ಉ.ಪ್ರ ಸಿಎಂ ಸ್ಥಾನಕ್ಕೆ ಯೋಗಿ ಆಯ್ಕೆ ಹಿಂದಿನ ರಹಸ್ಯ ಬಯಲು!
ಲಕ್ನೋ, ಜುಲೈ 28: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಚ್ಚರಿ ಮೂಡಿಸಿದ್ದ ಪ್ರಧಾನಿ ಮೋದಿ- ಅಮಿತ್ ಶಾ ಜೋಡಿ, ಉತ್ತರಪ್ರದೇಶದಂಥ ದೊಡ್ಡ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿಯೊಬ್ಬರನ್ನು ಅಂದು ಆಯ್ಕೆ ಮಾಡಿದ್ದೇಕೆ? ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.
ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಯಾಕೆ ಎಂಬುದನ್ನು ಸಮಾರಂಭವೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.
ಉತ್ತರಪ್ರದೇಶದ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ, ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕ ಹಿರಿಯರ ಹೆಸರುಗಳು ಕೇಳಿ ಬಂದಿತ್ತು. ಆದರೆ, ಗೋರಖ್ಪುರದ ದೇವಾಲಯದಲ್ಲಿ ಮುಖ್ಯ ಗುರುವಾಗಿದ್ದ ಮಹಂತ ಯೋಗಿ ಆದಿತ್ಯನಾಥ್ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂದು ಯಾರೂ ಊಹಿಸಿರಲಿಲ್ಲ.
ಲಕ್ನೋದಲ್ಲಿ ಭಾನುವಾರದಂದು ಸುಮಾರು 65,000 ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಂಡು ಮಾತನಾಡಿ,
"ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಅಂದು ಯೋಗಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮೋದಿ ಹಾಗೂ ನಾನು ಅಯ್ಕೆ ಮಾಡಿದಾಗ ಹಲವಾರು ಮಂದಿ ನನಗೆ ಫೋನ್ ಮಾಡಿ ಪ್ರಶ್ನಿಸಿದ್ದರು. ಯೋಗಿಯವರಿಗೆ ಒಂದು ಪುರಸಭೆ ಆಡಳಿತ ನಡೆಸಿದ ಅನುಭವವೂ ಇಲ್ಲ. ಅವರನ್ನು ಹೇಗೆ ಮುಖ್ಯಮಂತ್ರಿ ಹುದ್ದೆಗೆ ಏರಿಸುತ್ತಿದ್ದೀರಿ ಇಷ್ಟು ದೊಡ್ಡ ರಾಜ್ಯವನ್ನು ಯಾವ ನಂಬಿಕೆ ಮೇಲೆ ಅವರ ಕೈಗೆ ಒಪ್ಪಿಸುತ್ತಿದ್ದೀರಿ" ಎಂದಿದ್ದರು.
"ಅವರೆಲ್ಲರ ಮಾತು ನಿಜ, ಯೋಗಿಗೆ ಪುರಸಭೆಯ ಆಡಳಿತವೂ ಗೊತ್ತಿರಲಿಲ್ಲ. ದೇವಾಲಯವೊಂದರ ಮುಖ್ಯಸ್ಥರಾಗಿದ್ದವರು. ಹೀಗಿದ್ದರೂ ಯೋಗಿ ಆದಿತ್ಯನಾಥ್ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ನಿರ್ಧರಿಸಿದ್ದಕ್ಕೆ ಕಾರಣ, ಯೋಗಿ ಒಳ್ಳೆಯ ಕೆಲಸಗಾರ. ತಮ್ಮ ನೈತಿಕ ತತ್ತ್ವಗಳನ್ನುಳ ಕಾರ್ಯೋನ್ಮುಖಿ ಎಂಬ ಆಧಾರ ನಮಗೆ ಮುಖ್ಯವಾಯಿತು. ಆಡಳಿತ ಅನುಭವ ನಂತರ ಕಲಿತುಕೊಂಡರು" ಎಂದು ಹೇಳಿದರು.
'ಯೋಗಿ ಆದಿತ್ಯನಾಥ್ಅವರು ದೃಢ ಸಂಕಲ್ಪ, ಪರಿಶ್ರಮದ ಫಲ ಈಗ ಕಾಣುತ್ತಿದೆ. ಎಂಥದ್ದೇ ಸಂದರ್ಭ ಬರಲಿ ಅದಕ್ಕೆ ಹೊಂದಿಕೊಂಡು ನಿಭಾಯಿಸುವ ಶಕ್ತಿ ಅವರಿಗೆ ಇದೆ" ಎಂದು ಯೋಗಿಯನ್ನು ಅಮಿತ್ ಹೊಗಳಿದರು.