ಸ್ಫೋಟ ನಡೆವಾಗಲೂ ಪತಿಯೊಂದಿಗೆ ಫೋನಿನಲ್ಲಿದ್ದ ಯೋಧನ ಪತ್ನಿ
ಕನೌಜ್, ಫೆಬ್ರವರಿ 16: ಪುಲ್ವಾಮಾ ದಾಳಿ ನಡೆಯುವುದಕ್ಕೂ ಮುನ್ನ ಉತ್ತರ ಪ್ರದೇಶದ ಕಾನ್ಪುರದ ಹುತಾತ್ಮ ಯೋಧ ಪ್ರದೀಪ್ ಸಿಂಗ್ ಯಾದವ್ ತಮ್ಮ ಪತ್ನಿ ನೀರಜಾ ಅವರಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು.
ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಆ ಯೋಧ ಮನೆಗೆ ಬಂದಿದ್ದು ಶವವಾಗಿ...
ಪತ್ನಿಯೊಂದಿಗೆ ನಗು ನಗುತ್ತ ಮಾತನಾಡುತ್ತಿದ್ದಂತೆಯೇ ಎಸ್ ಯುವಿಯೊಂದು ಅನಾಮತ್ತಾಗಿ ಬಂದು ಅವರಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿತ್ತು. ಅಷ್ಟರಲ್ಲೇ ಪತ್ನಿಗೂ ಅತ್ತೆಡೆಯಿಂದ ಜೋರಾದ ಶಬ್ದ ಕೇಳಿಸಿತು. ನಂತರ ಏನಾಯಿತು ಎಂಬುದು ಗೊತ್ತಿಲ್ಲ, ಫೋನ್ ಸಂಪರ್ಕ ಕಡಿತವಾಗಿತ್ತು. ಆಮೇಲೇನಿದ್ದರೂ ಬರೀ ಮೌನ, ಆತಂಕ, ಚಡಪಡಿಕೆ.
ಚಿತ್ರಗಳು : ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ನಾಯಕರು
ಏನೋ ಆಗಬಾರದ್ದು ಆಗಿದೆ ಎಂದು ಮನಸ್ಸು ಹೇಳುತ್ತಿತ್ತು. ತಕ್ಷಣ ವಾಪಸ್ ಫೋನ್ ಮಾಡಿದೆ. ಆದರೆ ಫೋನ್ ಸಂಪರ್ಕ ಸಾಧ್ಯವಾಗಲಿಲ್ಲ. ಅದಾಗಿ ಕೆಲವೇ ಗಂಟೆಗಳಲ್ಲಿ ನನಗೆ ಫೋನ್ ಬಂತು. ಇವರದ್ದೇ ಇರಬೇಕು ಎಂದುಕೊಂಡು ಫೋನ್ ರಿಸೀವ್ ಮಾಡಿದೆ. ಆದರೆ ಫೊನ್ ಮಾಡಿದ್ದು ಸಿಆರ್ ಪಿಎಫ್ ಕಂಟ್ರೋಲ್ ರೂಮಿನವರು. ಸ್ಫೋಟದಲ್ಲಿ ಪತಿ ಹುತಾತ್ಮರಾದರು ಎಂಬ ವಿಷಯ ತಿಳಿಸಿದರು. ನಾನು ಅಲ್ಲಿಯೇ ಕುಸಿದೆ. ನನಗಿನ್ನಾರು ದಿಕ್ಕು? ಎನ್ನುತ್ತಾರೆ ನೀರಜಾ.
ಸುಮಾರು ಹತ್ತು ನಿಮಿಷಗಳ ಕಾಲ ಪತ್ನಿಯೊಂದಿಗೆ ಮಾತನಾಡಿದ್ದ ಪ್ರದೀಪ್, ತಮ್ಮ ಇಬ್ಬರು ಹೆಣ್ಣು ಮಕ್ಕಳ ಬಗ್ಗೆಯೂ ಸಾಕಷ್ಟು ವಿಚಾರಿಸಿದ್ದರು ಎಂದು ನೀರಜಾ ಬಿಕ್ಕುತ್ತಾರೆ.
ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?
ಫೆ.14 ರಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಆವಂತಿಪೊರ ಎಂಬಲ್ಲಿ ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದರು.