ಉತ್ತರ ಪ್ರದೇಶ ರಾಜಕೀಯದಲ್ಲಿ ರೋಚಕ ತಿರುವು: ಬಿಜೆಪಿಗೆ ಲಾಭ?
ಲಕ್ನೋ, ,ಮಾರ್ಚ್ 30: ಚುನಾವಣೆ ಹತ್ತಿರದಲ್ಲಿರುವಾಗ ಉತ್ತರ ಪ್ರದೇಶ ರಾಜಕೀಯದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದ್ದು, ಲೋಕಸಭೆ ಚುನಾವಣೆಗೆ ಹೊಸ ತಿರುವು ಸಿಕ್ಕಿದೆ.
ಗೋರಖ್ಪುರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಇಡೀ ದೇಶವೂ ಅಚ್ಚರಿ ಪಡುವಂತೆ ಮಾಡಿದ್ದ ಪ್ರವೀಣ್ ನಿಷಾದ್ ಎಸ್ಪಿ-ಬಿಎಸ್ಪಿ ಬೆಂಬಲದಿಂದ ಹಿಂದೆ ಸರಿದಿದ್ದು, ಅಖಿಲೇಶ್ ಯಾದವ್ ಗೆ ನುಂಗಲಾರದ ತುತ್ತು ಎನ್ನಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಒಂದು ಕಾಲದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾಗಿದ್ದ ಗೋರಖ್ಪುರದಲ್ಲಿ ಗೆಲುವು ಸಾಧಿಸಿ ಹುಬ್ಬೇರುವಂತೆ ಮಾಡಿದ್ದರು ಪ್ರವೀಣ್ ನಿಷಾದ್. ಆದರೆ ಅವರ ಹೆಸರನ್ನು ಈ ಬಾರಿ ಘೋಷಿಸದ ಕಾರಣ ಅವರು ಬಿಜೆಪಿ ಜೊತೆ ಗುರುತಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬ ವದಂತಿ ಹಬ್ಬಿದೆ. ಅದಕ್ಕೆ ಪೂರಕ ಎಂಬಂತೆ ಅವರು ಯೋಗಿ ಆದಿತ್ಯನಾಥ್ ಅವರನ್ನೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ತಾವು ಪ್ರವೀಣ್ ನಿಷಾದ್ ಅವರ ಮನವೊಲಿಸಲು ಸಿದ್ಧರಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಯಿಂದ ಬಿಜೆಪಿಗೆ ಲಾಭವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಯೋಗಿ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲುಣಿಸಿದ್ದ ನಿಷಾದ್
2014 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 1998 ರಿಂದಲೂ ಈ ಕ್ಷೇತ್ರದಿಂದ ಕಣಕ್ಕಿಳಿದು ಯೋಗಿ ಆದಿತ್ಯನಾಥ್ ಗೆಲುವು ಸಾಧಿಸುತ್ತ ಬಂದಿದ್ದರು.
ಆದರೆ 2017 ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಂತರ, ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿದ್ದರಿಂದ ಗೋರಖ್ಪುರ ಕ್ಷೇತ್ರ ತೆರವುಗೊಂಡಿತ್ತು.
ಆಗಲೂ ಜೊತೆಯಾಗಿದ್ದ ಮಾಯಾ-ಅಖಿಲೇಶ್
ನಂತರ ನಡೆದ ಉಪಚುನಾವಣೆಯ ಸಮಯದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಮೈತ್ರಿ ಮಾಡಿಕೊಂಡು ಪ್ರವೀಣ್ ನಿಷಾದ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಪ್ರವೀಣ್, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿಯೇ ನಂತರ ಕಣಕ್ಕಿಳಿದಿದ್ದರು. ರೋಚಕ ಘಟ್ಟದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಉಪೇಂದ್ರ ದತ್ತ ಶುಕ್ಲಾ ಅವರನ್ನು ಕೆಲವೇ ಸಾವಿರ ಮತಗಳ ಅಂತರದಿಂದ ಸೋಲಿಸಿದರು. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ತೀವ್ರ ಮುಖಭಂಗವನ್ನುಂಟು ಮಾಡಿತ್ತು.
ಬಿಜೆಪಿಗೆ ಲಾಭ?
ನಿಷಾದ್ ಸಮುದಾಯದ ಮತದಾರರು ಗೋರಖ್ಪುರದಲ್ಲಿ ಹೆಚ್ಚಿದ್ದು, ಪ್ರವೀಣ್ ನಿಷಾದ್ ಅವರಿಗೆ ಸಾಕಷ್ಟು ಬೆಂಬಲಿಗರಿದ್ದಾರೆ. ಅವರು ಎಸ್ಪಿ-ಬಿಎಸ್ಪಿ ಮೈತ್ರಿಕೂಟದಿಂದ ಹೊರಬಂದರೆ ನಿಷಾದ್ ಸಮುದಾಯದ ಮತದಾರರು ಬಿಜೆಪಿಗೆ ಬೆಂಬಲ ನೀಡಬಹುದು. ಈಗಾಗಲೇ ಯೋಗಿ ಆದಿತ್ಯನಾಥ್ ಅವರನ್ನು ಪ್ರವೀಣ್ ನಿಷಾದ್ ಭೇಟಿ ಮಾಡಿದ್ದಾರೆ. ಭೇಟಿಯ ನಂತರವೇ, ತಾವು ಎಸ್ಪಿ-ಬಿಎಸ್ಪಿ ಮೈತ್ರಿಕೂಟದಲ್ಲಿಲ್ಲ ಎಂದು ಘೋಷಿಸಿದ್ದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಎಸ್ಪಿಗೆ ಕೈಕೊಡಲು ಕಾರಣವೇನು?
"ಈ ಬಾರಿಯೂ ಗೋರಖ್ಪುರದಿಂದ ಪ್ರವೀಣ್ ಅವರನ್ನೇ ಕಣಕ್ಕಿಳಿಸುವುದಾಗಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದರು. ಆದರೆ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಮತ್ತು ಪೋಸ್ಟರ್ ಗಳಲ್ಲಾಗಲೀ, ಪ್ರಚಾರಗಳಲ್ಲಾಗಲೀ, ನಮ್ಮ ನಾಯಕರ ಚಿತ್ರಗಳೂ ಎಲ್ಲೂ ಕಾಣಲಿಲ್ಲ. ನಮ್ಮನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಆದ್ದರಿಂದಲೇ ನಾನು ಮೈತ್ರಿಕೂಟದಿಂದ ಹೊರಬಂದಿದ್ದೇನೆ. ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ" ಎಂದು ಪ್ರವೀಣ್ ನಿಷಾದ್ ಹೇಳಿದ್ದಾರೆ.
ಪ್ರವೀಣ್ V/S ಉಪೇಂದ್ರ
ಗೋರಖ್ಪುರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರವೀಣ್ ಕುಮಾರ್ ನಿಶಾದ್ 4,56,513 ಮತಗಳನ್ನು ಪಡೆದಿದ್ದರೆ, ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿಯ ಉಪೇಂದ್ರ ದತ್ತ ಶುಕ್ಲಾ 4,34,632 ಮತಗಳನ್ನು ಪಡೆದಿದ್ದರು.