ಉತ್ತರ ಪ್ರದೇಶ: ಎಬಿಪಿ ನ್ಯೂಸ್ - ಸಿವೋಟರ್ ಚುನಾವಣಾಪೂರ್ವ ಸಮೀಕ್ಷೆ ಫಲಿತಾಂಶ
ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಚುನಾವಣೆ ಗೆಲ್ಲಲು ಬೇಕಾದ ರಣತಂತ್ರವನ್ನು ಈಗಾಗಲೇ ಹಣೆಯಲಾರಂಭಿಸಿದೆ.
ಐದು ರಾಜ್ಯಗಳ ಪೈಕಿ ದೇಶದ ರಾಜಕೀಯದ ಭಾಷ್ಯ ಬರೆಯಬಲ್ಲ ಉತ್ತರ ಪ್ರದೇಶ ಚುನಾವಣೆಯೂ ಒಂದು. ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ಅಲ್ಲಿ ಚುನಾವಣೆ ನಡೆಯಬೇಕಾಗಿದೆ. ದೇಶದ ಅತಿಹೆಚ್ಚು ಅಸೆಂಬ್ಲಿ ಮತ್ತು ಲೋಕಸಭಾ ಸ್ಥಾನವನ್ನು ಹೊಂದಿರುವ ಉತ್ತರ ಪ್ರದೇಶದ ಅಸೆಂಬ್ಲಿ 403 ಸದಸ್ಯರನ್ನು ಹೊಂದಿದೆ.
ಪಂಜಾಬ್ ಚುನಾವಣಾಪೂರ್ವ ಸಮೀಕ್ಷೆ: ಮತ್ತೊಂದು ರಾಜ್ಯ ಕಳೆದುಕೊಳ್ಳುವತ್ತ ಕಾಂಗ್ರೆಸ್
ಕಳೆದ ಬಾರಿ, ಭಾರೀ ಬಹುಮತದಿಂದ ಗೆಲುವು ಸಾಧಿಸಿದ್ದ ಬಿಜೆಪಿಗೆ, ಸಮಾಜವಾದಿ ಪಕ್ಷವಾಗಲಿ ಅಥವಾ ಬಿಎಸ್ಪಿ ಪೈಪೋಟಿಯನ್ನು ನೀಡಲಾಗದೇ, ಹೀನಾಯವಾಗಿ ಸೋತಿತ್ತು. ಆದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಅದೇ ಅನುಕೂಲ ವಾತಾವರಣ ಇರಲಿದೆಯೇ?
ಎಬಿಪಿ-ಸಿವೋಟರ್ ಈಗಾಗಲೇ ಐದು ರಾಜ್ಯಗಳ ಜನರ ನಾಡಿಮಿಡಿತ ಅರಿಯುವ ಚುನಾವಣಾಪೂರ್ವ ಸಮೀಕ್ಷೆ ನಡೆಸಿದೆ. ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳು ಇರಬೇಕಾದ ಹೊತ್ತಿನಲ್ಲಿ ನಡೆಸಿದ ಉತ್ತರ ಪ್ರದೇಶದ ಸಮೀಕ್ಷೆಯಲ್ಲಿ ಬಿಜೆಪಿಗೆ ನೆಮ್ಮದಿ ಕೊಡುವಂತಹ ವಿಚಾರವಿದೆ, ಆದರೂ ಎಚ್ಚರ ತಪ್ಪಬಾರದು ಎನ್ನುವ ಅಂಶವೂ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಅಮಿತ್ ಶಾ ಒಂದೇ ಒಂದು ಎಚ್ಚರಿಕೆಗೆ ರಾಜ್ಯ ಬಿಜೆಪಿ ನಾಯಕರು ಫುಲ್ ಅಲರ್ಟ್
ಬಿಜೆಪಿ 312 ಸ್ಥಾನವನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು
2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನವನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು. ಆದರೆ, ಈ ಬಾರಿಯ ಚುನಾವಣೆ ಅಷ್ಟು ಸುಲಭವಾದ ತುತ್ತಲ್ಲ ಎನ್ನುವುದನ್ನು ಸಮೀಕ್ಷೆಯಲ್ಲಿ ಹೊರಬಂದಂತಹ ಅಂಶ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಸರ್ವೇಯಲ್ಲಿ ಬಂದಿದೆಯಾದರೂ, ಕನಿಷ್ಟ ನೂರು ಸ್ಥಾನಗಳಷ್ಟಾದರೂ ಬಿಜೆಪಿಗೆ ನಷ್ಟವಾಗಲಿದೆ ಎಂದು ಎಬಿಪಿ-ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ
ಸಮೀಕ್ಷೆಯ ಪ್ರಕಾರ ಬಿಜೆಪಿ ಸುಮಾರು 100-108 ಸ್ಥಾನವನ್ನು ಕಳೆದುಕೊಳ್ಳಲಿದ್ದು, ಆಸುಪಾಸು 213-221 ಸ್ಥಾನವನ್ನು ಗೆಲ್ಲಲಿದೆ. ಸಮೀಕ್ಷೆಯ ಪ್ರಕಾರ ಮಾಯಾವತಿಯವರ ಬಿಎಸ್ಪಿ ದಯನೀಯ ವೈಫಲ್ಯವನ್ನು ಕಾಣಲಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಕಳೆದ ಚುನಾವಣೆಗಿಂತ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ನವೆಂಬರ್ ಮೊದಲ ವಾರದಲ್ಲಿ ನಡೆಸಲಾಗಿರುವ ಸಮೀಕ್ಷೆ ಇದಾಗಿದ್ದು, ಎಸ್ಪಿ 152-160 ಮತ್ತು ಬಿಎಸ್ಪಿ 16-20 ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ಪ್ರಿಯಾಂಕ
ಬಿಜೆಪಿಗೆ ಜಿದ್ದಿಗೆ ಬಿದ್ದಂತೆ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ಪ್ರಿಯಾಂಕ ಗಾಂಧಿ ವಾಧ್ರಾ, ಕಾಂಗ್ರೆಸ್ ಪಕ್ಷಕ್ಕೆ ವೋಟ್ ಶೇರಿಂಗ್ ನಲ್ಲಿ ಸಮಾಧಾನಕರವಾದ ಫಲಿತಾಂಶವನ್ನು ತರಲಿದ್ದಾರೆ. 2017ರ ಚುನಾವಣೆಗೆ ಹೋಲಿಸಿದರೆ, ಕಾಂಗ್ರೆಸ್ ಶೇ. 2.7ರಷ್ಟು ಹೆಚ್ಚು ಮತವನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಎಬಿಪಿ-ಸಿವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಲಾಭವಾಗಲಿದ್ದು, ಬಿಜೆಪಿಯ ವೈಫಲ್ಯ ಅಲ್ಲಿ ಮುಂದುವರಿಯಲಿದೆ ಮತ್ತು ಕಾಂಗ್ರೆಸ್ ಇನ್ನೊಂದು ರಾಜ್ಯವನ್ನು ಕಳೆದುಕೊಳ್ಳಲಿದೆ.
ಮುಖ್ಯಮಂತ್ರಿ ಹುದ್ದೆಗೆ ಯಾರು ಸೂಕ್ತ ಎನ್ನುವ ಪ್ರಶ್ನೆಗೆ ಯೋಗಿ ರೈಟ್ ಚಾಯಿಸ್
ಸಮೀಕ್ಷೆಯ ಪ್ರಕಾರ, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಒಟ್ಟಾರೆ ಮತಗಳಲ್ಲಿ ಶೇ 40.7ರಷ್ಟು, ಸಮಾಜವಾದಿ ಪಕ್ಷ ಶೇ 31.1, ಬಿಎಸ್ಪಿ ಶೇ 15.1 ಮತ್ತು ಕಾಂಗ್ರೆಸ್ ಶೇ 8.9 ಮತಗಳನ್ನು ಪಡೆಯಲಿದೆ. ಉತ್ತರ ಪ್ರದೇಶಕ್ಕೆ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಯಾರು ಸೂಕ್ತ ಎನ್ನುವ ಪ್ರಶ್ನೆಗೆ ಯೋಗಿ ಆದಿತ್ಯನಾಥ್ ಅವರೇ ರೈಟ್ ಚಾಯಿಸ್ ಎಂದು ಈ ಹಿಂದಿನ ಹಲವಾರು ಸಮೀಕ್ಷೆಯಲ್ಲಿ ಹೇಳಲಾಗಿದೆ. ಆದರೂ, ಇದು ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳು ಇರುವಾಗ ನಡೆಸಿರುವ ಸಮೀಕ್ಷೆ ಇದಾಗಿರುವುದರಿಂದ ರಾಜಕೀಯ ಮೇಲಾಟದ ಮೇಲೆ ಎಲ್ಲಾ ನಿರ್ಧಾರವಾಗಲಿದೆ.
Recommended Video