'ಸಿಎಂ ಸ್ಥಾನ'ದ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಯೋಗಿ ಆದಿತ್ಯನಾಥ್
ಲಕ್ನೋ, ಸೆಪ್ಟೆಂಬರ್ 20: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸಿಎಂ ಸ್ಥಾನದ ಹಿಂದಿನ ಸೀಕ್ರೆಟ್ನ್ನು ಬಿಚ್ಚಿಟ್ಟಿದ್ದಾರೆ.
ಅದು 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಮಯ. ಆ ಸಮಯದಲ್ಲಿ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರಿಂದ ಗೋರಖ್ಪುರ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ಗೆ ಕರೆ ಬರುತ್ತದೆ.
ಉತ್ತರಪ್ರದೇಶದಲ್ಲಿ 38 ವರ್ಷದ ರೂಢಿ; ಸಿಎಂ ಸೇರಿ ಎಲ್ಲ ಸಚಿವರ ಐಟಿ ಸರಕಾರದಿಂದ ಪಾವತಿ
ಸಂಸದರ ಜೊತೆಯಲ್ಲಿನ ನಿಮ್ಮ ಪ್ರವಾಸವನ್ನು ರದ್ದುಪಡಿಸಲಾಗಿದೆ ಎಂದು ಪ್ರಧಾನಿ ಸಚಿವಾಲಯದಿಂದ ಆದೇಶ ಬಂದಿದ್ದು ನೀವು ಇಲ್ಲಿಯೇ ಉಳಿಯಬೇಕಾದೀತು ಎಂದು ಸಚಿವರು ತಿಳಿಸುತ್ತಾರೆ.
ಮಾರ್ಚ್ 8ರಂದು ಯುಪಿ ಚುನಾವಣೆ ಮುಗಿದಿರುತ್ತದೆ. ಅದೇ ದಿನ ಯೋಗಿ ದೆಹಲಿಗೆ ತೆರಳಿ ಅಮಿತ್ ಶಾರನ್ನು ಭೇಟಿ ಮಾಡಿದಾಗ ನಿಮ್ಮ ಬಳಿ ಸ್ವಲ್ಪ ಮಾತನಾಡುವುದಿದೆ ದೆಹಲಿಯಲ್ಲೇ ಉಳಿದುಕೊಳ್ಳಿ ಎಂದು ಅಮಿತ್ ಶಾ ತಿಳಿಸುತ್ತಾರೆ.
ಆದರೆ ಯೋಗಿ ದೆಹಲಿಯಿಂದ ಗೋರಖ್ಪುರಕ್ಕೆ ವಾಪಸ್ಸು ಬಂದಿರುತ್ತಾರೆ. ಅವರಿಗೆ ಕರೆ ಮಾಡಿದ ಶಾ ನಿಮಗೆ ದೆಹಲಿಯಲ್ಲೇ ಉಳಿದುಕೊಳ್ಳಲು ಹೇಳಿದ್ದೆನಲ್ಲಾ ಎಂದು ಗದರಿಸಿ, ಒಂದು ಚಾರ್ಟೆಡ್ ಪ್ಲೇನ್ ಕಳುಹಿಸುವುದಾಗಿಯೂ ತಕ್ಷಣವೇ ದೆಹಲಿಗೆ ಬರುವಂತೆ ಸೂಚಿಸುತ್ತಾರೆ.
ನಾನು ಸುಮಾರು 11 ಗಂಟೆಯಷ್ಟೊತ್ತಿಗೆ ದೆಹಲಿಗೆ ತಲುಪಿದೆ. ಅದೇ ವಿಮಾನದಲ್ಲಿ 4 ಗಂಟೆಗೆ ಲಕ್ನೋ ತೆರಳಲು ಶಾ ಸೂಚಿಸಿದರು. ನಿಮ್ಮನ್ನು ಶಾಸಕಾಂಗ ಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದೀರಿ ಎಂದು ಅಮಿತ್ ಶಾ ತಿಳಿಸಿದಾಗ ನನಗೆ ಆಶ್ಚರ್ಯವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.