ಯುಪಿ ಚುನಾವಣೆ: ಬಿಜೆಪಿ ವಿರುದ್ದ ರಣಕಹಳೆ, ಮೈತ್ರಿಗಾಗಿ 'ನಮ್ಮ ಪಕ್ಷದ ಬಾಗಿಲು ತೆರೆದಿದೆ' ಎಂದ ಅಖಿಲೇಶ್
ಲಕ್ನೋ, ಆ.02: ''ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮೈತ್ರಿಗಾಗಿ ಎಲ್ಲಾ ಸಣ್ಣ ಪಕ್ಷಗಳಿಗೆ ತಮ್ಮ ಪಕ್ಷದ ಬಾಗಿಲು ತೆರೆದಿದೆ ಮತ್ತು ಬಿಜೆಪಿಯನ್ನು ಸೋಲಿಸಲು ಅಂತಹ ಎಲ್ಲಾ ರಾಜಕೀಯ ಸಂಘಟನೆಗಳು ಒಟ್ಟಾಗಿ ಸೇರಲು ಪ್ರಯತ್ನಿಸುತ್ತೇವೆ,'' ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಹೇಳಿದ್ದಾರೆ.
ಇನ್ನು ತಮ್ಮ ಸಮಾಜವಾದಿ ಪಕ್ಷದ (ಎಸ್ಪಿ) ಮೇಲೆ ನಿರಂತರ ವಾಗ್ದಾಳಿ ಮಾಡುವ ಕಾಂಗ್ರೆಸ್ ಮತ್ತು ಬಿಎಸ್ಪಿ ಪಕ್ಷಗಳೊಂದಿಗೂ ಮೈತ್ರಿಯ ಸುಳಿವು ನೀಡಿರುವ ಎಸ್ಪಿ ನಾಯಕ ಅಖಿಲೇಶ್ ಯಾದವ್, ''ಕಾಂಗ್ರೆಸ್ ಮತ್ತು ಬಿಎಸ್ಪಿ ಯಾರ ಕಡೆಯಲ್ಲಿ ಇದೆ,'' ಎಂದು ಪ್ರಶ್ನಿಸಿದರು. ಹಾಗೆಯೇ ''ಈ ಎರಡು ಪಕ್ಷಗಳು ತಮ್ಮ ಹೋರಾಟ ಬಿಜೆಪಿ ಅಥವಾ ಎಸ್ಪಿ ಜೊತೆಗೆಯೇ ಎಂಬುದನ್ನು ನಿರ್ಧರಿಸಬೇಕು," ಎಂದು ತಿಳಿಸಿದ್ದಾರೆ.
ಯುಪಿ ಚುನಾವಣೆ ಅಖಾಡ: ಪವಾರ್-ಅಖಿಲೇಶ್ ಮೈತ್ರಿ, ಕುತೂಹಲ ಮೂಡಿಸಿದ ರಣತಂತ್ರ
ಮುಂಬರುವ ರಾಜ್ಯ ಚುನಾವಣೆಗೆ ಸಂಭವನೀಯ ಮೈತ್ರಿಗಳ ಕುರಿತು, ಮಾತನಾಡಿದ ಅಖಿಲೇಶ್ ಯಾದವ್, "ನಮ್ಮ ಪಕ್ಷದ ಬಾಗಿಲುಗಳು ಎಲ್ಲಾ ಸಣ್ಣ ಪಕ್ಷಗಳಿಗೂ ತೆರೆದಿವೆ. ಅನೇಕ ಸಣ್ಣ ಪಕ್ಷಗಳು ಈಗಾಗಲೇ ನಮ್ಮೊಂದಿಗೆ ಇವೆ. ಇನ್ನಷ್ಟು ನಮ್ಮೊಂದಿಗೆ ಬರುತ್ತದೆ," ಎಂದು ಹೇಳಿದರು. ಚರ್ಚೆಗಳು ಮತ್ತು ವಿಶ್ಲೇಷಣೆಯ ನಂತರ, ಸರಿಯಾದ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು. ಹಾಗೆಯೇ ಯುಪಿ ಮಾಜಿ ಮುಖ್ಯಮಂತ್ರಿ ತಮ್ಮ ಪಕ್ಷವು 350 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರತಿಪಾದಿಸಿದರು.
ಹಾಗೆಯೇ ಎಸ್ಪಿ ನಾಯಕ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಪೆಗಾಸಸ್ ಬೇಹುಗಾರಿಕೆಯ ವಿಚಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಯುಪಿ ಚುನಾವಣೆಯತ್ತ ಚಿತ್ತ: ರಾಜ್ಯ ಪ್ರವಾಸ ಪುನರಾರಂಭಿಸಿದ ಅಖಿಲೇಶ್ ಯಾದವ್
ಪೆಗಾಸಸ್: ಬಿಜೆಪಿ ಸರ್ಕಾರದಿಂದ ವಿದೇಶಿ ಪಡೆಗಳಿಗೆ ಸಹಾಯ
"ಎನ್ಡಿಎ ಲೋಕಸಭೆಯಲ್ಲಿ 350 ಕ್ಕಿಂತ ಹೆಚ್ಚು ಸ್ಥಾನಗಳನ್ನು ಹೊಂದಿದ್ದಾರೆ. ಬಿಜೆಪಿ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಸರ್ಕಾರವು ಏಕೆ ಮತ್ತು ಏನನ್ನು ಈ ಬೇಹುಗಾರಿಕೆಯ ಮೂಲಕ ಪತ್ತೆಹಚ್ಚಲು ಪ್ರಯತ್ನಿಸುತ್ತಿತ್ತು?,'' ಎಂದು ಪ್ರಶ್ನಿಸಿರುವ ಯಾದವ್, ''ಸರ್ಕಾರವು ಹೀಗೆ ಬೇಹುಗಾರಿಕೆ ನಡೆಸಿ ವಿದೇಶಿ ಪಡೆಗಳಿಗೆ ಸಹಾಯ ಮಾಡುತ್ತಿದೆ"ಎಂಬ ಗಂಭೀರ ಆರೋಪವನ್ನು ಅಖಿಲೇಶ್ ಮಾಡಿದರು.
ಎಲ್ಲಾ ಸಣ್ಣ ಪಕ್ಷಗಳೊಂದಿಗೆ ಮೈತ್ರಿಗೆ ಎಸ್ಪಿ ಸಿದ್ಧ
ಇನ್ನು ತನ್ನ ಚಿಕ್ಕಪ್ಪ ಶಿವಪಾಲ್ ಯಾದವ್ರ ಪ್ರಗತಿಶೀಲ್ ಸಮಾಜವಾದಿ ಪಕ್ಷದ ಬಗ್ಗೆ ಪಿಟಿಐ ಪ್ರಶ್ನಿಸಿದಾಗ, ಎಲ್ಲಾ ಸ್ಥಾನಗಳ ಮೇಲೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಯಾದವ್, "ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಲು ನಾವು ಪ್ರಯತ್ನಿಸುತ್ತೇವೆ," ಎಂದರು. ಈ ಮೂಲಕ ಪ್ರಗತಿಶೀಲ್ ಸಮಾಜವಾದಿ ಪಕ್ಷದೊಂದಿಗೂ ಮೈತ್ರಿಗೆ ಸಿದ್ದ ಎಂಬ ಸುಳಿವು ನೀಡಿದರು. ಇನ್ನು ಈಗಾಗಲೇ ಎಸ್ಪಿ ಮುಂದಿನ ಚುನಾವಣೆಯಲ್ಲಿ ಶರದ್ ಪವಾರ್ನ ಎನ್ಸಿಪಿ ಜೊತೆಗೆ ಮೈತ್ರಿ ನಡೆಸಲು ಚಿಂತನೆ ನಡೆಸಿದೆ.
ಓಂ ಪ್ರಕಾಶ್ ರಾಜ್ಭಾರ್ರ ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ (ಎಸ್ಬಿಎಸ್ಪಿ) ನೇತೃತ್ವದ ಭಗಿದರಿ ಮೋರ್ಚಾದಲ್ಲಿ ಎಐಎಂಐಎಂ ನಾಯಕ ಅಸ್ಸದುದ್ದೀನ್ ಓವೈಸಿ ಕೂಡ ಭಾಗವಹಿಸಿದ್ದರು. "ಇದುವರೆಗೂ ಅವರೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ" ಎಂದು ಹೇಳಿದರು.
ಬಿಜೆಪಿಯ ಲಸಿಕೆಗೆ ನಮ್ಮ ವಿರೋಧ, 'ಭಾರತ ಸರ್ಕಾರ'ದ ಲಸಿಕೆಗೆ ಸ್ವಾಗತ: ಅಖಿಲೇಶ್ ಯಾದವ್
ಬಿಎಸ್ಪಿ, ಕಾಂಗ್ರೆಸ್ ಜೊತೆಗೂ ಮೈತ್ರಿ?
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ಟ್ವೀಟ್ಗಳಲ್ಲಿ ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ತನ್ನ ಗೆಲುವನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಯಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸುತ್ತಿರುವಾಗ, ಈ "ಟ್ರಿಕ್ಸ್" ಹಿಂದಿನ ಎಸ್ಪಿ ಸರ್ಕಾರ ಬಳಸಿದ ವಿಧಾನಗಳನ್ನು ಹೋಲುತ್ತದೆ ಎಂದು ಟೀಕಿಸಿದ್ದರು. ಈ ಎಲ್ಲಾ ಬೆಳವಣಿಗೆಯ ಹೊರತಾಗಿಯೂ ಎಸ್ಪಿ ನಾಯಕ ಈ ಬಿಎಸ್ಪಿ ಜೊತೆಗೂ ಮೈತ್ರಿ ನಡೆಸಲು ಸಿದ್ದ ಎಂದು ಹೇಳಿದೆ. ಹಾಗೆಯೇ ಕಾಂಗ್ರೆಸ್ ಜೊತೆಗೂ ಮೈತ್ರಿ ನಡೆಸಲಾಗುವುದು ಎಂದಿದೆ. ಬಿಜೆಪಿಯನ್ನು ಸೋಲಿಸುವ ಗುರಿಯೊಂದೇ ಕಣ್ಣ ಮುಂದೆ ಎಂದು ಎಸ್ಪಿ ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಕೂಡ ಎಸ್ಪಿ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ''ಪಕ್ಷದ ನಾಯಕರ ಹೇಳಿಕೆಗಳು ನಿರಾಶೆ ಮತ್ತು ಹತಾಶೆಯನ್ನು ಪ್ರತಿಬಿಂಬಿಸುತ್ತವೆ,'' ಎಂದು ಹೇಳಿದ್ದರು.
ಬ್ರಾಹ್ಮಣ ಸಮ್ಮೇಳನದಂತೆ ಎಸ್ಪಿ ಸಭೆ
ಬಿಎಸ್ಪಿ ಮತ್ತು ಇತರ ಪಕ್ಷಗಳು ಆಯೋಜಿಸಿದ ಬ್ರಾಹ್ಮಣ ಸಮ್ಮೇಳನಗಳು ಸೇರಿದಂತೆ ಜಾತಿ ಸಮ್ಮೇಳನಗಳ ಬಗ್ಗೆ, ಅಖಿಲೇಶ್ ಯಾದವ್ ಮಾತನಾಡಿ, ಎಸ್ಪಿ ಕೂಡ ಇಂತಹ ಸಭೆಗಳನ್ನು ಏರ್ಪಡಿಸುತ್ತಿದ್ದರು ಎಂದು ತಿಳಿಸಿದ್ದಾರೆ. "ನಮ್ಮ ಹಿಂದುಳಿದ ಸಮ್ಮೇಳನಗಳು ಮತ್ತು ಇತರ ಇತರ ಸಭೆಗಳು ನಡೆಯುತ್ತಿವೆ. ಎರಡನೇ ಕೋವಿಡ್ ಅಲೆ ಪ್ರಾರಂಭವಾಗುವ ಮೊದಲು, ಪಕ್ಷವು 150 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಮೂರು ದಿನಗಳ ಶಿಬಿರಗಳನ್ನು ಮಾಡಿತ್ತು. ಪಕ್ಷದ ಸಿದ್ಧಾಂತವಾದಿ ಜನೇಶ್ವರ್ ಮಿಶ್ರಾ ಜನ್ಮ ದಿನಾಚರಣೆಯಂದು ಆಗಸ್ಟ್ 5 ರಂದು ಪಕ್ಷವು ಯಾತ್ರೆಯನ್ನು ಕೈಗೊಳ್ಳಲಿದೆ. ಆಗಸ್ಟ್ 15 ರಿಂದ ಬಿಜೆಪಿಯ ದುರಾಡಳಿತವನ್ನು ಬಹಿರಂಗಪಡಿಸುವ ಮೂಲಕ ಹೆಚ್ಚಿನ ಯಾತ್ರೆಗಳನ್ನು ಕೈಗೊಳ್ಳಲಾಗುವುದು," ಎಂದು ತಿಳಿಸಿದರು.
ಯೋಗಿ ಮಾದರಿಯ ವಿರುದ್ದ ಅಖಿಲೇಶ್ ಕಿಡಿ
ಎರಡನೇ ಕೋವಿಡ್ ಅಲೆಯ ಸಮಯದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕೋವಿಡ್ -19 ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿ ಮತ್ತು "ಯೋಗಿ ಮಾದರಿ" ಯನ್ನು ಎಸ್ಪಿ ನಾಯಕ ಟೀಕಿಸಿದರು. "ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರು ಆಮ್ಲಜನಕ, ಹಾಸಿಗೆಗಳು ಮತ್ತು ಔಷಧಿಗಳ ಕೊರತೆಯಿಂದ ಸತ್ತರು. ಎಲ್ಲರೂ ಆಸ್ಪತ್ರೆಗಳು ಮತ್ತು ಶ್ಮಶಾನಗಳ ಪರಿಸ್ಥಿತಿಯನ್ನು ನೋಡಿದ್ದಾರೆ. ಇದು ಯಾವ ಮಾದರಿ? ಜನರು ಇದನ್ನು ಹತ್ತಿರದಿಂದ ನೋಡಿದ್ದಾರೆ ಮತ್ತು ಜನರು ಬಿಜೆಪಿಗೆ ಸೂಕ್ತ ಸಮಯದಲ್ಲಿ ಉತ್ತರಿಸುತ್ತಾರೆ," ಎಚ್ಚರಿಕೆ ನೀಡಿದರು. ಹಾಗೆಯೇ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಯಾದವ್ ಕೇಸರಿ ಪಕ್ಷವು ತನ್ನದೇ ಆದ 2017 ರ ಚುನಾವಣಾ ಪ್ರಣಾಳಿಕೆಯನ್ನು ನೋಡಿಲ್ಲ, ಇದರಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಮಾತನಾಡಿದೆ ಎಂದು ಹೇಳಿದರು.
"ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಯಾವುದೇ ಮೂಲಸೌಕರ್ಯಗಳನ್ನು ಸೃಷ್ಟಿಸಿಲ್ಲ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ನಾವು ಎಸ್ಪಿ ಆಡಳಿತದಲ್ಲಿ ಏನೇ ಅಭಿವೃದ್ಧಿಪಡಿಸಿದ್ದೇವೋ ಅದನ್ನು ಬಳಸಲಾಯಿತು. ಬಿಜೆಪಿಯು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯ ಹೆಸರಿನಲ್ಲಿ ವಿಶ್ವವಿದ್ಯಾನಿಲಯವನ್ನು ಮಾಡಿದರು. ನಮ್ಮ ಆಡಳಿತದಲ್ಲಿ ನಿರ್ಮಿಸಲಾದ ರಾಮ್ ಮನೋಹರ್ ಲೋಹಿಯಾ ಮೆಡಿಕಲ್ ಇನ್ಸ್ಟಿಟ್ಯೂಟ್ನ ಒಂಬತ್ತನೇ ಮಹಡಿಯಲ್ಲಿ ಈ ಬಿಜೆಪಿ ಮಾಡಿದ ವಿಶ್ವವಿದ್ಯಾನಿಲಯ ಕಾರ್ಯನಿರ್ವಹಿಸುತ್ತಿದೆ,'' ಎಂದು ತೀಕ್ಷ್ಣವಾಗಿ ಟೀಕಿಸಿದರು. "ಬಿಜೆಪಿ ಶಾಸಕರು ಗಂಗಾ ಶುದ್ಧೀಕರಣ, ಬೆಲೆ ಏರಿಕೆ ಮತ್ತು ಇತರ ವಿಷಯಗಳಲ್ಲಿ ಜನರು ತೃಪ್ತರಾಗಿಲ್ಲ," ಎಂದುಹೇಳಿದರು.
(ಒನ್ಇಂಡಿಯಾ ಸುದ್ದಿ)