ಅಖಿಲೇಶ್ ಅವರ ಅಕ್ರಮ ಗಣಿ ಗುತ್ತಿಗೆ ಗುಟ್ಟು ಬಿಚ್ಚಿಟ್ಟ ಸಿಬಿಐ
ನವದೆಹಲಿ, ಜನವರಿ 07: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಅಕ್ರಮ ಮರಳು ಗಣಿಗಾರಿಕೆ ಪ್ರಕರಣ ಕಾಡತೊಡಗಿದೆ.ಸಿಬಿಐ ತನಿಖೆ ಭೀತಿ ಎದುರಿಸುತ್ತಿರುವ ಅಖಿಲೇಶ್ ಅವರು ಒಂದೇ ದಿನದಲ್ಲಿ 13 ಗಣಿಗಾರಿಕೆ ಲೈಸನ್ಸ್ ಕ್ಲಿಯರ್ ಮಾಡಿದ್ದರು ಎಂದು ಕೋರ್ಟ್ ಮುಂದೆ ಸಿಬಿಐ ಮಾಹಿತಿ ನೀಡಿದೆ.
2012 ಹಾಗೂ 2017ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಖಿಲೇಶ್ ಯಾದವ್ ಅವರು 2012-13ರ ಅವಧಿಯಲ್ಲಿ ಗಣಿಗಾರಿಕೆ ಖಾತೆ ಹೊಂದಿದ್ದರು. ನಂತರ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರಿಗೆ ಈ ಖಾತೆ ಲಭಿಸಿತ್ತು. ಇವರಿಬ್ಬರಿಗೂ ಸಿಬಿಐ ಸಮನ್ಸ್ ನೀಡುವ ಸಾಧ್ಯತೆಯಿದೆ.
ಅಕ್ರಮ ಗಣಿಗಾರಿಕೆ : ಅಖಿಲೇಶ್ ಯಾದವ್ ಗೆ ಸಿಬಿಐ ತನಿಖೆ ಭೀತಿ!
ಅಖಿಲೇಶ್ ಅವರು ಗಣಿಗಾರಿಕೆ ಖಾತೆ ಹೊಂದಿದ್ದ ಸಂದರ್ಭದಲ್ಲಿ 14 ಗುತ್ತಿಗೆ ಲೈಸನ್ಸ್ ಗೆ ಅನುಮತಿ ನೀಡಿದ್ದು, ಈ ಪೈಕಿ ಫೆಬ್ರವರಿ 17, 2013ರಂದು 13 ಗುತ್ತಿಗೆ ಲೈಸನ್ಸ್ ಗಳನ್ನು ನೀಡಿದ್ದಾರೆ. ಇದು ಇ ಟೆಂಡರ್ ಪ್ರಕ್ರಿಯೆಯ ಉಲ್ಲಂಘನೆಯಾಗಿದೆ ಎಂದು ಸಿಬಿಐ ಹೇಳಿದೆ.
ಲೋಕಸಭೆ ಚುನಾವಣೆ 2019ರಲ್ಲಿ ಬಿಜೆಪಿ ವಿರುದ್ಧ ಸಮರ ಸಾರಲು ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಸಾಧಿಸಿದ ಬೆನ್ನಲ್ಲೇ ಸಿಬಿಐ ತನಿಖೆ ಭೀತಿಯನ್ನು ಎರಡು ಪಕ್ಷಗಳ ನಾಯಕರು ಎದುರಿಸುತ್ತಿದ್ದಾರೆ.
ಅಖಿಲೇಶ್ ಪ್ರತಿಕ್ರಿಯೆ
ಮಹಾಘಟಬಂದನ್ ನಿಂದ ನಾವು ಯಾರು ಯಾರಿಗೆ ಟಿಕೆಟ್ ನೀಡಿದ್ದೇವೆ ಎಂಬುದನ್ನು ಕೂಡಾ ಈಗ ಸಿಬಿಐಗೆ ತಿಳಿಸಬೇಕೆನಿಸುತ್ತದೆ. ಬಿಜೆಪಿ ತನ್ನ ಅಸಲಿ ಬಣ್ಣವನ್ನು ಈಗಲೇ ಬಹಿರಂಗಪಡಿಸಿದ್ದು ಒಳ್ಳೆಯದಾಯಿತು.ಬಿಜೆಪಿ ಇದರ ಹಿಂದೆ ಇದೆಯೆಂದರೆ ಜನರೇ ಅದಕ್ಕೆ ಉತ್ತರ ನೀಡಲಿದ್ದಾರೆ. ನಾವು ಸಿಬಿಐಗೆ ಉತ್ತರ ನೀಡುತ್ತೇನೆ ಅಷ್ಟೇ ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಅಖಿಲೇಶ್ ಆದೇಶ ಪಾಲಿಸಿದ್ದ ಚಂದ್ರಕಲಾ
ಅಂದಿನ ಮುಖ್ಯಮಂತ್ರಿ ಕಚೇರಿಯ ಆದೇಶದಂತೆ ಗಣಿಗಾರಿಕೆ ಇಲಾಖೆ ಕಾರ್ಯ ನಿರ್ವಹಿಸಿತ್ತು ಹಾಗೂ ಹಮೀರ್ ಪುರ್ ನ ಜಿಲ್ಲಾಧಿಕಾರಿಯಾಗಿದ್ದ ಬಿ ಚಂದ್ರಕಲಾ ಅವರು ಗುತ್ತಿಗೆ ಲೈಸನ್ಸ್ ಗೆ ಒಪ್ಪಿಗೆ ಮುದ್ರೆ ಹಾಕಿದ್ದರು. ಇದು 2012ರ ಇ ಟೆಂಡರ್ ನಿಯಮಗಳ ಉಲ್ಲಂಘನೆಯಾಗಿದೆ. ಜನವರಿ 23, 2013ರಂದು ಅಲಹಾಬಾದ್ ಹೈಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿತ್ತು.
ಹೇಗಿದ್ದ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಗಾಗಿ ಹೋದರು!
ಸಿಬಿಐನಿಂದ ದಾಳಿ
ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಬಿಎಸ್ಪಿ ನಾಯಕ ಸತ್ಯದೇವ ದೀಕ್ಷಿತ್ , ಎಸ್ಪಿ ಶಾಸಕ ರಮೇಶ್ ಮಿಶ್ರಾ ಹಾಗೂ ಐಎಎಸ್ ಅಧಿಕಾರಿ ಬಿ ಚಂದ್ರಕಲಾ ಅವರ ಮನೆ, ಕಚೇರಿ ಮೇಲೆ ಸಿಬಿಐ ದಾಳಿ ನಡೆಸಲಾಗಿತ್ತು. ಜಲಾನ್, ಹಮೀರ್ ಪುರ್, ಲಕ್ನೋ, ನವದೆಹಲಿ ಸೇರಿದಂತೆ 14 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. 12.5 ಲಕ್ಷ ರು ನಗದು, 1.8 ಕೆಜಿ ಬಂಗಾರ ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ, ಬಿಎಸ್ಪಿ ಮುಖಂಡರ ವಿರುದ್ಧ ಎಫ್ಐಆರ್
ಎಸ್ಪಿ ಶಾಸಕ ರಮೇಶ್ ಮಿಶ್ರಾ ಅವರ ಸೋದರ ದಿನೇಶ್ ಕುಮಾರ್ ಮಿಶ್ರಾ,ರಾಮ್ ಆಶ್ರಾಯ್ ಪ್ರಜಾಪತಿ(ಗಣಿಗಾರಿಕೆ ಇಲಾಖೆ ಕ್ಲರ್ಕ್), ಅಂಬಿಕಾ ತಿವಾರಿ (ಮಿಶ್ರಾ ಸೋದರರ ಸಂಬಂಧಿ), ಸಂಜಯ್ ದೀಕ್ಷಿತ್, ರಾಮ್ ಅವತಾರ್ ಸಿಂಗ್(ನಿವೃತ್ತ ಕ್ಲರ್ಕ್), ಕರಣ್ ಸಿಂಗ್(ಭೋಗ್ಯಕ್ಕೆ ಪಡೆದವರು) ಹಾಗೂ ಆದಿಲ್ ಖಾನ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.