ಮಗುವಿನ ಶವ ಹೂಳಲು ಹಳ್ಳ ತೋಡುವಾಗ ಜೀವಂತ ಮಗು ಸಿಕ್ಕಿತು
ಬರೇಲ್ಲಿ (ಉತ್ತರಪ್ರದೇಶ), ಅಕ್ಟೋಬರ್ 14: ವಿಧಿಯೋ ವಿಚಿತ್ರವೋ ನಿರ್ಧರಿಸಲಾಗದ ಸನ್ನಿವೇಶಗಳು ಹೇಗಿರುತ್ತವೆ ಅಂದರೆ, ಉತ್ತರಪ್ರದೇಶದ ವರ್ತಕರ ಈ ಘಟನೆ ನಿದರ್ಶನವಾಗಿ ದೊರೆಯುತ್ತದೆ. ಅವಧಿಗೆ ಪೂರ್ವ ಜನಿಸಿದ ತನ್ನ ಹೆಣ್ಣುಮಗು ಶವವನ್ನು ಮಣ್ಣಿನಲ್ಲಿ ಹೂಳಲು ಹಳ್ಳ ತೋಡುವಾಗ ಮೂರು ಅಡಿ ಕೆಳಗೆ ಜೀವಂತ ಇರುವ ಹೆಣ್ಣುಮಗುವೊಂದು ಸಿಕ್ಕಿದೆ.
ಹಿತೇಶ್ ಕುಮಾರ್ ಸಿರೋಹಿ ವರ್ತಕರು. ಹೆಣ್ಣುಮಗುವನ್ನು ರಕ್ಷಿಸಿ, ಹತ್ತಿಯನ್ನು ಬಳಸಿ ಹಾಲುಣಿಸಿದ್ದಾರೆ. ಸದ್ಯಕ್ಕೆ ಹೆಣ್ಣುಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಎಸ್ಪಿ (ನಗರ) ಅಭಿನಂದನ್ ಸಿಂಗ್ ಮಾತನಾಡಿ, ಸಿರೋಹಿ ಅವರ ಪತ್ನಿ ವೈಶಾಲಿ ಬರೇಲ್ಲಿಯಲ್ಲಿ ಸಬ್ ಇನ್ ಸ್ಪೆಕ್ಟರ್ ಎಂದು ತಿಳಿಸಿದ್ದಾರೆ.
ಸಾರಿಗೆ ಬಸ್ಸಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ತಾಯಿ
ವೈಶಾಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕಳೆದ ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರದಂದು ಏಳು ತಿಂಗಳ ಹೆಣ್ಣುಮಗುವಿಗೆ ಆಕೆ ಜನ್ಮ ನೀಡಿದ್ದರು. ಆ ಮಗು ಕೆಲವೇ ನಿಮಿಷದಲ್ಲಿ ಮೃತಪಟ್ಟಿತು ಎಂದು ಸಿಂಗ್ ಭಾನುವಾರ ಮಾಹಿತಿ ನೀಡಿದ್ದಾರೆ.
ಗುರುವಾರ ಸಂಜೆ ಸಿರೋಹಿ ತಮ್ಮ ಮಗುವಿನ ಶವವನ್ನು ಹೂಳಲು ತೆರಳಿದ್ದಾರೆ. ಮಣ್ಣು ಅಗೆಯುವಾಗ ಮೂರು ಅಡಿ ಆಳದಲ್ಲಿ ಹೆಣ್ಣುಮಗುವೊಂದು ಸಿಕ್ಕಿದೆ. ದೊಡ್ಡದಾಗಿ ಉಸಿರಾಡುತ್ತಿದ್ದ ಹೆಣ್ಣುಮಗುವನ್ನು ರಕ್ಷಿಸಿ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಹೆಣ್ಣುಮಗುವಿನ ಪೋಷಕರ ಬಗ್ಗೆ ಮಾಹಿತಿ ದೊರೆತಿಲ್ಲ. ಸದ್ಯಕ್ಕೆ ಮಗುವಿನ ರಕ್ಷಣೆ ಮಾಡಲಾಗಿದೆ. ಜೀವಂತವಾಗಿ ಹೂತಿದ್ದವರಿಗಾಗಿ ಹುಡುಕಾಟ ಶುರುವಾಗಿದೆ.
ಹೆಣ್ಣುಮಗುವಿನ ಹೆಚ್ಚಿನ ಚಿಕಿತ್ಸೆ ಜವಾಬ್ದಾರಿಯನ್ನು ಬಿಥಾರಿ ಚೈನ್ ಪುರ್ ಶಾಸಕ ರಾಜೇಶ್ ಮಿಶ್ರಾ ವಹಿಸಿಕೊಂಡಿದ್ದಾರೆ. ಮುಖ್ಯ ವೈದ್ಯಾಧಿಕಾರಿ ನೀಡಿದ ಮಾಹಿತಿ ಪ್ರಕಾರ, ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ.