ತೀವ್ರ ಹಿನ್ನಡೆ: ಉ.ಪ್ರದೇಶದಲ್ಲಿ ಬಿಎಸ್ಪಿ-ಎಸ್ಪಿ ಮೈತ್ರಿಕೂಟಕ್ಕೆ ಗಾಯದ ಮೇಲೆ ಬರೆ
ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗದಂತೆ ತಡೆಯಲು ಮಾಡಿಕೊಂಡಿರುವ ಮೈತ್ರಿಯಿಂದಾಗಿ ಉತ್ತರಪ್ರದೇಶದಲ್ಲಿ, ಬಹುಜನ ಸಮಾಜಪಕ್ಷ ಮತ್ತು ಸಮಾಜವಾದಿ ಪಕ್ಷಕ್ಕೆ ದಿನದಿಂದ ದಿನಕ್ಕೆ ಹಿನ್ನಡೆಯಾಗುತ್ತಿದೆಯೇ ಎನ್ನುವ ಚರ್ಚೆ ಆರಂಭವಾಗಿದೆ.
ಇದಕ್ಕೆ ಭಾರತೀಯ ಜನತಾಪಕ್ಷದ ಕಾರ್ಯತಂತ್ರ ಕಾರಣವೇ ಅಥವಾ ಏರುತ್ತಿರುವ ಮೋದಿಯವರ ಜನಪ್ರಿಯತೆಯೇ ಎಂದರೆ, ಉತ್ತರ ಅವೆರಡೂ ಅಲ್ಲದೇ, ಪ್ರಿಯಾಂಕ ಗಾಂಧಿ ಎಂಟ್ರಿಯ ನಂತರ, ಕಾಂಗ್ರೆಸ್ ವೋಟ್ ಬ್ಯಾಂಕ್ ಬಲಗೊಳ್ಳುತ್ತಿರುವುದು.
ಅಖಿಲೇಶ್ ಯಾದವ್ ಮತ್ತು ಮಾಯಾವತಿ ಸೀಟು ಹೊಂದಾಣಿಕೆ ಮಾಡಿಕೊಂಡಾಗ, ಬರೀ ಎರಡು ಸೀಟನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿತ್ತು ಅಥವಾ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವ ತೀರ್ಮಾನಕ್ಕೆ ಬಂತು. ಇದು, ರಾಷ್ಟ್ರೀಯ ಪಕ್ಷಕ್ಕೆ ಮಾಡಿದ ಅವಮಾನವೆಂದೇ ಹೇಳಲಾಗುತ್ತಿತ್ತು.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಮತ್ತೆ ಮಾಯಾವತಿ ಮಂಗಳಾರತಿ
ಇದಕ್ಕೆ ತಿರುಗೇಟು ಎನ್ನುವಂತೆ ಪ್ರಿಯಾಂಕ ಗಾಂಧಿ ರಾಜಕೀಯಕ್ಕೆ ಅಧಿಕೃತ ಎಂಟ್ರಿಯನ್ನು ಕೊಟ್ಟರು. ಜೊತೆಗೆ, ಒಟ್ಟು ಎಂಬತ್ತು ಲೋಕಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿತ್ತು. ಪ್ರಿಯಾಂಕ ಗಾಂಧಿಯ ಸಂಚಲನ ಮೂಡಿಸುವ ಪ್ರಚಾರದ ನಡುವೆ, ಅಖಿಲೇಶ್ ಚಿಕ್ಕಪ್ಪ, ಪ್ರತ್ಯೇಕವಾಗಿ ನಲವತ್ತು ಕ್ಷೇತ್ರದಲ್ಲಿ ಸ್ಪರ್ಧಿಸುವ ಅಂತಿಮ ತೀರ್ಮಾನಕ್ಕೆ ಬಂದಿರುವುದು, ಎಸ್ಪಿ - ಬಿಎಸ್ಪಿ ಮೈತ್ರಿಕೂಟಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
29 ಲೋಕಸಭಾ ಕ್ಷೇತ್ರ ಪೂರ್ವ ಉ.ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ
ಉತ್ತರಪ್ರದೇಶದ ಎಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತದಲ್ಲಿ (ಏ 11, 18, 23, 29, ಮೇ 6, 12 ಮತ್ತು 19) ಚುನಾವಣೆ ನಡೆಯಲಿದ್ದು ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ. ಪ್ರಿಯಾಂಕ ಗಾಂಧಿಯನ್ನು ಪೂರ್ವ ಉತ್ತರಪ್ರದೇಶದ ಉಸ್ತುವಾರಿಯನ್ನಾಗಿ ರಾಹುಲ್ ಗಾಂಧಿ ನೇಮಕ ಮಾಡಿದ ನಂತರ, ಕಾಂಗ್ರೆಸ್ಸಿನ ಪ್ರಚಾರದ ಸ್ಟೈಲೇ ಬದಲಾಗಿದೆ. ಪಕ್ಷದ ಹೊಸ ಕಾರ್ಯಕರ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. 29 ಲೋಕಸಭಾ ಕ್ಷೇತ್ರ ಪೂರ್ವ ಉ.ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಈ ವ್ಯಾಪ್ತಿಯ 29 ರಲ್ಲಿ 27ಸ್ಥಾನವನ್ನು ಗೆದ್ದಿತ್ತು.
ಚುನಾವಣೆಗೆ ಸ್ಪರ್ಧಿಸದಿದ್ದರೇನಂತೆ, ಮಾಯಾವತಿ ಪ್ರಧಾನಿಯಾಗಬಹುದು!
ಪ್ರಿಯಾಂಕ ನಡೆಸುತ್ತಿರುವ ಪ್ರಚಾರ, ಮೈತ್ರಿಕೂಟದ ಮತಬ್ಯಾಂಕಿಗೆ ಲಗ್ಗೆ
ಇದರಲ್ಲಿ ಗೋರಖಪುರ, ಅಯೋಧ್ಯಾ, ವಾರಣಾಸಿ, ಬಲಿಯಾ ಮುಂತಾದ ಕ್ಷೇತ್ರಗಳೂ ಸೇರಿವೆ. ಈಗ, ಪ್ರಿಯಾಂಕ ನಡೆಸುತ್ತಿರುವ ಪ್ರಚಾರ, ಮೈತ್ರಿಕೂಟದ ಮತಬ್ಯಾಂಕಿಗೆ ಲಗ್ಗೆ ಹೊಡೆಯಲಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ. ಹೀಗಾಗಿ, ಬಿಜೆಪಿ ಒಂದು ಕಡೆ, ಇನ್ನೊಂದು ಕಡೆ ಬಿಎಸ್ಪಿ-ಎಸ್ಪಿ ಮತ್ತು ಕಾಂಗ್ರೆಸ್. ಹಾಗಾಗಿ, ಕಾಂಗ್ರೆಸ್ ಪಕ್ಷಕ್ಕೆ ಬೀಳುವ ಮತಗಳು, ಮೈತ್ರಿಕೂಟದ ಗೆಲುವಿನ ಲೆಕ್ಕಾಚಾರಕ್ಕೆ ಹೊಡೆತ ತರಲಿದೆ ಎನ್ನುವುದು ಸದ್ಯದ ಲೆಕ್ಕಾಚಾರ. ಪ್ರಿಯಾಂಕ ಗಾಂಧಿಯ ಪ್ರಚಾರ ಇದೇ ರೀತಿ ಮುಂದುವರಿದರೆ, ಒಂದೋ ಇದು ಬಿಜೆಪಿಗೆ ಲಾಭವಾಗಲಿದೆ, ಇಲ್ಲವೇ ಕಾಂಗ್ರೆಸ್ ಶಕ್ತಿ ಉತ್ತರಪ್ರದೇಶದಲ್ಲಿ ವೃದ್ದಿಗೊಳ್ಳಲಿದೆ.
ಎಸ್ಪಿ-ಬಿಎಸ್ಪಿ ಮೈತ್ರಿಗೆ ಮತ್ತೆ ಮತ ವಿಭಜನೆಯ ಭೀತಿ
ಈಗಿನ ರಾಜಕೀಯ ಚಿತ್ರಣದ ಪ್ರಕಾರ, ಪ್ರಿಯಾಂಕ ಮಾಡುತ್ತಿರುವ ಪ್ರಚಾರದಿಂದಾಗಿ ಮಾಯಾವತಿ ಮತ್ತು ಅಖಿಲೇಶ್ ಕಸಿವಿಸಿಗೊಂಡಿದ್ದಾರೆ ಜೊತೆಗೆ, ತಮ್ಮ ತಂತ್ರಗಾರಿಕೆಯನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಇದರ ನಡುವೆ, ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಬಂದಿರುವುದರಿಂದ, ಎಸ್ಪಿ-ಬಿಎಸ್ಪಿ ಮೈತ್ರಿಗೆ ಮತ್ತೆ ಮತ ವಿಭಜನೆಯ ಭೀತಿ ಎದುರಾಗಿದೆ.
ಶಿವಪಾಲ್ ಯಾದವ್ ನಡುವಿನ ಸಂಬಂಧ ಬಹಳ ಹಿಂದೆಯೇ ಹಳಸಿತ್ತು
ಅಖಿಲೇಶ್ ಮತ್ತು ಶಿವಪಾಲ್ ಯಾದವ್ ನಡುವಿನ ಸಂಬಂಧ ಬಹಳ ಹಿಂದೆಯೇ ಹಳಸಿತ್ತು. ತಮ್ಮ ಪ್ರಗತಿಶೀಲ ಸಮಾಜವಾದಿ ಪಕ್ಷದ (ಪಿಎಸ್ಪಿ) ಚಿಹ್ನೆಯಡಿ ನಲವತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಶಿವಪಾಲ್ ನಿರ್ಧಾರಿಸಿದ್ದು, 31ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನೂ ಘೋಷಣೆ ಮಾಡಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶವೇನಂದರೆ, ಶಿವಪಾಲ್ ಘೋಷಣೆ ಮಾಡಿರುವ 31 ಅಭ್ಯರ್ಥಿಗಳ ಪೈಕಿ 29 ಅಭ್ಯರ್ಥಿಗಳು, ಸಮಾಜವಾದಿ ಪಕ್ಷದ ಮಾಜಿ ಪ್ರಭಾವಿ ಮುಖಂಡರು. ಚುನಾವಣೆಯ ವೇಳೆ ಅಖಿಲೇಶ್ ಯಾದವ್ ಗೆ ಆದ ತೀವ್ರ ಹಿನ್ನಡೆಯಿದು ಎಂದೇ ಹೇಳಲಾಗುತ್ತಿದೆ.
ಬಿಜೆಪಿಗೆ ಇನ್ನಷ್ಟು ದಾರಿಯನ್ನು ಸುಲಭ ಮಾಡಿಕೊಟ್ಟಂತಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ
ಒಂದೆಡೆ ಮಾಯಾವತಿ, ಕಾಂಗ್ರೆಸ್ ವಿರುದ್ದ ಕಿಡಿಕಾರುತ್ತಲೇ ಇದ್ದಾರೆ. ಮೈತ್ರಿಗೆ ಬಿಸಿಮುಟ್ಟಿಸಬೇಕೆಂದು ಕಾಂಗ್ರೆಸ್ 73ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದೆ. ಇದರ ಜೊತೆಗೆ, ಪ್ರಿಯಾಂಕ ಗಾಂಧಿಯ ಅಬ್ಬರದ ಪ್ರಚಾರ. ಇವು ಮೈತ್ರಿಕೂಟಕ್ಕೆ ಹಿನ್ನಡೆ ತರಬಹುದಾದ ಅಂಶಗಳು ಎಂದು ಹೇಳಲಾಗುತ್ತಿದೆ, ಇದರ ನಡುವೆ, ಅಖಿಲೇಶ್ ಯಾದವ್ ಚಿಕ್ಕಪ್ಪ ಕಣಕ್ಕೆ ಧುಮುಕಿದ್ದು, ಬಿಜೆಪಿಗೆ ಇನ್ನಷ್ಟು ದಾರಿಯನ್ನು ಸುಲಭ ಮಾಡಿಕೊಟ್ಟಂತಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.