ಏಕಾಂಗಿಯಾಗಿ 100 ಕಿ.ಮೀ ಸೈಕಲ್ನಲ್ಲಿ ಹೋಗಿ ಮದುವೆಯಾದ ಯುವಕ
ಲಕ್ನೌ, ಮೇ 1; ಕೊರೊನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿದೆ. ದಿಢೀರ್ ಅಂತ ಲಾಕ್ಡೌನ್ ಘೋಷಣೆಯಾದ ಕಾರಣ, ನಿಗದಿಪಡಿಸಿದ್ದ ಶುಭ ಸಮಾರಂಭಗಳು ಮುಂದಕ್ಕೆ ಹೋದವು. ಅದೆಷ್ಟೋ ಮದುವೆಗಳು ಮುಂದೂಡಿದವು. ಕೆಲವು ಮದುವೆಗಳು ಅಂದುಕೊಂಡಿದ್ದ ದಿನಕ್ಕೆ ಸರಳವಾಗಿ ನೆರವೇರಿರುವ ಉದಾಹರಣೆಗಳಿವೆ.
ಇದೀಗ, ಲಾಕ್ಡೌನ್ ನಡುವೆಯೂ ಉತ್ತರ ಪ್ರದೇಶದಲ್ಲೊಂದು ಅಪರೂಪದ ಮದುವೆ ನಡೆದಿದೆ. ನಿಗದಿ ಪಡಿಸಿದ್ದ ದಿನದಂದು ವಿವಾಹವಾಗಲು ಪ್ರಯಾಣ ಮಾಡಲು ಅನುಮತಿ ನಿರಾಕರಿಸಿದ ಹಿನ್ನಲೆ, ವರನೊಬ್ಬನೆ 100 ಕಿ.ಮೀ ಸೈಕಲ್ನಲ್ಲಿ ತೆರಳಿ ಮದುವೆಯಾಗಿರುವ ಘಟನೆ ವರದಿಯಾಗಿದೆ.
ಕೊರೊನಾ ಮಾನವ ನಿರ್ಮಿತವೇ? US ಗುಪ್ತಚರ ಸಂಸ್ಥೆ ನೀಡಿದ ಮಹತ್ವದ ವರದಿ ಬಯಲು!
ಹೋಗುವಾಗ ಒಬ್ಬನೇ 100 ಕಿ.ಮೀ ಹೋದ ಯುವಕ, ವಾಪಸ್ ಬರುವಾಗ ಪತ್ನಿಯನ್ನು ಜೊತೆಯಲ್ಲಿ ಕರೆದುಕೊಂಡು ಸೈಕಲ್ನಲ್ಲೇ ವಾಪಸ್ ಆಗಿದ್ದಾನೆ. ಮುಂದೆ ಓದಿ....
ಅನುಮತಿಗೆ ಕೊನೆಯವರೆಗೂ ಕಾದು ಪ್ರಜಾಪತಿ
ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯ ಪಟಿಯಾ ಗ್ರಾಮದ ಕಲ್ಕು ಪ್ರಜಾಪತಿ ಏಪ್ರಿಲ್ 25 ರಂದು ತಮ್ಮ ಮದುವೆ ನಿಶ್ಚಿಯ ಮಾಡಿಕೊಂಡಿದ್ದರು. ಇದಕ್ಕಾಗಿ ಮಹೊಬಾ ಜಿಲ್ಲೆಯ ವಧುವಿನ ಊರಿಗೆ ಹೋಗಬೇಕಿತ್ತು. ಆದರೆ, ಇದಕ್ಕೆ ಸ್ಥಳಿಯ ಆಡಳಿತ ಮಂಡಳಿ ಅನುಮತಿ ನೀಡಿಲ್ಲ. ಅನುಮತಿ ಸಿಗಬಹುದು ಎಂಬ ನಿರೀಕ್ಷೆಯಿಂದ ಕೊನೆಯವರೆಗೂ ಕಾದ ಪ್ರಜಾಪತಿಗೆ ನಿರಾಸೆಯಾಯಿತು.
ಸೈಕಲ್ನಲ್ಲಿ ಏಕಾಂಗಿ ಹೊರಟ ಯುವಕ
ಸ್ಥಳಿಯ ಆಡಳಿತ ಮಂಡಳಿ ಕುಟುಂಬ ಸಮೇತ ಹೋಗಲು ಅನುಮತಿ ನಿರಾಕರಿಸಿದ ಹಿನ್ನಲೆ, ಆತಂಕಕ್ಕೆ ಒಳಗಾಗದ ಯುವಕ, ಏಕಾಂಗಿಯಾಗಿ ವಧುವಿನ ಊರಿಗೆ ತೆರಳಿದೆ. ಸೈಕಲ್ನಲ್ಲಿ ಒಬ್ಬನೇ 100 ಕಿ.ಮೀ ಪ್ರಯಾಣ ಮಾಡಿ ವಿವಾಹ ಮಾಡಿಕೊಂಡಿದ್ದಾನೆ. ಹತ್ತನೇ ತರಗತಿ ಓದಿರುವ ಪ್ರಜಾಪತಿಗೆ ಸೈಕಲ್ನಲ್ಲಿ ಹೋಗುವುದು ಅನಿವಾರ್ಯವಾಗಿತ್ತು. ಹಾಗಾಗಿ, ಸೈಕಲ್ನಲ್ಲೇ ಒಬ್ಬನೇ ಹೋಗಿದ್ದಾನೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ನಿಶ್ಚಿಯ
ನಾಲ್ಕು ತಿಂಗಳ ಹಿಂದೆಯೇ ಈ ವಿವಾಹ ನಿಶ್ಚಿಯವಾಗಿತ್ತು. ವಧುವಿನ ಮನೆಯವರು ಮದುವೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿಬಿಟ್ಟಿದ್ದರು. ಹಾಗಾಗಿ, ಮದುವೆ ಮುಂದಕ್ಕೆ ಹಾಕಲು ಹಿಂಜರಿದ ಎರಡು ಕುಟುಂಬ ಅದೇ ದಿನದಂದು ವಿವಾಹ ನಡೆಸಲು ನಿರ್ಧರಿಸಿದ್ದರು. ಇದಕ್ಕಾಗಿ ವಧುವಿನ ಕುಟುಂಬ ಸ್ವಗ್ರಾಮದಲ್ಲಿ ಎಲ್ಲ ತಯಾರಿ ಮಾಡಿಕೊಂಡಿತ್ತು. ಆ ಹಿನ್ನಲೆಯಲ್ಲಿ ಪ್ರಜಾಪತಿ ಈ ಸಾಹಸ ಮಾಡಿ ಮದುವೆ ಮಾಡಿಕೊಂಡಿದ್ದಾನೆ.
ಡಿಎಲ್ ಇಲ್ಲದ ಕಾರಣ ಸೈಕಲ್
ಪ್ರಜಾಪತಿ ಬಳಿ ಬೈಕ್ ಇದ್ದರೂ ಆತ ಸೈಕಲ್ನಲ್ಲಿ 100 ಕಿ.ಮೀ ಸಾಗಿದ್ದ. ಏಕಂದ್ರೆ ಆತನ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಕೊರೊನಾ ಸೋಂಕಿನ ಆತಂಕ ಇದ್ದರೂ ಮಾಸ್ಕ್ ಧರಿಸಿ, ಜೀನ್ಸ್ ಮತ್ತು ಟಿ-ಶರ್ಟ್ನಲ್ಲಿಯೇ ವಧುವಿನ ಮನೆಗೆ ತೆರಳಿದ ಎಂದು ಆತನ ತಂದೆ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಬರಬೇಕಾದರೆ ಸೈಕಲ್ನಲ್ಲಿ ಇಬ್ಬರು
ಹಳ್ಳಿಯ ದೇವಸ್ಥಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿವಾಹ ನೆರವೇರಿದೆ. ಮದುವೆ ಬಳಿಕ ತನ್ನ ಪತ್ನಿಯನ್ನು ಕರೆದುಕೊಂಡು ಮತ್ತೆ ಸೈಕಲ್ನಲ್ಲೆ ವಾಪಸ್ ಆಗಿದ್ದಾರೆ. ಹೋಗಬೇಕಾದರೆ ಒಬ್ಬಂಟಿಯಾಗಿ ಹೋದ ಪ್ರಜಾಪತಿ, ಹಿಂತಿರುಗುವಾಗ ಪತ್ನಿ ಜೊತೆ ಬಂದಿದ್ದಾರೆ. ಇನ್ನು ಇಷ್ಟೊಂದು ಕಷ್ಟಪಟ್ಟು ಈಗ ಮದುವೆ ಆಗಬೇಕಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಜಾಪತಿ, ''ನನ್ನ ತಾಯಿಗೆ ಅನಾರೋಗ್ಯ. ಮನೆಯಲ್ಲಿ ಆಕೆಯನ್ನು ನೋಡಿಕೊಳ್ಳಲು, ಅಡುಗೆ ಮಾಡಲು ಯಾರೂ ಇಲ್ಲ. ಅದಕ್ಕಾಗಿ ಈ ಮದುವೆ ಬೇಗ ಆಗಬೇಕಾಯಿತು'' ಎಂದಿದ್ದಾರೆ.