದರೂ ಭಾಗ ಹೇಳಿದ್ದರೆ ತಾಕತ್ತಿದ್ದರೆ ತೋರಿಸಿ' ಎಂದು ಸವಾಲೊಡ್ಡಿದರು.
ಬಿಜೆಪಿಯ ಸಿಎಎ ಜನ ಜಾಗೃತಿ ಅಭಿಯಾನ ಜ.26ರ ತನಕ ವಿಸ್ತರಣೆ
ಮೌನಿ ಬಾಬಾ ಮಾತಾಡಲಿಲ್ಲ
'ಕಾಂಗ್ರೆಸ್ ಹಲವು ವರ್ಷಗಳಿಂದ ಪಾಕಿಸ್ತಾನದ ಅಕ್ರಮ ವಲಸೆ ಮತ್ತು ಭಯೋತ್ಪಾದನೆಗೆ ಅವಕಾಶ ನೀಡುತ್ತಿದೆ. ಆಲಿಯಾ, ಮಾಲಿಯಾ, ಜಮಾಲಿಯಾಗಳು ಪಾಕಿಸ್ತಾನದಿಂದ ಬಂದು ಇಲ್ಲಿ ಬಾಂಬ್ಗಳನ್ನು ಸ್ಫೋಟಿಸಿದರು. ಮನಮೋಹನ್ ಸಿಂಗ್ 'ಮೌನಿ ಬಾಬಾ' ಮಾತ್ರ ಒಂದೂ ಸದ್ದು ಮಾಡಲಿಲ್ಲ' ಎಂದು ಟೀಕಾಪ್ರಹಾರ ನಡೆಸಿದರು.
ಪಾಕ್, ಬಾಂಗ್ಲಾದಲ್ಲಿದ್ದವರು ಎಲ್ಲಿ ಹೋದರು?
'ದೇಶ ವಿಭಜನೆಯ ವೇಳೆ ಬಾಂಗ್ಲಾದೇಶದಲ್ಲಿ ಹಿಂದೂ, ಸಿಖ್, ಜೈನ ಮತ್ತು ಬೌದ್ಧರ ಸಂಖ್ಯೆ ಶೇ 30ರಷ್ಟಿತ್ತು. ಪಾಕಿಸ್ತಾನದ ಜನಸಂಖ್ಯೆಯಲ್ಲಿ ಶೇ 23ರಷ್ಟಿತ್ತು. ಆದರೆ ಇಂದು ಅದು ಕೇವಲ ಶೇ 7 ಮತ್ತು ಶೇ 3ರಷ್ಟಿದೆ. ಈ ಜನರೆಲ್ಲ ಎಲ್ಲಿಗೆ ಹೋದರು? ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರಿಗೆ ಈ ಪ್ರಶ್ನೆಕೇಳಲು ಬಯಸುತ್ತೇನೆ' ಎಂದರು.