ಕಫೀಲ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ರದ್ದುಪಡಿಸಿದ ಕೋರ್ಟ್
ಲಕ್ನೋ, ಆಗಸ್ಟ್ 27: ಅಲಿಗಢದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆ ವೇಳೆ ಅವಹೇಳನಾಕಾರಿ ಹೇಳಿಕೆಗಳನ್ನು ನೀಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಕಫೀಲ್ ಖಾನ್ ವಿರುದ್ಧದ ದೋಷಾರೋಪಗಳು ದೂರಾಗಿವೆ. ಕಫೀಲ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ.
ಸಿಎಎ ವಿರೋಧಿ ಭಾಷಣದ ಹಿನ್ನೆಲೆಯಲ್ಲಿ ಖಾನ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ಬಂಧಿಸಲಾಗಿತ್ತು. ಇದನ್ನು ಕಳೆದ ವರ್ಷದ ಸೆಪ್ಟೆಂಬರ್ 1ರಂದು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿತ್ತು. ಈ ಆದೇಶವನ್ನು ಡಿಸೆಂಬರ್ 17ರಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಎನ್ಎಸ್ಎ ಕಾಯಿದೆ ಅಡಿ ಬಂಧನವನ್ನು ಪ್ರಶ್ನಿಸಿ ಖಾನ್ ತಾಯಿ ನುಜಾತ್ ಪರ್ವೀನ್ ಅವರು ಹೇಬಿಯಸ್ ಕಾರ್ಪಸ್ ಮನವಿ ಸಲ್ಲಿಸಿದ್ದರು.
ಸಂಬಂಧಪಟ್ಟ ಇಲಾಖೆಯು ಸರ್ಕಾರದಿಂದ ಅಗತ್ಯವಾದ ಅನುಮತಿ ಪಡೆದಿಲ್ಲ ಎಂಬ ಆಧಾರದಲ್ಲಿ ಕಾನೂನು ಪ್ರಕ್ರಿಯೆ ಮತ್ತು ಅಲಿಗಢದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರ ಪರಿಗಣನೆ ಆದೇಶವನ್ನು ನ್ಯಾಯಮೂರ್ತಿ ಗೌತಮ್ ಚೌಧರಿ ನೇತೃತ್ವದ ಏಕಸದಸ್ಯ ಪೀಠವು ರದ್ದು ಮಾಡಿದೆ.
ಸಿಎಂ ಯೋಗಿ V/S ಕಫೀಲ್ ಖಾನ್: 3 ವರ್ಷಗಳ ನಿರಂತರ ಸಂಘರ್ಷ
''ಭಾರತೀಯ ದಂಡ ಸಂಹಿತೆಯಡಿ ಅಪರಾಧವನ್ನು ಪರಿಗಣಿಸುವುದಕ್ಕೂ ಮುನ್ನ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಜಿಲ್ಲಾ ದಂಡಾಧಿಕಾರಿ ಅವರಿಂದ ಪ್ರಾಸಿಕ್ಯೂಷನ್ ಅನುಮತಿ ಪಡೆಯಲಾಗಿಲ್ಲ. ಮ್ಯಾಜಿಸ್ಟ್ರೇಟ್ ಅವರು ಪರಿಗಣನೆ ಆದೇಶ ಹೊರಡಿಸುವಾಗ ಸಂಬಂಧಿತ ನಿಬಂಧನೆಗಳನ್ನು ಸರಿಯಾಗಿ ಅನುಸರಿಸಿಲ್ಲ,'' ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ, ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 482ರ ಅಡಿ ಡಾ. ಖಾನ್ ಸಲ್ಲಿಸಿರುವ ಮನವಿಯನ್ನು ಒಪ್ಪಿಕೊಳ್ಳಲಾಗಿದ್ದು, ಅವರ ವಿರುದ್ಧದ ಪ್ರಕರಣಗಳನ್ನು ವಜಾ ಮಾಡಲಾಗಿದೆ. 2019ರ ಡಿಸೆಂಬರ್ 12ರಂದು ಎಎಂಯುನಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಖಾನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.
ಖಾನ್ ವಿರುದ್ಧ ಐಪಿಸಿ ಸೆಕ್ಷನ್ಗಳಾದ 153ಎ (ಧರ್ಮಗಳ ನಡುವೆ ದ್ವೇಷ ಹರಡುವುದು), 153ಬಿ (ರಾಷ್ಟ್ರೀಯ ಏಕತೆಗೆ ಪೂರ್ವಗ್ರಹ ಪೀಡಿತವಾಗಿ ವರ್ತಿಸುವುದು), 505ರ (ಸಾರ್ವಜನಿಕ ಕಿಡಿಗೇಡಿತನ ಪ್ರಚೋದಿಸುವ ಹೇಳಿಕೆಗಳು) ಅಡಿ ದೂರು ದಾಖಲಿಸಲಾಗಿತ್ತು.
ಸಿಎಎ ವಿರೋಧಿ ಭಾಷಣ: ಡಾ. ಕಫೀಲ್ ಖಾನ್ ಬಿಡುಗಡೆಗೆ ಹೈಕೋರ್ಟ್ ಆದೇಶ
ಸಿಆರ್ಪಿಸಿ ಸೆಕ್ಷನ್ 196 (ಎ) ಅನ್ವಯ ಕೇಂದ್ರ ಅಥವಾ ರಾಜ್ಯ ಅಥವಾ ಜಿಲ್ಲಾ ದಂಡಾಧಿಕಾರಿ ಅವರಿಂದ ಪೂರ್ವಾನುಮತಿ ಪಡೆದ ಬಳಿಕ ಖಾನ್ ವಿರುದ್ಧದ ಆರೋಪಗಳನ್ನು ಪರಿಗಣಿಸಬೇಕು ಎಂದು ಹೇಳಿ ನ್ಯಾಯಾಲಯವು ಡಾ. ಕಫೀಲ್ ಖಾನ್ ಪ್ರಕರಣವನ್ನು ಮರಳಿ ಅಡಲಿಗಢ ನ್ಯಾಯಾಲಯಕ್ಕೆ ಕಳುಹಿಸಿದೆ.
2017ರ ಆಗಸ್ಟ್ನಲ್ಲಿ ಗೋರಖ್ಪುರದ ಬಾಬಾ ರಾಘವ್ ದಾಸ್ (ಬಿಆರ್ಡಿ) ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಪೂರೈಕೆ ಕೊರತೆಯಿಂದಾಗಿ 60 ಮಕ್ಕಳು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಕಫೀಲ್ ಖಾನ್ ಕಾರಣ ಎಂದು ಆರೋಪಿಸಿ ಅವರನ್ನು ಕೆಲಸದಿಂದ ಅಮಾತುಗೊಳಿಸಿ, ಬಂಧಿಸಲಾಗಿತ್ತು. ಆದರೆ ಈ ಬಗ್ಗೆ ತನಿಖೆ ನಡೆಸಿದ್ದ ಉತ್ತರ ಪ್ರದೇಶ ಸರ್ಕಾರ ಅವರು ನಿರ್ದೋಷಿ ಎಂದು ವರದಿ ನೀಡಿತ್ತು.