ಗೋಹತ್ಯೆ ನಿಷೇಧ ಕಾಯ್ದೆಯ ದುರ್ಬಳಕೆ, ಅಮಾಯಕರ ಬಂಧನ: ಹೈಕೋರ್ಟ್ ಕಳವಳ
ಲಕ್ನೋ, ಅಕ್ಟೋಬರ್ 27: ಉತ್ತರ ಪ್ರದೇಶದ ಗೋಹತ್ಯೆ ತಡೆ ಕಾಯ್ದೆಯ ದುರ್ಬಳಕೆಯ ಬಗ್ಗೆ ಅಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಕಾಯ್ದೆಯನ್ನು ಅಮಾಯಕ ವ್ಯಕ್ತಿಗಳ ಮೇಲೆ ಬಳಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಕೋರ್ಟ್, ಅಂತಹ ಪ್ರಕರಣಗಳಲ್ಲಿ ಪೊಲೀಸರು ಸಲ್ಲಿಸಿರುವ ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ.
ಕಾಯ್ದೆಯಡಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಸಿದ್ಧಾರ್ಥ್, 'ಕಾಯ್ದೆಯನ್ನು ಅಮಾಯಕ ಜನರ ಮೇಲೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಮಾಂಸ ಪತ್ತೆಯಾದಾಗ ಅದನ್ನು ಪರಿಶೀಲಿಸದೆಯೇ ಅಥವಾ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿಶ್ಲೇಷಿಸದೆಯೇ ಗೋಮಾಂಸ ಎಂದು ತೋರಿಸಲಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೋಹತ್ಯೆ ನಿಷೇಧಕ್ಕೆ ಸಿಎಂಗೆ ಮನವಿ: ಡಾ.ಕೆ.ಸುಧಾಕರ್
'ಹೆಚ್ಚಿನ ಪ್ರಕರಣಗಳಲ್ಲಿ ಮಾಂಸವನ್ನು ವಿಶ್ಲೇಷಣೆಗೆ ಕಳುಹಿಸಲಾಗುತ್ತಿಲ್ಲ. ತಾವು ಮಾಡದೆ ಇರುವ ಅಪರಾಧಗಳಿಗಾಗಿ ಆರೋಪಿಗಳು ಜೈಲಿನಲ್ಲಿ ಇರುವುದು ಮುಂದುವರಿದಿದೆ. ಈ ಪ್ರಕರಣಗಳು ಮ್ಯಾಜಿಸ್ಟ್ರೇಟ್ 1 ವರ್ಗದ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಟ್ಟು ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆಗೆ ಒಳಗಾಗಬಹುದು. ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತೋರಿಸಿರುವ ಕಡೆಗಳಲ್ಲೆಲ್ಲ ವಶಪಡಿಸಿಕೊಳ್ಳಲಾದ ಬಗ್ಗೆ ಸೂಕ್ತ ಮಾಹಿತಿಗಳನ್ನು ಸಿದ್ಧಪಡಿಸುತ್ತಿಲ್ಲ ಮತ್ತು ಹಾಗೆ ವಶಪಡಿಸಿಕೊಂಡ ಹಸುಗಳು ಎಲ್ಲಿಗೆ ಹೋಗುತ್ತವೆ ಎನ್ನುವುದು ಯಾರಿಗೂ ತಿಳಿದಿಲ್ಲ ' ಎಂದು ಹೇಳಿದ್ದಾರೆ.
ಕಾಯ್ದೆಯಡಿ ಬಂಧನಕ್ಕೆ ಒಳಗಾಗಿ ಆಗಸ್ಟ್ 5ರಂದು ಜೈಲುಪಾಲಾಗಿದ್ದ ರಹಮುದ್ದೀನ್ ಸಲ್ಲಿಸಿದ್ದ ಅರ್ಜಿ ಆಧಾರದಲ್ಲಿ ಈ ಆದೇಶ ನೀಡಲಾಗಿದೆ. ರಮಹಮುದ್ದೀನ್ ಅವರನ್ನು ಸ್ಥಳದಲ್ಲಿಯೇ ಬಂಧಿಸಿರಲಿಲ್ಲ ಎಂದು ವಕೀಲರು ಆರೋಪಿಸಿದ್ದರು.
ಲಾಕ್ ಡೌನ್: ಸರಕಾರದ ಪರವಾಗಿ ಗೋವು ಸಾಕುತ್ತಿರುವ ಗೋಶಾಲೆಗಳ ಆರ್ಥಿಕ ಸಮಸ್ಯೆ
ಉತ್ತರ ಪ್ರದೇಶ ಸರ್ಕಾರದ ದಾಖಲೆಗಳ ಪ್ರಕಾರ ಆಗಸ್ಟ್ 19ರವರೆಗೆ ಗೋಹತ್ಯೆ ಪ್ರಕರಣಗಳಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಈ ವರ್ಷ 139 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆಯಡಿ 4,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪೊಲೀಸರು ಪುರಾವೆ ಒದಗಿಸಲು ಸಾಧ್ಯವಾಗದೆ 32 ಪ್ರಕರಣಗಳನ್ನು ಅಂತ್ಯಗೊಳಿಸಲಾಗಿದೆ.