ಅಖಿಲೇಶ್ ಹಾಗೂ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವೆ ಮತ್ತೆ ಬಿರುಕು: ಮೂಲಗಳು
ಲಕ್ನೋ ಮಾರ್ಚ್ 31: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಸೋತ ಕೆಲವೇ ದಿನಗಳಲ್ಲಿ ಚಿಕ್ಕಪ್ಪ ಶಿವಪಾಲ್ ಯಾದವ್ ಹಾಗೂ ಅಖಿಲೇಶ್ ಯಾದವ್ ನಡುವೆ ಮತ್ತೆ ಬಿರುಕು ಉಂಟಾಗುವ ಲಕ್ಷಣಗಳು ಕಾಣಿಸುತ್ತಿವೆ. ಅವರಿಬ್ಬರ ಪುನರ್ಮಿಲನ ಮತ್ತೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಶಿವಪಾಲ್ ಯಾದವ್ ಅವರು ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿಯಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಖಿಲೇಶ್ ಯಾದವ್ ಅವರ ತಂದೆ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸಹೋದರ ಶಿವಪಾಲ್ ಯಾದವ್ ಅವರು ವಾರಗಳಿಂದ ಅಖಿಲೇಶ್ ಯಾದವ್ ಮೇಲೆ ಅಸಮಾಧಾನಗೊಂಡಿದ್ದಾರೆ.
'ಶಾಸಕಾಂಗ ಪಕ್ಷದ ಸಭೆಗೆ ನನ್ನನ್ನು ಕರೆಯಲಿಲ್ಲ': ಮತ್ತೆ ಮುನಿಸಿಕೊಂಡ ಶಿವಪಾಲ್
ಶಿವಪಾಲ್ ಯಾದವ್ ನಿನ್ನೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದು, ಇದು ಅವರು ಆಡಳಿತಾರೂಢ ಬಿಜೆಪಿಗೆ ಬದಲಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ. ಶಿವಪಾಲ್ ಯಾದವ್ ಅವರನ್ನು ಅಖಿಲೇಶ್ ಕಡೆಗಣಿಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಅಷ್ಟಕ್ಕೂ ಆಗಿದ್ದೇನು?
ಮಾರ್ಚ್ 26 ರಂದು ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಸಭೆ ನಡೆದಿತ್ತು. ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ಅಖಿಲೇಶ್ ಅವರ ಚಿಕ್ಕಪ್ಪ ಮತ್ತು ಪ್ರಗತಿಶೀಲ ಸಮಾಜವಾದಿ ಪಕ್ಷದ ಅಧ್ಯಕ್ಷ ಶಿವಪಾಲ್ ಯಾದವ್ ಈ ಸಭೆಯಲ್ಲಿ ಭಾಗಿಯಾಗಿಲ್ಲ. 'ಸಭೆಗೆ ನನ್ನನ್ನು ಕರೆದಿಲ್ಲ. ಹೀಗಾಗಿ ನಾನು ಹೋಗಿಲ್ಲ' ಎಂದು ಶಿವಪಾಲ್ ಯಾದವ್ ಅಖಿಲೇಶ್ ವಿರುದ್ಧ ಅಸಮಧಾನ ಹೊರಹಾಕಿದ್ದರು. ಇದೊಂದೆ ವಿಚಾರ ಅಲ್ಲ.ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್ ಹಾಗೂ ಶಿವಪಾಲ್ ಯಾದವ್ ಭೇಟಿ ಮಾಡಿದ್ದರು. ಅಖಿಲೇಶ್ ಯಾದವ್ ಸಿಎಂ ಆದಾಗ ಒಡೆದು ಹೋಗಿದ್ದ ಇವರಿಬ್ಬರ ಸಂಬಂಧ ಮತ್ತೆ ಚಿಗುರೊಡೆದಿತ್ತು. ಇವರಿಬ್ಬರು ಒಟ್ಟಾಗಿ ವಿಧಾನಸಭೆ ಚುನಾವಣೆ ಎದುರಿಸುತ್ತಾರೆ ಎನ್ನುವಷ್ಟರಲ್ಲಿ ಮುಲಾಯಂ ಸಿಂಗ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರಿದರು. ಇದರಿಂದ ಅಖಿಲೇಶ್ ಯಾದವ್ಗೆ ಬೇಸರ ತಂದಿತು. ಚುನಾವಣೆ ಹೊಸ್ತಿಲಲ್ಲಿ ಅಪರ್ಣಾ ಯಾದವ್ ಎಸ್ಪಿ ಬಿಟ್ಟು ಬಿಜೆಪಿ ಸೇರಿದ್ದು ಪಕ್ಷದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಯಿತು.
ಹೀಗಾಗಿ ಇನ್ನೇನು ಶಿವಪಾಲ್ ಎಸ್ಪಿ ಸೇರುತ್ತಾರೆ ಎನ್ನುವಷ್ಟರಲ್ಲಿ ಈ ಬೆಳವಣಿಗೆಯಿಂದ ಅಖಿಲೇಶ್ ಶಿವಪಾಲ್ ಯಾದವ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಆದರೂ ಬಿಜೆಪಿ ವಿರುದ್ಧ ಸ್ಪರ್ಧಿಸಲು ತಾವು ಎಸ್ಪಿ ಪರ ಸ್ಪರ್ಧಿಸುವುದಾಗಿ ಶಿವಪಾಲ್ ಹೇಳಿಕೊಂಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ತಮ್ಮದೇ ಆದ ಪಕ್ಷದ ಮೂಲಕ ಸ್ಪರ್ಧಿಸಿದರು. ಆಗಲೂ ಎಸ್ಪಿ ಅವರೊಂದಿಗೆ ಸಾಥ್ ನೀಡಲಿಲ್ಲ. ಹೀಗೆ ಎಸ್ಪಿ ಸೇರಬೇಕು ಎಂದುಕೊಂಡಾಗಲೆಲ್ಲಾ ಶಿವಪಾಲ್ ಯಾದವ್ ಅವರನ್ನು ಅಖಿಲೆಶ್ ಯಾದವ್ ಕಡೆಗಣಿಸಿದ್ದಾರೆ ಎನ್ನುವ ಆರೋಪ ಶಿವಪಾಲ್ ಯಾದವ್ ಅವರದ್ದು.
ಈ ಎಲ್ಲಾ ಬೆಳವಣಿಗೆಯಿಂದ ಅಖಿಲೇಶ್ ಯಾದವ್ ಅವರು ಶಿವಪಾಲ್ ಯಾದವ್ ಅವರು ಸಮಾಜವಾದಿ ಪಕ್ಷದ ಸದಸ್ಯರಲ್ಲ, ಮಿತ್ರ ಪಕ್ಷ ಎಂದು ಅವರಿಗೆ ಪದೇ ಪದೇ ನೆನಪಿಸಿದ್ದಾರೆ. ಹೀಗಾಗಿ ಮನನೊಂದ ಅವರು ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಜೊತೆಗೆ ಈ ಭೇಟಿ ಶಿವಪಾಲ್ ಯಾದವ್ ಪಕ್ಷ ಬದಲಿಸುವ ವಿಚಾರವೂ ಆಗಿರಬಹುದು ಎನ್ನಲಾಗುತ್ತಿದೆ. ಒಟ್ಟಾರೆ ಶಿವಪಾಲ್ ಯಾದವ್ ಸೊಸೆ ಅಪರ್ಣಾ ಯಾದವ್ ಅವರಂತೆ ಎಸ್ಪಿ ತೊರೆದು ಬಿಜೆಪಿ ಸೇರುವ ಎಲ್ಲಾ ಲಕ್ಷಣಗಳು ದಟ್ಟವಾಗಿ ಕಾಣುತ್ತಿವೆ.