ಮಹಾಕಾಳ ಎಕ್ಸ್ ಪ್ರಸ್ ರೈಲಿನಲ್ಲೇ ದೇವಸ್ಥಾನ ಜೊತೆಗೆ ದೇವರಿಗೊಂದು ಸೀಟ್
ವಾರಣಸಿ, ಫೆಬ್ರವರಿ.17: ಮಹಾಕಾಳ ಎಕ್ಸ್ ಪ್ರೆಸ್ ರೈಲಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ದೇವರಿಗೆ ಒಂದು ಸೀಟ್ ಮೀಸಲಿಟ್ಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಸಂವಿಧಾನದ ಮೂಲತತ್ವವನ್ನು ಮರೆತು ನಡೆದುಕೊಳ್ಳುತ್ತಿದ್ದು, ರೈಲಿನಲ್ಲೇ ದೇವಸ್ಥಾನವನ್ನು ನಿರ್ಮಿಸಿರುವುದಕ್ಕೆ ಅಸಾವುದ್ದೀನ್ ಓವೈಸಿ ಕೆಂಡ ಕಾರಿದ್ದಾರೆ. ಸೋಮವಾರ ಈ ಬಗ್ಗೆ ಓವೈಸಿ ಟ್ವೀಟ್ ಮಾಡಿದ್ದು, ಸಂವಿಧಾನದ ಮುನ್ನುಡಿಯ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ.
ಮೂರು ಜ್ಯೋತಿರ್ಲಿಂಗಗಳ ಸಂಪರ್ಕಕ್ಕೆ ಮಹಾಕಲ್ ಎಕ್ಸ್ ಪ್ರಸ್ ರೈಲು
ಇನ್ನು, ಸಂವಿಧಾನದ ಮುನ್ನುಡಿಯನ್ನು ಅಪ್ ಲೋಡ್ ಮಾಡಿರುವ ಟ್ವೀಟ್ ನ್ನು ಪ್ರಧಾನಮಂತ್ರಿ ಸಚಿವಾಲಯದ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಸಾರ್ವಜನಿಕ ರೈಲ್ವೆಯಲ್ಲಿ ಒಂದು ಧರ್ಮದ ದೇವಸ್ಥಾನ ನಿರ್ಮಿಸಿರುವುದಕ್ಕೆ ಓವೈಸಿ ಕಿಡಿ ಕಾರಿದ್ದಾರೆ.
ಜ್ಯೋತಿರ್ಲಿಂಗ ಕ್ಷೇತ್ರಗಳ ಸಂಪರ್ಕಿಸುವ ರೈಲಿಗೆ ಚಾಲನೆ
ಕಾಶಿ ಏಕ್, ರೂಪ್ ಅನೇಕ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಹಲವು ಯೋಜನೆಗಳಿಗೆ ಚಾಲನೆ ನೀಡಿದರು. ಮೂರು ಪುಣ್ಯಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಕಾಶಿ ಮಹಾಕಾಳ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಫೆಬ್ರವರಿ.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾರಣಸಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಅಸಾವುದ್ದೀನ್ ಓವೈಸಿ ಸಿಟ್ಟಿಗೆ ಅಸಲಿ ಕಾರಣವೇನು?
ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿರುವ ಈ ಮಹಾಕಾಳ ರೈಲಿನಲ್ಲಿ ಬಿ5 ಬೋಗಿಯ 64ನೇ ಸೀಟನ್ನು ದೇವರಿಗೆಂದೇ ಮೀಸಲು ಇಡಲಾಗಿದೆ. ಇಲ್ಲಿ ಶಿವನ ಫೋಟೋವನ್ನು ಇಟ್ಟು ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಈ ಸೀಟ್ ಪ್ರತಿದಿನವೂ ದೇವರಿಗೇ ಮೀಸಲಿಡಲು ರೈಲ್ವೆ ಇಲಾಖೆಯ ಮುಂದಾಗಿದೆ. ಇದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೆಂಡ ಕಾರಿದ್ದಾರೆ.
ಮಹಾಕಾಳ ಎಕ್ಸ್ ಪ್ರೆಸ್ ರೈಲಿನಲ್ಲೇ ದೇವರ ಸ್ಪುತಿ
ದೇವಸ್ಥಾನ ನಿರ್ಮಿಸಿ ದೇವರಿಗೆ ಪೂಜೆ ಸಲ್ಲಿಸುವುದು ಅಷ್ಟೇ ಅಲ್ಲ. ವಾರದಲ್ಲಿ ಮೂರು ದಿನ ಉತ್ತರ ಪ್ರದೇಶದ ವಾರಣಸಿಯಿಂದ ಮಧ್ಯಪ್ರದೇಶದ ಇಂದೋರ್ ನಡುವೆ ಈ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ. ಈ ಎಕ್ಸ್ ಪ್ರೆಸ್ ರೈಲಿನ ಎಲ್ಲ ಬೋಗಿಗಳಲ್ಲೂ ದೇವರ ಹಾಡುಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಉತ್ತರ ವಿಭಾಗದ ರೈಲ್ವೆ ಇಲಾಖೆ ವಕ್ತಾರ ದೀಪಕ್ ಕುಮಾರ್ ತಿಳಿಸಿದ್ದಾರೆ.
ಮೊದಲ ಬಾರಿ ರೈಲಿನಲ್ಲಿ ಮಾಂಸಹಾರ ನಿಷೇಧ
ಇನ್ನು, ಮಹಾಕಾಳ ಎಕ್ಸ್ ಪ್ರೆಸ್ ರೈಲು ಮೂರು ಜ್ಯೋತಿರ್ಲಿಂಗಗಳ ಪುಣ್ಯಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸಲಿದೆ. ಇಂದೋರ್ ನ ಓಂಕಾರೇಶ್ವರ, ಉಜ್ಜೈನಿಯ ಮಹಾಕಾಳೇಶ್ವರ ಮತ್ತು ವಾರಣಸಿಯ ಕಾಶಿ ವಿಶ್ವನಾಥ ಸನ್ನಿಧಿಗಳ ನಡುವೆ ರೈಲು ಸಂಚರಿಸಲಿದ್ದು, ಈ ರೈಲಿನಲ್ಲಿ ಮಾಂಸಹಾರ ಸೇವನೆಯನ್ನೂ ನಿಷೇಧಿಸಲಾಗಿದೆ.