ಪ್ರಿಯಾಂಕಾ ದಲಿತ ರಾಜಕೀಯಕ್ಕೆ ಕಂಗಾಲಾದ ಮಾಯಾವತಿ, ಅಖಿಲೇಶ್
ಲಕ್ನೋ, ಮಾರ್ಚ್ 14: ಪ್ರಿಯಾಂಕಾ ಗಾಂಧಿ ದಲಿತ ರಾಜಕೀಯಕ್ಕೆ ಬಿಎಸ್ಪಿ ನಾಯಕಿ ಹಾಗೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕಂಗಾಲಾಗಿದ್ದಾರೆ.
ದೇಶದ ಯಾವುದೇ ರಾಜ್ಯಗಳಲ್ಲೂ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಬಹುಜನ ಸಮಾಜ ಪಕ್ಷ ಘೋಷಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಭೀಮಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಪ್ರಿಯಾಂಕಾ ಗಾಂಧಿ ಆಸ್ಪತ್ರೆಯಲ್ಲಿ ಭೇಟಿಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ : ಮಾಯಾವತಿ
ಪಿಎಸ್ಪಿಗೆ ಸ್ಪಷ್ಟ ಸಂದೇಶ ನೀಡುವ ಉದ್ದೇಶದಿಂದಲೇ ಪ್ರಿಯಾಂಕಾ ಚಂದ್ರಶೇಖರ ಆಜಾದ್ ಅವರನ್ನು ಬುಧವಾರ ರಾತ್ರಿ ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಭೇಟಿ ಹಿನ್ನೆಲೆಯಲ್ಲಿ ದಲಿತ ಮತಗಳ ಮೇಲೆ ಕಣ್ಣಿಟ್ಟಿರುವಂತಹ ಬಿಎಸ್ಪಿ ಈ ಸಭೆಯ ಬಳಿಕ ಆತಂಕಗೊಂಡಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ಚಿತ್ರಣಗಳ ಕುರಿತು ಚರ್ಚಿಸಲು ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಉಭಯ ಪಕ್ಷಗಳು ಈ ಭೇಟಿಯನ್ನು ಪ್ರಿಯಾಂಕಾ ಭೇಟಿಗೂ ಯಾವುದೇ ಸಂಭಂದವಿಲ್ಲ ಎಂದು ಹೇಳುತ್ತಿವೆ.
ಮುಂದಿನ ಲೋಕಸಭಾ ಚುನಾವಣೆಗೆ ಜಂಟಿ ಸಮಾವೇಶಗಳನ್ನು ನಡೆಸುವ ಕುರಿತು ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಬ್ರಾಹ್ಮಣರಿಗೆ ಹೆಚ್ಚು ಟಿಕೆಟ್
ಕಾಂಗ್ರೆಸ್ ಜೊತೆ ಮೈತ್ರಿ ಧಿಕ್ಕರಿಸಿ ಸಮಾಜವಾದಿ ಪಕ್ಷದ ಜೊತೆ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುವ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡಲು ನಿರ್ಧರಿಸಿದ್ದಾರೆ. ಮಾಯಾವತಿ ಅವರು ದಲಿತ ಮತ್ತು ತುಳಿತಕ್ಕೊಳಗಾದ ವರ್ಗದ ಅಧಿನಾಯಕಿಯಂತಿದ್ದರೂ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಬಹುಜನ ಸಮಾಜ ಪಕ್ಷದ ಪರವಾಗಿ ಹೆಚ್ಚು ಟಿಕೆಟ್ ಬ್ರಾಹ್ಮಣರಿಗೆ ನೀಡಲಿದ್ದಾರೆ. ಅವರ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದಲ್ಲಿ ಹಿಂದುಳಿದವರ್ಗದವರೆಷ್ಟಿದ್ದಾರೆ?
ಉತ್ತರ ಪ್ರದೇಶದಲ್ಲಿ ಶೇ.44ರಷ್ಟು ಹಿಂದುಳಿದ ವರ್ಗದವರಿದ್ದಾರೆ. ಒಂದೊಮ್ಮೆ ಬ್ರಾಹ್ಮಣರಿಗೆ ಹೆಚ್ಚು ಟಿಕೆಟ್ ನೀಡಿ ಹಿಂದುಳಿದ ವರ್ಗದವರನ್ನು ನರ್ಲಕ್ಷಿಸುತ್ತಿದ್ದಾರೆಯೇ ಮಾಯಾವತಿ ಎನ್ನುವ ಅನುಮಾನವೂ ಕಾಡಿದೆ. ಆದರೆ ಉತ್ತರ ಪ್ರದೇಶದಲ್ಲಿ ಜಾತಿ ಲಕ್ಕಾಚಾರವಿಲ್ಲದೆ ಯಾವುದೂ ನಡೆಯುವುದಿಲ್ಲ ಇದರ ಹಿಂದೆ ಬಲವಾದ ಕಾರಣ ಇದೆ ಎನ್ನುವುದು ಕೂಡ ಸಾಬೀತಾಗಿದೆ. ದಲಿತರು ರಾಜ್ಯದಲ್ಲಿ ಇರುವುದು ಶೇ.21.1ರಷ್ಟು. ಇನ್ನು ಮೇಲ್ವರ್ಗದವರು ಶೇ.16ರಷ್ಟಿದ್ದಾರೆ. ಅವರಲ್ಲಿ ಬ್ರಾಹ್ಮಣರದ್ದು ಶೇ.10, ಠಾಕೂರ್ ಶೇ.3, ವೈಶ್ಯ ಶೇ.2, ತ್ಯಾಗಿ ಮತ್ತು ಭೂಮಿಹಾರ್ ಶೇ.1.1ರಷ್ಟಿದೆ. ಮುಸ್ಲಿಂರದ್ದು ಶೇ.19.3ರಷ್ಟಿದ್ದಾರೆ.
ಸಮಾಜವಾದಿ ಪಕ್ಷ, ಬಿಎಸ್ಪಿ ಎಷ್ಟರಲ್ಲಿ ಸ್ಪರ್ಧೆ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮೈತ್ರಿ ಮಾಡಿಕೊಂಡಿದ್ದಾರೆ. ಬಹುಜನ ಸಮಾಜ ಪಕ್ಷ 38 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಅದರ ಮೈತ್ರಿಕೂಟದ ಅಂಗಪಕ್ಷ ಸಮಾಜವಾದಿ ಪಕ್ಷ 37 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ಬ್ರಾಹ್ಮಣರ ಮತ ಬಿಜೆಪಿ ಕಡೆ ಹೋಗದಿರಲು ತಂತ್ರ
ಬಹುಜನ ಸಮಾಜ ಪಕ್ಷದಿಂದ ಬ್ರಾಹ್ಮಣರಿಗೆ ಹೆಚ್ಚು ಟಿಕೆಟ್ ನೀಡಲು ಕಾರಣವೇನೆಂದು ನೋಡುತ್ತಾ ಹೋದರೆ ಕಾಂಗ್ರೆಸ್ಸಿನಿಂದಲೂ ದೂರವಿರುವ ಮಾಯಾವತಿ ಅವರದು ಈ ನಡೆ, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಎರಡನ್ನೂ ಬೇಸ್ತು ಬೀಳಿಸುವ ಮಾಸ್ಟರ್ ಸ್ಟ್ರೋಕ್ ಎಂದೇ ಬಣ್ಣಿಸಲಾಗುತ್ತಿದೆ. ಬ್ರಾಹ್ಮಣರ ಮತಗಳು ಬಿಜೆಪಿಗೂ ಹೋಗಬಾರದು, ಕಾಂಗ್ರೆಸ್ಸಿಗೂ ದಕ್ಕಬಾರದು ಎಂಬುದು ಈ ನಡೆಯ ಹಿಂದಿನ ಉದ್ದೇಶ ಎನ್ನಲಾಗುತ್ತಿದೆ.