ಮಥುರಾ ಶಾಹಿ ಈದ್ಗಾ ಮಸೀದಿಯ ಸರ್ವೆ ಕೋರಿ ಅರ್ಜಿ ಸಲ್ಲಿಕೆ
ಲಕ್ನೊ ಮೇ 17: ವಾರಣಾಸಿಯ ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಮಸೀದಿ ಸಂಕೀರ್ಣದ ವಿವಾದದ ಮೇಲೆ ಎಲ್ಲರ ಕಣ್ಣು ನೆಟ್ಟಿರುವ ನಡುವೆಯೇ, ಮಥುರಾದ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯ ವಿಡಿಯೋಗ್ರಫಿ ಮಾಡುವಂತೆ ಕೋರಿ ಇತ್ತೀಚೆಗೆ ಸ್ಥಳೀಯ ಮಥುರಾ ನ್ಯಾಯಾಲಯದಲ್ಲಿ ಇದೇ ರೀತಿಯ ಅರ್ಜಿ ಸಲ್ಲಿಕೆಯಾಗಿದೆ.
ಮಸೀದಿ ಆವರಣದಲ್ಲಿ ಹಿಂದೂ ಕಲಾಕೃತಿಗಳು ಮತ್ತು ಪುರಾತನ ಧಾರ್ಮಿಕ ಶಾಸನಗಳ ಅಸ್ತಿತ್ವವನ್ನು ನಿರ್ಧರಿಸಲು ಜ್ಞಾನವಾಪಿ ಮಸೀದಿಯ ಮಾದರಿಯಲ್ಲಿ ಶಾಹಿ ಈದ್ಗಾ ಮಸೀದಿಯ ಜಮೀನಿನ ಮೌಲ್ಯಮಾಪನಕ್ಕಾಗಿ ವಕೀಲ ಆಯುಕ್ತರನ್ನು ನೇಮಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಜ್ಞಾನವಾಪಿ ಮಸೀದಿ; ಶಿವಲಿಂಗ ಪತ್ತೆಯಾದ ಸ್ಥಳ ನಿರ್ಬಂಧಿಸಲು ಆದೇಶ
ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ನಾಲ್ಕು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದ ಒಂದು ದಿನದ ನಂತರ ಮಥುರಾ ಸಿವಿಲ್ ನ್ಯಾಯಾಧೀಶರ(ಹಿರಿಯ ವಿಭಾಗ) ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಮೇ 12ರಂದು ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಮತ್ತು ಇತರರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಉಚ್ಚ ನ್ಯಾಯಾಲಯವು, "ಇದಕ್ಕೆ ಸಂಬಂಧಿಸಿದಂತಹ ಎಲ್ಲಾ ಅರ್ಜಿಗಳನ್ನು ಅರ್ಜಿ ಸಲ್ಲಿಕೆಯಾದ ನಾಲ್ಕು ತಿಂಗಳ ಒಳಗೆ ತೀರ್ಮಾನಿಸುವಂತೆ ಮಥುರಾ ಸಿವಿಲ್ ನ್ಯಾಯಾಧೀಶರಿಗೆ(ಹಿರಿಯ ವಿಭಾಗ) ಸೂಚಿಸಲಾಗಿದೆ,'' ಎಂದು ಹೇಳಿದೆ.
ಬಾಬ್ರಿ ಕೈತಪ್ಪಿತು, ಮತ್ತೊಂದು ಮಸೀದಿ ಕಳೆದುಕೊಳ್ಳಲ್ಲ: ಒವೈಸಿ
"ಪ್ರಕರಣದ ನಿರ್ವಹಣೆ ಅಥವಾ ಅರ್ಜಿದಾರರು ಪ್ರತಿಪಾದಿಸಿದ ಹಕ್ಕುಗಳ ಅರ್ಹತೆಯ ಬಗ್ಗೆ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸ್ಟಷ್ಟಪಡಿಸಲಾಗಿದೆ,'' ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಶಾಹಿ ಈದ್ಗಾ ಮಸೀದಿಯನ್ನು ಸರ್ವೆ ಮಾಡಲು ವಕೀಲ ಆಯುಕ್ತರನ್ನು ನೇಮಿಸುವಂತೆ ಕೋರಿ ಮೇ 13ರಂದು ಮಥುರಾದ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ(ಹಿರಿಯ ವಿಭಾಗ) ಅರ್ಜಿ ಸಲ್ಲಿಸಲಾಗಿದೆ.
ವಿವಾದಿತ ಮಥುರಾ ಜಮೀನಿಗೆ ಸಂಬಂಧಿಸಿದ ಅರ್ಜಿಗಳ ತ್ವರಿತ ವಿಲೇವಾರಿಗೆ ಈ ಹಿಂದೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ಮನೀಶ್ ಯಾದವ್ ಸುದ್ದಿಗಾರರೊಂದಿಗೆ ಮಾತನಾಡಿ, " ಶಾಹೀ ಈದ್ಗಾ ಮೈದಾನದಲ್ಲಿ ಇನ್ನೂ ಹಿಂದೂ ಧರ್ಮದ ಅವಶೇಷಗಳು ಇರುವುದರಿಂದ ಶೀಘ್ರವೇ ವಿಡಿಯೊ ಸರ್ವೆ ಮಾಡಬೇಕಿದೆ. ಇದಕ್ಕಾಗಿ ಹಿರಿಯ ವಕೀಲರನ್ನ, ವಕೀಲ ಆಯುಕ್ತರನ್ನುನೇಮಿಸಿಬೇಕೆಂದು ಮಥುರಾ ನ್ಯಾಯಾಲಯಕ್ಕೆ ನಾನು ಮನವಿ ಮಾಡಿದ್ದೇನೆ. ಅಲ್ಲದೇ ವಿರೋಧಿ ಬಣ ಸಾಕ್ಷ್ಯಗಳನ್ನು ನಾಶಪಡಿಸಬಹುದಾದ ಸಾಧ್ಯತೆಯಿದೆ. ನ್ಯಾಯಾಲಯವು ಜುಲೈ 1ರಂದು ನನ್ನ ಅರ್ಜಿಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ,'' ಎಂದು ಹೇಳಿದರು.
"ಭಾರತೀಯ ಪುರಾತತ್ವ ಇಲಾಖೆಯಿಂದ ವಿವಾದಿತ ಜಮೀನಿನ ಸರ್ವೆ ಮಾಡುವಂತೆ ಹಾಗೂ ವಿವಾದಿತ ಸ್ಥಳದಲ್ಲಿ ಎಲ್ಲ ರೀತಿಯ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸವಂತೆ ಕೋರಿ ಸಲ್ಲಿಸಿರುವ ಅರ್ಜಿ ಬಾಕಿ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದೇವೆ,'' ಎಂದು ನಾರಾಯಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಯಾದವ್ ತಿಳಿಸಿದರು.