'ನ್ಯಾಯಾಂಗ ವ್ಯವಸ್ಥೆ ಸರಿಯಿಲ್ಲ,' ನ್ಯಾಯಾಧೀಶರಿಂದಲೇ ಪ್ರಧಾನಿಗೆ ಪತ್ರ
ಲಕ್ನೋ, ಜುಲೈ 03: "ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ. ಇಲ್ಲಿ ನ್ಯಾಯಾಧೀಶಸರ ಆಯ್ಕೆಗೆ ಸ್ವಜನಪಕ್ಷಪಾತ ಮತ್ತು ಜಾತಿಯೇ ಮಾನದಂಡವಾಗಿದೆ" ಎಂದು ದೂರಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ರಂಗ್ ನಾಥ್ ಪಾಂಡೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ನ್ಯಾಯಾಧೀಶರನ್ನು ನೇಮಿಸುವಾಗ ಕೆಲವೇ ಕೆಲವರು ಮಾತ್ರ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ. ನ್ಯಾಯಾಧೀಶಸರ ನೇಮಕಾತಿಯ ನಂತರ ಅವರ ನೇಮಕಾತಿ ಪ್ರಕ್ರಿಯೆ ಅಂತ್ಯಗೊಳ್ಳುವವರೆಗೂ ಗೌಪ್ಯತೆಯನ್ನು ಕಾಪಾಡಲಾಗುತ್ತಿದೆ. ಆದ್ದರಿಂದ ನ್ಯಾಯಾಧೀಶರನ್ನು ಆಯ್ಕೆ ಮಾಡಲು ಮಾನದಂಡವೇನು ಎಂಬುದೇ ತಿಳಿಯುತ್ತಿಲ್ಲ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಅಲಹಾಬಾದ್ HC ಜಡ್ಜ್ ಅನ್ನು ಕಿತ್ತುಹಾಕಿ: ಪ್ರಧಾನಿಗೆ ಸಿಜೆಐ ಪತ್ರ
ಸರ್ಕಾರ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಸಮಿತಿಯನ್ನು ಸ್ಥಿಸಲು ಮುಂದಾಗಿದ್ದನ್ನೂ ನ್ಯಾಯಾಧೀಶರು ವಿರೋಧಿಸಿದ್ದಾರೆ. ಇದರಿಂದ ಪಾರದರ್ಶಕತೆ ಸಾಧ್ಯವಿತ್ತು. ಆದರೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂಬ ನೆಪ ಹೇಳಿ ಈ ಸಮಿತಿಯ ಸ್ಥಾಪನೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ಅವರು ದೂರಿದರು.
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು, ದುರ್ನಡತೆಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ನ ನ್ಯಾಯಾಧೀಶ ನ್ಯಾ. ಎಸ್ ಎನ್ ಶುಕ್ಲಾ ಅವರನ್ನು ಆ ಹುದ್ದೆಯಿಂದ ಕಿತ್ತುಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಮೆಡಿಕಲ್ ಕಾಲೇಜ್ ವೊಂದರ ಪ್ರವೇಶಾತಿ ಹಗರಣದಲ್ಲಿ ಶುಕ್ಲಾ ಅವರ ಹೆಸರು ಕೇಳಿಬಂದಿತ್ತು. ಎಸ್ ಎನ್ ಶುಕ್ಲಾ ಅವರ ವಿರುದ್ಧ ಕೇಳಿಬಂದ ಆರೋಪದ ತನಿಖೆಗಾಗಿ ಜನವರಿ 2018 ರಲ್ಲಿ ಮದ್ರಾಸ್ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಸಿಕ್ಕಿಂ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ ಕೆ ಅಗ್ನಿಹೋತ್ರಿ ಮತ್ತು ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪಿಕೆ ಜೈಸ್ವಾಲ್ ಅವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಶುಕ್ಲಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ನಂತರ ಸುಪ್ರೀಂ ಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು 'ರಾಜೀನಾಮೆ ನೀಡಿ, ಇಲ್ಲವೇ ಕಡ್ಡಾಯ ನಿವೃತ್ತಿ ಪಡೆಯಿರಿ' ಎಂದು ಶುಕ್ಲಾ ಅವರಿಗೆ ಆದೇಶಿಸಿದ್ದರು.
ಆದರೆ ಅವರು ಇದುವರೆಗೂ ಸೇವೆಯಲ್ಲೇ ಇರುವುದರಿಂದ ಅವರನ್ನು ಕಿತ್ತು ಹಾಕುವಂತೆ ಮತ್ತು, ಅವರು ಯಾವುದೇ ಹೈಕೋರ್ಟ್ ನಲ್ಲಿ ಕೆಲಸ ಮಾಡದಂತೆ ಆದೇಶಿಸುವಂತೆ, ಅಗತ್ಯವಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿಗಳಿಗೆ ಸಿಜೆಐ ಪತ್ರದಲ್ಲಿ ತಿಳಿಸಿದ್ದರು.