ಯುಪಿ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ: ಆಪ್ ಶಾಸಕನಿಗೆ 14 ದಿನಗಳ ನ್ಯಾಯಾಂಗ ಬಂಧನ
ಲಕ್ನೋ, ಜನವರಿ 11: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ, ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಾಸಕ ಸೋಮನಾಥ್ ಭಾರ್ತಿ ಅವರನ್ನು ಸೋಮವಾರ ಅಮೆಥಿಯಲ್ಲಿ ಬಂಧಿಸಲಾಗಿದೆ.
ಅಮೇಥಿ ಮತ್ತು ರಾಯಬರೇಲಿ ಪ್ರವಾಸದಲ್ಲಿರುವ ಸೋಮನಾಥ್ ಭಾರ್ತಿ ಅವರು, ಉತ್ತರ ಪ್ರದೇಶ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಅವರನ್ನು ಇಂದು ಅಮೆಥಿ ಅತಿಥಿ ಗೃಹದಲ್ಲಿ ಬಂಧಿಸಲಾಗಿದೆ.
ಸಿಆರ್ಪಿಸಿ ಸೆಕ್ಷನ್ 151ರ ಅಡಿಯಲ್ಲಿ ಆಪ್ ಶಾಕರನ್ನು ಬಂಧಿಸಲಾಗಿದೆ. ಇದಕ್ಕು ಮುನ್ನ ಸೋಮನಾಥ್ ಭಾರ್ತಿ ಅವರು ರಾಯಬರೇಲಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದಾಗ ಅವರ ಮೇಲೆ ಕಪ್ಪು ಶಾಯಿ ಎರಚಲಾಗಿತ್ತು. ಶಾಯಿ ಎರಚಿದ ವ್ಯಕ್ತಿ ತಪ್ಪಿಸಿಕೊಂಡಿದ್ದಾರೆ. ಆದರೆ ಘಟನೆಯ ನಂತರ ಅಮೆಥಿಗೆ ಭೇಟಿ ನೀಡಿದ ಭಾರತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನಂತರ ಮಾತನಾಡಿದ ಭಾರ್ತಿ ಅವರು, ಪೊಲೀಸರ ಸಮ್ಮುಖದಲ್ಲೇ ನನ್ನ ಮೇಲೆ ಮಸಿ ಎರಚಲಾಗಿದೆ. ಇದು ಬಿಜೆಪಿ ಕಾರ್ಯಕರ್ತರ ಕೈವಾಡ ಎಂದು ಆರೋಪಿಸಿದ್ದಾರೆ. ಅಲ್ಲದೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದರು.