ನಮಗೆ ಹಿಂದು-ಮುಸ್ಲಿಂ ಇಲ್ಲ: ಅಂತರ್ ಧರ್ಮೀಯ ಮದುವೆ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು
ಅಲಹಾಬಾದ್, ನವೆಂಬರ್ 24: ಅಂತರ್ ಧರ್ಮೀಯ ಮದುವೆಗಳ ಸುತ್ತ ಸೃಷ್ಟಿಯಾಗಿರುವ 'ಲವ್ ಜಿಹಾದ್' ವಿವಾದದ ನಡುವೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅರ್ಹ ವಯಸ್ಸಿಗೆ ತಲುಪಿದ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಅದು ಹೇಳಿದೆ.
ಇಬ್ಬರು ವಯಸ್ಕರು ಒಂದೇ ಲಿಂಗ ಅಥವಾ ಅನ್ಯ ಲಿಂಗಕ್ಕೆ ಸೇರಿರಲಿ, ಅವರು ಒಟ್ಟಿಗೆ ಬಾಳಲು ಕಾನೂನು ಅವಕಾಶ ನೀಡುತ್ತದೆ ಎಂದು ಕೋರ್ಟ್ ತಿಳಿಸಿದೆ. ಯಾವುದೇ ವ್ಯಕ್ತಿ ಅಥವಾ ಕುಟುಂಬವು ಅವರ ಶಾಂತಿಯುತ ಜೀವನದ ಮಧ್ಯೆ ಹಸ್ತಕ್ಷೇಪ ಮಾಡಲಾಗದು. ಇಬ್ಬರು ವಯಸ್ಕರ ನಡುವಿನ ಸಂಬಂಧಕ್ಕೆ ಸರ್ಕಾರ ಕೂಡ ಆಕ್ಷೇಪಣೆ ಸಲ್ಲಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
'ಲವ್ ಜಿಹಾದ್' ಕೋಮು ವಿಭಜನೆಗಾಗಿ ಬಿಜೆಪಿಯೇ ಸೃಷ್ಟಿಸಿದ ಪದ: ಗೆಹ್ಲೋಟ್
ಉತ್ತರ ಪ್ರದೇಶದ ಕುಷಿನಗರದ ವಿಷ್ಣುಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಲಾಮತ್ ಅನ್ಸಾರಿ ಮತ್ತು ಇತರೆ ಮೂವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಸಲಾಮತ್ ಮತ್ತು ಪ್ರಿಯಾಂಕಾ ಕರ್ವಾರ್ ಅವರು ಕುಟುಂಬದ ಇಚ್ಛೆಗೆ ಅನುಗುಣವಾಗಿ ಮದುವೆಯಾಗಿದ್ದರು. 2019ರ ಆಗಸ್ಟ್ 19ರಂದು ಅವರ ಮದುವೆ ನಡೆದಿತ್ತು. ವಿವಾಹದ ಬಳಿಕ ಪ್ರಿಯಾಂಕಾ ಅವರ ಹೆಸರನ್ನು ಆಲಿಯಾ ಎಂದು ಬದಲಿಸಲಾಗಿತ್ತು. ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಿಯಾಂಕಾರ ತಂದೆ ಎಫ್ಐಆರ್ ದಾಖಲಿಸಿದ್ದರು. ಮುಂದೆ ಓದಿ.
ಪೋಕ್ಸೋ ಕಾಯ್ದೆ ಅನ್ವಯವಾಗೊಲ್ಲ
ಸಲಾಮತ್ ಮತ್ತು ಇತರೆ ಮೂವರ ಪರವಾಗಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ, ಎಫ್ಐಆರ್ ರದ್ದುಗೊಳಿಸುವಂತೆ ಮತ್ತು ಭದ್ರತೆ ನೀಡುವಂತೆ ಕೋರಲಾಗಿತ್ತು. ಪ್ರಿಯಾಂಕಾ ಕರ್ವಾರ್ ಅಲಿಯಾಸ್ ಆಲಿಯಾ ಅವರ ವಯಸ್ಸು 21 ದಾಟಿರುವುದರಿಂದ ಅವರ ವಯಸ್ಸಿನ ಬಗ್ಗೆ ಯಾವುದೇ ತಕರಾರು ಇಲ್ಲ ಎಂದು ನ್ಯಾಯಾಲಯ ಗಮನಿಸಿತು. ಬಳಿಕ ಆಕೆಗೆ ತನ್ನ ಪತಿ ಜತೆ ಬದುಕು ಅನುಮತಿ ನೀಡಿತು. ಈ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ ಅನ್ವಯವಾಗುವುದಿಲ್ಲ ಎಂದ ಕೋರ್ಟ್, ಅರ್ಜಿದಾರರ ವಿರುದ್ಧದ ಎಫ್ಐಆರ್ಅನ್ನು ವಜಾಗೊಳಿಸಿತು.
ಭೇಟಿಯಾಗುವುದು ಅವರ ಹಕ್ಕು
ತಮ್ಮ ಮಗಳನ್ನು ಭೇಟಿ ಮಾಡುವುದು ತಂದೆಯ ಹಕ್ಕು. ಪ್ರಿಯಾಂಕಾ ಕರ್ವಾರ್ ಅಥವಾ ಆಲಿಯಾ ತಾನು ಬಯಸಿದ್ದಾಗಲೆಲ್ಲ ಯಾರನ್ನು ಬೇಕಾದರೂ ಭೇಟಿ ಮಾಡಬಹುದು ಎಂದು ನ್ಯಾಯಮೂರ್ತಿಗಳಾದ ಪಂಕಜ್ ನಕ್ವಿ ಮತ್ತು ವಿವೇಕ್ ಅಗರವಾಲ್ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಹೇಳಿತು.
ಮದುವೆಗಾಗಿ ಮತಾಂತರ ಸಲ್ಲ
ಆದರೆ, ಕುಟುಂಬದ ಎಲ್ಲ ಶಿಷ್ಟಾಚಾರ ಮತ್ತು ಗೌರವಗಳಿಗೆ ಅನುಗುಣವಾಗಿ ಆಕೆ ನಡೆದುಕೊಳ್ಳಬೇಕು ಎಂಬ ಆಶಯವನ್ನು ಕೋರ್ಟ್ ವ್ಯಕ್ತಪಡಿಸಿತು. ಮದುವೆಗಾಗಿ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಅಂತಹ ಮದುವೆಗಳು ಕಾನೂನಿನ ಕಣ್ಣಲ್ಲಿ ಸಿಂಧುವಲ್ಲ ಎಂದು ಕೋರ್ಟ್ ತಿಳಿಸಿತು.
ಆಯ್ಕೆ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಇಲ್ಲ
ವ್ಯಕ್ತಿಯ ಆಯ್ಕೆಯ ಉಲ್ಲಂಘನೆಯು ಆಯ್ಕೆ ಸ್ವಾತಂತ್ರ್ಯದ ಹಕ್ಕಿನ ವಿರುದ್ಧವಾಗಿದೆ. ಪ್ರಿಯಾಂಕಾ ಮತ್ತು ಸಲಾಮತ್ ಅವರನ್ನು ಹಿಂದೂ ಮತ್ತು ಮುಸ್ಲಿಮರಾಗಿ ತಾನು ನೋಡುವುದಿಲ್ಲ. ಸಂವಿಧಾನದ 21ನೇ ವಿಧಿಯು ವ್ಯಕ್ತಿಯು ತನ್ನ ಆಯ್ಕೆ ಮತ್ತು ಬಯಕೆಗೆ ಅನುಗುಣವಾಗಿ ಶಾಂತಿಯುತವಾಗಿ ಬದುಕುವ ಸ್ವಾತಂತ್ರ್ಯ ಹೊಂದಿದ್ದಾನೆ. ಇದರಲ್ಲಿ ತಾನು ಮಧ್ಯಪ್ರವೇಶ ಮಾಡಲು ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿತು.