ಕಾಂಗ್ರೆಸ್-ಬಿಜೆಪಿ ಇಲ್ಲದ ಸಂಯುಕ್ತ ಕೂಟ: ಅಖಿಲೇಶ್ ಏನಂತಾರೆ?
ಲಕ್ನೋ, ಡಿಸೆಂಬರ್ 26: "ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ರಚಿಸಲು ಹೊರಟಿರುವ ಸಂಯುಕ್ತ ಕೂಟ ಅತ್ಯುತ್ತಮ ಪರಿಕಲ್ಪನೆ" ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡು ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು, ಪ್ರಾದೇಶಿಕ ಪಕ್ಷಗಳೆಲ್ಲ ಸೇರಿ ಒಂದು ಮೈತ್ರಿಕೂಟವನ್ನು ನಿರ್ಮಿಸಲು ಮುಂದಾಗಿದ್ದು, ಅದೇ'ಸಂಯುಕ್ತ ಕೂಟ' ಅಥವಾ ಫೆಡರಲ್ ಫ್ರಂಟ್.
ಮೋದಿ, ಮಾಯಾ, ಅಖಿಲೇಶ್ ರನ್ನು ಭೇಟಿಯಾಗಲಿರುವ ಕೆಸಿಆರ್
ಸಂಯುಕ್ತ ಕೂಟದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್, 'ಪ್ರಾದೇಶಿಕ ಪಕ್ಷಗಳೆಲ್ಲ ಒಂದಾಗುವ ಪ್ರಯತ್ನ ಹಲವು ತಿಂಗಳುಗಳಿಂದ ನಡೆಯುತ್ತಿದೆ. ಈ ಯೋಚನೆಯನ್ನು ಕಾರ್ಯರೂಪಕ್ಕೆ ತರುದ ದಿಕ್ಕಿನಲ್ಲಿ ಯೋಚಿಸಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರಿಗೆ ಎ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಾನು ಹೈದರಾಬಾದಿಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ' ಎಂದು ಅಖಿಲೇಶ್ ಹೇಳಿದರು.
ಸಂಯುಕ್ತ ಕೂಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಸಿಆರ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ಪಿ ನಾಯಕಿ ಮಾಯಾವತಿ ಸೇರಿದತೆ ಹಲವು ಪ್ರಾದೇಶಿಕ ಪಕ್ಷಗಳ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!
ಒಟ್ಟಿನಲ್ಲಿ ಕೆಸಿಆರ್ ನಡೆ ಕಾಂಗ್ರೆಸ್ ಮತ್ತು ಬಿಜೆಪಿಗೆ ದುಃಸ್ವಪ್ನವಾಗಲಿದ್ದು, ಸಂಯುಕ್ತ ಕೂಟದ ಪರಿಕಲ್ಪನೆಯನ್ನು ಅಖಿಲೇಶ್ ಯಾದವ್ ಸಹ ಸ್ವಾಗತಿಸಿದ್ದಾರೆ.