ಕಾಶಿ ವಿಶ್ವನಾಥ ದೇಗುಲ-ಜ್ಞಾನವಪಿ ಮಸೀದಿ: ಎಎಸ್ಐ ಸರ್ವೆಗೆ ತಡೆ
ವಾರಾಣಸಿ, ಸೆಪ್ಟೆಂಬರ್ 10: ವಾರಾಣಸಿಯ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ಜ್ಞಾನವಪಿ-ಕಾಶಿ ಭೂ ವಿವಾದ ಪ್ರಕರಣದ ವಿಚಾರಣೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ದೇಗುಲ-ಮಸೀದಿ ಆವರಣದಲ್ಲಿ ಸರ್ವೆಗೆ ನೀಡಿದ ಅನುಮತಿಗೆ ಅಲಾಹಾಬಾದ್ ಹೈಕೋರ್ಟ್ ತಡೆ ನೀಡಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣವನ್ನು ಕೈಗೆತ್ತಿಕೊಂಡು ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ, ಹೀಗಾಗಿ, ಕೆಳ ಹಂತದ ನ್ಯಾಯಾಲಯದಲ್ಲಿನ ವಿಚಾರಣೆಯು ಕಾನೂನಿಗೆ ವಿರುದ್ಧವಾದ ತಪ್ಪು ನಡೆ ಎಂದು ನ್ಯಾಯಮೂರ್ತಿ ಪ್ರಕಾಶ್ ಪಾಡಿಯಾ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.
ದೇಗುಲ-ಮಸೀದಿ ಆವರಣದಲ್ಲಿ ಸರ್ವೆ ಕುರಿತಂತೆ ಏಪ್ರಿಲ್ 8ರಂದು ವಾರಾಣಸಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಶುತೋಷ್ ತಿವಾರಿ ಅವರು ಎಎಸ್ಐ ಸರ್ವೆಗೆ ಆದೇಶಿಸಿದ್ದರು.
ಮೊಘಲ್ ದೊರೆ ಔರಂಗಜೇಬ್ ಸೂಚನೆಯಂತೆ 1669ರಲ್ಲಿ ಜ್ಞಾನವಪಿ ಮಸೀದಿ ನಿರ್ಮಿಸಲು 2000 ವರ್ಷಗಳ ಹಿಂದಿನ ಕಾಶಿ ವಿಶ್ವನಾಥ ದೇವಾಲಯವನ್ನು ನಾಶಪಡಿಸಲಾಗಿತ್ತು. ಹೀಗಾಗಿ, ಇದು ಹಿಂದೂಗಳಿಗೆ ಸೇರಬೇಕಾದ ಸ್ಥಳವಾಗಿದೆ. ಆದ್ದರಿಂದ ಸದರಿ ಸ್ಥಳವನ್ನು ಹಿಂದಿನ ಸ್ಥಿತಿಗೆ ಮರಳಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿಯನ್ನು ಗ್ಯಾನವಪಿ ಮಸೀದಿ ನಿರ್ವಹಣಾ ಸಮಿತಿಯು ವಿರೋಧಿಸಿತ್ತು. ವಿಜಯಶಂಕರ್ ರಾಸ್ತೋಗಿ, ಸ್ವಯಂಭು ಭಗವಾನ್, ವಿಶ್ವೇಶ್ವರ ವಿಗ್ರಹ ಮತ್ತು ಇತರ ನಾಲ್ವರು ದೇವತೆಗಳ ವಾದ ಮಿತ್ರನಾಗಿ ಮೊಕದ್ದಮೆ ದಾಖಲಿಸಿದ್ದಾರೆ. ಮೊಕದ್ದಮೆ ಬಾಕಿ ಇರುವಾಗ ಇಬ್ಬರು ಫಿರ್ಯಾದಿದಾರರು ಸಾವನ್ನಪ್ಪಿದ್ದಾರೆ. ಈ ಮೊಕದ್ದಮೆಯನ್ನು ಜ್ಞಾನವಪಿ ಮಸೀದಿ ನಿರ್ವಹಣಾ ಸಮಿತಿ ವಿರೋಧಿಸಿತು. ವಿಚಾರಣೆ ಕೈಗೊಂಡಿದ್ದ ವಾರಾಣಸಿ ನ್ಯಾಯಾಲಯವು ಎಎಸ್ಐ ಸರ್ವೆಕ್ಷಣೆಗೆ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ವಾರಾಣಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿತ್ತು. ವಾರಾಣಸಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ನಿರ್ವಹಣೆಯನ್ನು ಪ್ರಶ್ನಿಸಿರುವ ಮನವಿಯ ತೀರ್ಪನ್ನು ಅಲಾಹಾಬಾದ್ ಹೈಕೋರ್ಟ್ ಕಾಯ್ದಿರಿಸಿರುವಾಗ ವಾರಣಾಸಿ ನ್ಯಾಯಾಲಯವು ಎಎಸ್ಐ ತನಿಖೆಗೆ ಆದೇಶಿಸಿರುವುದಕ್ಕೆ ಹಿರಿಯ ವಕೀಲ ಎಸ್ಎಫ್ಎ ನಖ್ವಿ, ವಕೀಲರಾದ ಅಹ್ಮದ್ ಫೈಜಾನ್ ಮತ್ತು ಪುನೀತ್ ಗುಪ್ತಾ ತಗಾದೆ ಎತ್ತಿದ್ದರು.
ಎರಡೂ ಧರ್ಮಗಳಿಗೆ ಸೇರಿದ ಭಾರತೀಯರು ಮತ್ತು ಹೊರಗಿನ ಪ್ರಜೆಗಳಿಗೆ ಈ ಕುರಿತು ಸತ್ಯ ತಿಳಿದಿದೆ. ಯಾವುದೇ ಪಕ್ಷಗಳಿಗೂ ನೇರ ಸಾಕ್ಷ್ಯಗಳ ಮೂಲಕ ವಾದ ಮಂಡಿಸಲು ಸಾಧ್ಯವಿಲ್ಲ. ಏಕೆಂದರೆ ನ್ಯಾಯಾಲಯದ ಮುಂದೆ ಬಂದು ಸಾಕ್ಷ್ಯ ಹೇಳಲು ಯಾವುದೇ ವ್ಯಕ್ತಿ ಜೀವಂತ ಇಲ್ಲ" ಎಂದು ಕೋರ್ಟ್ ಹೇಳಿತ್ತು.
ಪುರಾತತ್ವ ಸರ್ವೇಕ್ಷಣೆಯ ಕುರಿತು ಕೋರ್ಟ್ ಪ್ರಮುಖ ನಿರ್ದೇಶನ: -
ವಿವಾದಿತ ಸ್ಥಳ(ದೇಗುಲವಿದ್ದ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬ ತಾಣ)ದಲ್ಲಿ ಎಎಸ್ಐ ಸಮಗ್ರ ಭೌತಿಕ ಸಮೀಕ್ಷೆ ಕೈಗೊಳ್ಳಬೇಕು. ಪುರಾತತ್ವ ಶಾಸ್ತ್ರದ ಬಗ್ಗೆ ಆಳವಾಗಿ ಅರಿತಿರುವ ಪ್ರಖ್ಯಾತ ವ್ಯಕ್ತಿಗಳು ಮತ್ತು ತಜ್ಞರನ್ನು ಒಳಗೊಂಡ ಐದು ಸದಸ್ಯರ ಸಮಿತಿಯನ್ನು ರಚಿಸಲಾಗುವುದು. ಅದರಲ್ಲಿ ಇಬ್ಬರು ಸದಸ್ಯರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು - ಮಸೀದಿ ನಿರ್ಮಿಸುವ ಅಥವಾ ನಿರ್ವಹಿಸುವ ಅಥವಾ ಸೇರ್ಪಡೆ ಮಾಡುವ ಮೊದಲು ಹಿಂದೂ ಸಮುದಾಯಕ್ಕೆ ಸೇರಿದ ದೇಗುಲ ಅಸ್ತಿತ್ವದಲ್ಲಿತ್ತೇ ಎಂಬುದನ್ನು ಸಮಿತಿ ಪತ್ತೆ ಹಚ್ಚಬೇಕು ಹಾಗೂ ಸಮೀಕ್ಷೆ ನಡೆಯುವಾಗ ವಿವಾದಿತ ಸ್ಥಳದಲ್ಲಿ ಮುಸ್ಲಿಮರ ನಮಾಜ್ಗೆ ಅಡ್ಡಿಯಾಗದಂತೆ ಸಮಿತಿ ನೋಡಿಕೊಳ್ಳಬೇಕು. ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ಎಎಸ್ಐ ಭರಿಸಬೇಕು. ಮುಖ್ಯವಾಗಿ ಇಡೀ ಪ್ರಕರಣದ ಸೂಕ್ಷ್ಮತೆಯನ್ನು ಸಮಿತಿ ಅರಿತಿರಬೇಕಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಸಮಾನವಾಗಿ ಗೌರವಿಸತಕ್ಕದ್ದು, ಸಮೀಕ್ಷೆ ಕಾರ್ಯದಲ್ಲಿ ಸಾಕ್ಷಿಯಾಗಲು ಯಾವುದೇ ಸಾರ್ವಜನಿಕರಿಗೆ ಅಥವಾ ಮಾಧ್ಯಮಗಳಿಗೆ ಅವಕಾಶ ನೀಡುವಂತಿಲ್ಲ ಹಾಗೂ ಸಮೀಕ್ಷೆ ಪೂರ್ಣಗೊಂಡ ಕೂಡಲೇ ವರದಿಯನ್ನು ವಿಳಂಬ ಮಾಡದೇ ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಕೋರ್ಟ್ ನಿರ್ದೇಶನ ನೀಡಿತ್ತು.