ಕ್ರೈಸ್ತ ಸನ್ಯಾಸಿನಿಯರಿಗೆ ರೈಲಿನಲ್ಲಿ ಎಬಿವಿಪಿ ಕಿರುಕುಳ ಆರೋಪ: ಕಠಿಣ ಕ್ರಮದ ಭರವಸೆ ನೀಡಿದ ಅಮಿತ್ ಶಾ
ಲಕ್ನೋ, ಮಾರ್ಚ್ 24: ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರು ಕ್ರೈಸ್ತ ಸನ್ಯಾಸಿಗಳು ಮತ್ತು ಅವರ ಇಬ್ಬರು ಶಿಷ್ಯೆಯರನ್ನು ಎಬಿವಿಪಿ ಸದಸ್ಯರು ಮುತ್ತಿಗೆ ಹಾಕಿ ರೈಲಿನಿಂದ ಬಲವಂತವಾಗಿ ಕೆಳಕ್ಕಿಳಿಸಿದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ತಾವು ಯಾವುದೇ ಮತಾಂತರದಲ್ಲಿ ಭಾಗಿಯಾಗಿಲ್ಲ ಎಂದು ರೈಲ್ವೆ ನಿಲ್ದಾಣದಲ್ಲಿ ವಿಚಾರಣೆ ವೇಳೆ ಅವರು ವಿವರಣೆ ನೀಡಿದ ಬಳಿಕವಷ್ಟೇ ಅವರನ್ನು ಮುಂದೆ ಸಾಗಲು ಅನುಮತಿ ನೀಡಲಾಯಿತು.
ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ತನಿಖೆ ನಡೆಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 'ಝಾನ್ಸಿಯಲ್ಲಿ ಸನ್ಯಾಸಿನಿಯರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಭಾಗಿಯಾದವರನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು' ಅಮಿತ್ ಶಾ ಭರವಸೆ ನೀಡಿದ್ದಾರೆ.
ಬರ್ಥಡೇ ಪಾರ್ಟಿ ಮುಗಿಸಿ ಬರುತ್ತಿದ್ದವನ ಮೇಲೆ 'ಲವ್ ಜಿಹಾದ್' ಕೇಸ್
ಈ ಘಟನೆ ಕಳೆದ ಶುಕ್ರವಾರ ನಡೆದಿದ್ದು, ತೀವ್ರ ವಿವಾದ ಸೃಷ್ಟಿಸಿದೆ. ಮಾರ್ಚ್ 19ರಂದು ಹರಿದ್ವಾರ- ಪುರಿ ಉತ್ಕಲ್ ಎಕ್ಸ್ಪ್ರೆಸ್ನಲ್ಲಿ ಸನ್ಯಾಸಿನಿಯರು ಪ್ರಯಾಣಿಸುತ್ತಿದ್ದರು. ರೈಲ್ವೆ ಬೋಗಿಯಲ್ಲಿ ಕೆಲವು ವ್ಯಕ್ತಿಗಳು ನಾಲ್ವರು ಮಹಿಳೆಯರನ್ನು ಸುತ್ತುವರಿದಿರುವುದು 25 ಸೆಕೆಂಡುಗಳ ವಿಡಿಯೋದಲ್ಲಿ ದಾಖಲಾಗಿದೆ. ಅವರಲ್ಲಿ ಕೆಲವರು ಪೊಲೀಸರೂ ಇದ್ದಾರೆ.
|
ಲಗೇಜ್ ತೆಗೆದುಕೊಂಡು ಇಳಿಯಿರಿ
'ನಿಮ್ಮ ಲಗೇಜ್ ತೆಗೆದುಕೊಳ್ಳಿ ಹೋಗಿ. ನೀವು ಹೇಳುತ್ತಿರುವುದು ಸರಿ ಇದೆ ಎಂದರೆ ನಿಮ್ಮನ್ನು ಮನೆಗೆ ಕಳುಹಿಸುತ್ತೇವೆ' ಎಂದು ಒಬ್ಬ ವ್ಯಕ್ತಿ ಹೇಳುವುದು ಕೇಳಿಸಿದೆ. ಅದಕ್ಕೆ ಮಹಿಳೆಯೊಬ್ಬರು 'ನೀವೇನು ಇಲ್ಲಿ ನೇತಾಗಿರಿ ಮಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ. ಇದು ವಿಡಿಯೋದಲ್ಲಿ ದಾಖಲಾಗಿದೆ.
ಮತಾಂತರದ ಅನುಮಾನ
ಈ ಪ್ರಕರಣದಲ್ಲಿ ಪಾಲ್ಗೊಂಡವರಲ್ಲಿ ಕೆಲವರು ಎಬಿವಿಪಿಯ ಸದಸ್ಯರಾಗಿದ್ದಾರೆ. ಅವರು ರಿಷಿಕೇಶದಲ್ಲಿನ ಶಿಬಿರದಿಂದ ಝಾನ್ಸಿಗೆ ಉತ್ಕಲ್ ಎಕ್ಸ್ಪ್ರೆಸ್ನಲ್ಲಿ ತೆರಳುತ್ತಿದ್ದರು. ನಾಲ್ವರು ಕ್ರೈಸ್ತ ಮಹಿಳೆಯರು ದೆಹಲಿಯ ಹಜ್ರತ್ ನಿಜಾಮುದ್ದೀನ್ನಿಂದ ಒಡಿಶಾದ ರೂರ್ಕೆಲಾಕ್ಕೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಇಬ್ಬರು ಸನ್ಯಾಸಿನಿಯರು ಮತ್ತು ಇಬ್ಬರು ಅವರ ಶಿಷ್ಯೆಯರು. ಆ ಮಹಿಳೆಯರು ಶಿಷ್ಯೆಯರ ಜತೆ ಮಾತನಾಡುತ್ತಿರುವಾಗ ಅವರು ಮತಾಂತರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ.
ಮಧ್ಯಪ್ರದೇಶದಲ್ಲಿಯೂ 'ಲವ್ ಜಿಹಾದ್' ಮಸೂದೆ ಅನುಮೋದನೆ: 10 ವರ್ಷ ಜೈಲು
|
ಮತಾಂತರವಾಗಿಲ್ಲ- ಪೊಲೀಸ್
ಈ ಅನುಮಾನದ ಮೇರೆಗೆ ಎಬಿವಿಪಿ ಸದಸ್ಯರು ರೈಲ್ವೆ ರಕ್ಷಣಾ ದಳಕ್ಕೆ ಮಾಹಿತಿ ನೀಡಿದ್ದಾರೆ. ಅವರು ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ. ಎಬಿವಿಪಿ ಸದಸ್ಯರು ಮತಾಂತರದ ಕುರಿತು ಲಿಖಿತ ದೂರನ್ನೂ ನೀಡಿದ್ದಾರೆ. ನಾನು ಸ್ಥಳಕ್ಕೆ ತೆರಳಿ ಆ ಮಹಿಳೆಯರ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಅವರಲ್ಲಿ ಯಾರೂ ಮತಾಂತರವಾಗಿಲ್ಲ. ಅವರೆಲ್ಲರೂ ಮೂಲತಃ ಕ್ರೈಸ್ತರು ಎಂಬುದನ್ನು ದಾಖಲೆಗಳು ತಿಳಿಸಿವೆ. ಇದರ ಬಳಿಕ ಅವರನ್ನು ಕಳುಹಿಸಲಾಗಿದೆ ಎಂದು ಝಾನ್ಸಿಯ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ನಯೀಮ್ ಖಾನ್ ಮನ್ಸೂರಿ ತಿಳಿಸಿದ್ದಾರೆ.
ದೇಶಕ್ಕೆ ಕಪ್ಪುಚುಕ್ಕೆ
ಆ ಸನ್ಯಾಸಿನಿಯರನ್ನು ಯಾವುದೇ ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದೆಯೇ ಬಲವಂತವಾಗಿ ರೈಲಿನಿಂದ ಕೆಳಕ್ಕಿಳಿಸಲಾಗಿದೆ. ಅವರು ತಮ್ಮ ಐಡಿ ಕಾರ್ಡ್ ತೋರಿಸಿದರೂ, ಆ ಕಾರ್ಡುಗಳು ನಕಲಿ ಎಂದು ಪೊಲೀಸರು ತಿರಸ್ಕರಿಸಿದ್ದಾರೆ. ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಿದ ಬಳಿಕವೇ ರಾತ್ರಿ 11 ಗಂಟೆ ಸುಮಾರಿಗೆ ಅವರನ್ನು ಬಿಡುಗಡೆ ಮಾಡಲಾಗಿದೆ. ಬಜರಂಗ ದಳದ ಸುಮಾರು 150 ಕಾರ್ಯಕರ್ತರು ಅವರಿಗೆ ಕಿರುಕುಳ ನೀಡಿದ್ದಾರೆ. ಇಂತಹ ಘಟನೆ ದೇಶದ ಘನತೆಗೆ ಕಪ್ಪು ಚುಕ್ಕೆಯಾಗಲಿದೆ ಎಂದು ಪಿಣರಾಯಿ ವಿಜಯನ್ ಪತ್ರದಲ್ಲಿ ಹೇಳಿದ್ದಾರೆ.