'ಕಾಂಗ್ರೆಸ್ ಮೈತ್ರಿಕೂಟ ಕನಸು ಭಗ್ನ, ಮಾಯಾವತಿಯಿಂದ ಹಿಂದೇಟು'
ನವದೆಹಲಿ, ಅಕ್ಟೋಬರ್ 03: ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಿದ್ಧ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಮತ್ತೊಮ್ಮೆ ಘೋಷಿಸುವ ಮೂಲಕ, ಕಾಂಗ್ರೆಸ್ಸಿನ ಮಹಾಮೈತ್ರಿಕೂಟದ ಕನಸಿಗೆ ಭಾರಿ ಪೆಟ್ಟು ಕೊಟ್ಟಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ತನ್ನ 22 ಅಭ್ಯರ್ಥಿಗಳನ್ನು ಮಾಯಾವತಿ ಘೋಷಿಸಿದ್ದರು.ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾತ್ರ ಹೇಳಿದ್ದರು.
ಕರ್ನಾಟಕ ಮತ್ತು ಛತ್ತೀಸ್ಗಡದಲ್ಲಿ ಬೇರೆ ಪಕ್ಷಗಳೊಂದಿಗೆ ಬಿಎಸ್ಪಿ ಮೈತ್ರಿ ಮಾಡಿಕೊಂಡಿದೆ. ಅದೇ ರೀತಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲೂ ಏಕಾಂಗಿಯಾಗಿ ಸ್ಪರ್ಧಿಸಲಿದೆ.
ಬಿಜೆಪಿಯ ಸೋಲಿಸುವ ಏಕೈಕ ಉದ್ದೇಶದಿಂದ ಎಲ್ಲ ರಾಜಿಗೂ ಸಿದ್ಧವಾಯ್ತೇ ಕಾಂಗ್ರೆಸ್?
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಉದ್ದೇಶದ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ಸಿನ ಉದ್ದೇಶವಲ್ಲ. ಮೈತ್ರಿಕೂಟದ ಪಕ್ಷಕ್ಕೆ ಹಾನಿಯಾಗುವುದನ್ನು ತಡೆಗಟ್ಟಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಮಾಯಾವತಿ ಹೇಳಿದರು.
ಮಾಯಾವತಿ ಮುನಿಸಿಗೆ ಕಾರಣವೇನು?: ಮಧ್ಯಪ್ರದೇಶದಲ್ಲಿ ಒಟ್ಟು 230 ಸೀಟ್ಗಳ ಪೈಕಿ 50 ಸೀಟುಗಳನ್ನು ಬಿಎಸ್ಪಿಗೆ ಬಿಟ್ಟುಕೊಡಬೇಕು ಎಂದು ಮಾಯಾವತಿ ಬೇಡಿಕೆ ಇಟ್ಟಿದ್ದರು. ಆದರೆ, ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.
ಬಿಎಸ್ಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಮಾಯಾವತಿ
ಲೋಕಸಭೆ ಚುನಾವಣೆ 2019ರಲ್ಲಿ ಮೋದಿ ನೇತೃತ್ವದ ಎನ್ಡಿಎ ಸೋಲಿಸಲು ವಿವಿಧ ರೀತಿಯಲ್ಲಿ ಯತ್ನಿಸುತ್ತಿರುವ ವಿರೋಧಿಗಳು ಈಗ ದಲಿತ ಮಹಿಳಾ ಪ್ರಧಾನಮಂತ್ರಿ ಎಂಬ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಬಹುಜನ ಸಮಾಜ ಪಕ್ಷದಿಂದ ಮಾಯಾವತಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. 2014ರ ಉತ್ತರಪ್ರದೇಶ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲದಿದ್ದರೂ, ಬಿಎಸ್ಪಿ ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಜತೆ ಕೈಜೋಡಿಸಿ, ಉತ್ತಮ ಫಲಿತಾಂಶ ಪಡೆಯುವಲ್ಲಿ ಪಕ್ಷ ಯಶಸ್ವಿಯಾಗಿದೆ.
ಮೈತ್ರಿಗೆ ಕಾಂಗ್ರೆಸ್ ಹಿಂದೇಟು ಹಾಕುತ್ತಿರುವುದೇಕೆ?
ಬಿಎಸ್ಪಿ ಪಕ್ಷವು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಲೋಕಸಭೆ ಚುನಾವಣೆಯಲ್ಲೂ ತಾನು ಕೇಳಿದಷ್ಟು ಸೀಟು ನೀಡಬೇಕು ಎಂಬ ಷರತ್ತು ವಿಧಿಸಿದೆ. ಆದರೆ ಕಾಂಗ್ರೆಸ್ ಗೆ ಅದು ಇಷ್ಟವಿಲ್ಲ. ಸದ್ಯಕ್ಕೆ ವಿಧಾನಸಭೆ ಚುನಾವಣೆ ಮುಗಿಯಲಿ, ನಂತರ ಲೋಕಸಭೆ ಚುನಾವಣೆಯ ಬಗ್ಗೆ ಚರ್ಚಿಸೋಣ ಎಂಬುದು ಕಾಂಗ್ರೆಸ್ ಹೇಳಿದೆ. ಆದರೆ ಇದನ್ನು ಕೇಳುವುದಕ್ಕೆ ಬಿಎಸ್ಪಿ ರೆಡಿಯಿಲ್ಲ, ಕಾರಣ, ಬಿಎಸ್ಪಿಗೆ ಸದ್ಯ ಸಮಾಜವಾದಿ ಪಕ್ಷದ ನೆರವು ಸಿಕ್ಕಿದೆ.
ಕಾಂಗ್ರೆಸ್ ಜತೆ ಮೈತ್ರಿಗೆ ಯಾರೂ ಸಿದ್ಧರಿಲ್ಲ
230 ವಿಧಾನಸಭಾ ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ಮ್ಯಾಜಿಕ್ ನಂಬರ್ 116 ಅನ್ನು ಕಾಂಗ್ರೆಸ್ ಒಂಟಿಯಾಗಿ ಸ್ಪರ್ಧಿಸಿ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಸ್ವತಃ ಕಾಂಗ್ರೆಸ್ಸೇ ಬಂದಿದೆ. ಆದ್ದರಿಂದ ಅದು ಬಿಎಸ್ಪಿ, ಎಸ್ಪಿ ಮತ್ತು ಗೊಂದ್ವಾನ ಗಣತಂತ್ರ ಪಕ್ಷ(ಜಿಜಿಪಿ) ಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಆದರೆ ಈ ಕುರಿತು ಇದುವರೆಗೂ ಯಾರನ್ನೂ ಕಾಂಗ್ರೆಸ್ ಮೈತ್ರಿಗೆ ಕರೆದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡರು ತಿಳಿಸಿದ್ದಾರೆ.
ಬಿಎಸ್ಪಿ ಹಾಗೂ ಎಸ್ಪಿ ಮೈತ್ರಿ ಅಬಾಧಿತ
'ಬಿಎಸ್ಪಿ ಜೊತೆಗಿನ ನಮ್ಮ ಮೈತ್ರಿ 2019ರಲ್ಲೂ ಮುಂದುವರಿಯಲಿದೆ. ಒಂದೊಮ್ಮೆ ಕೆಲವು ಸ್ಥಾನಗಳನ್ನು ಬಿಟ್ಟು ಕೊಡಬೇಕಾದರೂ ನಾವು ಬಿಟ್ಟುಕೊಡಲಿದ್ದೇವೆ. ಬಿಜೆಪಿ ಸೋಲನ್ನು ನಾವು ಖಚಿತಪಡಿಸಬೇಕಿದೆ," ಎಂದು ಕೈರಾನಾ ಚುನಾವಣೆ ಬಳಿಕ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಉತ್ತರಪ್ರದೇಶ ಹಾಗೂ ಕರ್ನಾಟಕದ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಿದ್ದು, ದೇಶಕ್ಕೆ ಪ್ರಥಮ ದಲಿತ ಪ್ರಧಾನಿಯನ್ನು ನೀಡುವುದು ನಮ್ಮ ಆಶಯ ಎಂದು ಬಿಎಸ್ಪಿ ಮುಖಂಡ ಪ್ರಕಾಶ್ ಸಿಂಗ್ ಹೇಳಿದ್ದಾರೆ.