ಮೈತ್ರಿಗೆ ಸೈ, ಯುಪಿ ಚುನಾವಣೆಯಲ್ಲಿ ಎಲ್ಲಾ ಸ್ಥಾನದಲ್ಲಿ ಸ್ಪರ್ಧೆ: ಚಂದ್ರಶೇಖರ್ ಆಜಾದ್
ಲಕ್ನೋ, ಆ.06: ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ತಮ್ಮ ಪಕ್ಷವು ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ದಲಿತ ನಾಯಕ ಮತ್ತು ಭೀಮ್ ಆರ್ಮಿಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ. ಹಾಗೆಯೇ ಇದೇ ಸಂದರ್ಭದಲ್ಲಿ ತಾನು ಮುಖ್ಯಮಂತ್ರಿಯಾಗುವ ಯಾವುದೇ ಆಕಾಂಕ್ಷೆಗಳನ್ನು ಹೊಂದಿಲ್ಲ ಮತ್ತು ಸ್ವತಃ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ತಿಳಿಸಿದ್ದಾರೆ.
ಶುಕ್ರವಾರ ಪಂಚಾಯತ್ ಆಜ್ ತಕ್ ನಲ್ಲಿ ಮಾತನಾಡಿದ ಚಂದ್ರಶೇಖರ್ ಆಜಾದ್ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಮ್ಮ ಉದ್ದೇಶಗಳನ್ನು ಘೋಷಿಸುವ ಯಾವುದೇ ಮಾತುಗಳನ್ನು ಆಡಲಿಲ್ಲ. ಬದಲಾಗಿ ಎಲ್ಲಾ 403 ಸ್ಥಾನಗಳಲ್ಲಿ ತಮ್ಮ ಪಕ್ಷ ಭೀಮ್ ಆರ್ಮಿ ಸ್ಪರ್ಧೆ ಮಾಡಲಿದೆ ಎಂದು ಮಾತ್ರ ಹೇಳಿದರು. ಹಾಗೆಯೇ ಈ ಸಂದರ್ಭದಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಚಂದ್ರಶೇಖರ್ ಆಜಾದ್ ತಳ್ಳಿಹಾಕಲಿಲ್ಲ.
ಬಿಹಾರ ಎನ್ಡಿಎ ಮೈತ್ರಿ ಪಕ್ಷ ಯುಪಿ ಚುನಾವಣೆಯಲ್ಲಿ ಕಣಕ್ಕೆ: ಆದರೆ ಬಿಜೆಪಿಯಿಂದ ಒಂದು ಷರತ್ತು
ಈ ಬಗ್ಗೆ ಆಜ್ ತಕ್ನಲ್ಲಿ ಮಾತನಾಡಿದ ದಲಿತ ನಾಯಕ ಚಂದ್ರಶೇಖರ್ ಆಜಾದ್, "ಉತ್ತರ ಪ್ರದೇಶ ಕೇಂದ್ರ ಸರ್ಕಾರದ ಮಾರ್ಗವನ್ನು ನಿರ್ಧರಿಸುತ್ತದೆ. ಈ ಬಿಜೆಪಿ ಆಡಳಿತದ ಕಳೆದ 4.5 ವರ್ಷಗಳಲ್ಲಿ ರಾಜ್ಯ ಮತ್ತು ರಾಜ್ಯದಲ್ಲಿರುವ ದಲಿತ ಸಮುದಾಯದ ಜನರು ಏನು ಅನುಭವಿಸಿದ್ದಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ದಲಿತರು ಈಗ ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ಬಯಸುತ್ತಾರೆ," ಎಂದು ಹೇಳಿದರು.
"ನಾವು ದಲಿತ ಜನರ ಹಕ್ಕುಗಳಿಗಾಗಿ ಹೋರಾಡಲು ಶ್ರಮಿಸುತ್ತಿದ್ದೇವೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ನಮ್ಮ ಏಕೈಕ ಗುರಿ ಬಡವರು, ದಲಿತರನ್ನು ಮತ್ತೆ ಅಧಿಕಾರಕ್ಕೆ ತರುವುದು ಆಗಿದೆ. ಹಾಗೆಯೇ ಬಡವರು, ದಲಿತರ ಹಕ್ಕುಗಳಿಗಾಗಿ ಹೋರಾಡುವುದು. ನಾವು ಉತ್ತರ ಪ್ರದೇಶದ ಎಲ್ಲಾ 403 ಸ್ಥಾನಗಳಲ್ಲಿಯೂ ನಮ್ಮ ಸ್ಪರ್ಧಿಯನ್ನು ಕಣಕ್ಕೆ ಇಳಿಸುತ್ತೇವೆ," ಎಂದು ಭೀಮ್ ಆರ್ಮಿಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಘೋಷಿಸಿದರು.
ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ಯೋಜಿಸುತ್ತಿದ್ದೀರಾ ಎಂದು ಮಾಧ್ಯಮಗಳು ಕೇಳಿದಾಗ, "ಎಲ್ಲರ ಹಕ್ಕುಗಳಿಗಾಗಿ ಹೋರಾಡಲು ತಮ್ಮ ಆದರ್ಶಗಳನ್ನು ಹಂಚಿಕೊಳ್ಳುವ ಯಾರೊಂದಿಗೂ ಕೈಜೋಡಿಸಲು ತಾನು ಮುಕ್ತ," ಎಂದು ಆಜಾದ್ ಹೇಳಿದರು.
ಇನ್ನು ಉತ್ತರಪ್ರದೇಶದತ್ತ: ಬಿಎಸ್ಪಿಯಲ್ಲಿ ಜಾತವ ಸಮುದಾಯದ ನಾಯಕತ್ವದ ಇತಿಹಾಸ ಇಲ್ಲಿದೆ
"ದಲಿತರು ದುರ್ಬಲರೆಂದು ಯಾರಾದರೂ ಭಾವಿಸಿದರೆ ಮತ್ತು ದಲಿತರೊಂದಿಗೆ ಕಡಿಮೆ ಸ್ಥಾನಗಳನ್ನು ಹಂಚಿಕೊಂಡರೆ, ಆ ಜನರು ಕಠಿಣ ಪಾಠವನ್ನು ಕಲಿಯಲಿದ್ದಾರೆ. ನಾವು ಯಾರಿಗೂ ಮನವಿ ಮಾಡುತ್ತಿಲ್ಲ. ನಮಗೆ ಒಂದೇ ಗುರಿ ಇದೆ, ಅದು ಬಿಜೆಪಿಯನ್ನು ಯಾವುದೇ ರೀತಿಯಲ್ಲಾದರೂ ತಡೆಯುವುದು ಎಂದರು.
''ಮಾಯಾವತಿ ನನ್ನೊಂದಿಗೆ ಮಾತನಾಡಲ್ಲ''
ಭೀಮ್ ಆರ್ಮಿಯ ಅಧ್ಯಕ್ಷ ಚಂದ್ರ ಶೇಖರ್ ಆಜಾದ್ ಇದೇ ಸಂದರ್ಭದಲ್ಲಿ, ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ವರಿಷ್ಠೆ ಮಾಯಾವತಿ ನನ್ನೊಂದಿಗೆ ಮಾತನಾಡುವುದಿಲ್ಲ ಮತ್ತು ಮಾಯಾವತಿಗೆ ಅಸುರಕ್ಷಿತ ಮನೋಭಾವ ಇದೆ ಎಂದು ಹೇಳಿಕೊಂಡಿದ್ದಾರೆ. "ನಾನು ಪ್ರಯತ್ನಿಸಿದೆ ಆದರೆ ಮಾಯಾವತಿ ನನ್ನೊಂದಿಗೆ ಮಾತನಾಡುವುದಿಲ್ಲ. ಅವರಲ್ಲಿ ಕೆಲವು ಅಭದ್ರತೆ ಮನೋಭಾವನೆ ಇದೆ. ನಾನು ಅವರನ್ನು ಗೌರವಿಸುತ್ತೇನೆ ಮತ್ತು ಅವರೆ ವಿರುದ್ಧ ಏನನ್ನೂ ಹೇಳಿಲ್ಲ, ಆದರೆ ಅವರು ಮಾತ್ರ ನನ್ನನ್ನು ಆರೆಸ್ಸೆಸ್, ಬಿಜೆಪಿ ಮತ್ತು ಕಾಂಗ್ರೆಸ್ನ ಏಜೆಂಟ್ ಎಂದು ಕರೆಯುತ್ತಿದ್ದರು. ಆದರೆ ನಾನು ಮಾಯಾವತಿಯನ್ನು ಯಾರೊಬ್ಬರ ಏಜೆಂಟ್ ಎಂದು ಕರೆಯಲಿಲ್ಲ," ಎಂದು ಪಂಚಾಯತ್ ಆಜ್ ತಕ್ನ ವಿಶೇಷ ಚಾಟ್ನಲ್ಲಿ ಹೇಳಿದರು.
ಉತ್ತರ ಪ್ರದೇಶದಲ್ಲಿ ಎಲ್ಲಾ ಪಕ್ಷಗಳು ಬ್ರಾಹ್ಮಣರು ಹಾಗೂ ದಲಿತ ಸಮುದಾಯವನ್ನು ಮತಕ್ಕಾಗಿ ಗುರಿಯಾಗಿಸಿದೆ. ಹಲವಾರು ಪಕ್ಷಗಳು ಈ ಸಮುದಾಯದ ಸಮಾವೇಶ, ಸಮ್ಮೇಳನ, ಸಭೆಗಳನ್ನು ನಡೆಸುತ್ತಿದೆ. ಉತ್ತರ ಪ್ರದೇಶದ ದಲಿತರು ಬಿಎಸ್ಪಿಯೊಂದಿಗೆ ಒಂದು ರೀತಿಯ ಅಸಮಾಧಾನವನ್ನು ಹೊಂದಿದ್ದಾರೆ. ಏಕೆಂದರೆ ಮಾಯಾವತಿ ಸಮುದಾಯದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಹುಟ್ಟುಹಾಕುವಲ್ಲಿ ಮತ್ತು ಪಕ್ಷವು ಹಿಂದುತ್ವದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯ ಬಗ್ಗೆ ಹೋರಾಟದ ಮನೋಭಾವವನ್ನು ಹೊಂದಿರುವುದಿಲ್ಲ ಎಂಬುವುದಾಗಿದೆ. 2017 ರಲ್ಲಿ, ಬಿಜೆಪಿ 85 ಮೀಸಲು ಸ್ಥಾನಗಳಲ್ಲಿ 69 ಮತ್ತು ಶೇಕಡ 39 ರಷ್ಟು ಮತಗಳನ್ನು ಪಡೆದರೆ, ಎಸ್ಪಿ ಏಳು ಸ್ಥಾನಗಳನ್ನು ಪಡೆಯಿತು. ಬಿಎಸ್ಪಿ ಕೇವಲ ಎರಡು ಸ್ಥಾನಗಳನ್ನು ಪಡೆಯಿತು. ಇದು ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ದಲಿತರ ಮತಕ್ಕಾಗಿ ಹೋರಾಟ ಆರಂಭಿಸಿದೆ.
(ಒನ್ಇಂಡಿಯಾ ಸುದ್ದಿ)