ಕೊರೊನಾ ಲಸಿಕೆ ಪಡೆದ 24 ಗಂಟೆಗಳಲ್ಲೇ ವೈದ್ಯಕೀಯ ಸಿಬ್ಬಂದಿ ಸಾವು!
ನವದೆಹಲಿ, ಜನವರಿ.18: ಕೊರೊನಾವೈರಸ್ ಲಸಿಕೆಯನ್ನು ಪಡೆದ 24 ಗಂಟೆಗಳಲ್ಲೇ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮೊರದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 46 ವರ್ಷದ ಮಣಿಪಾಲ್ ಸಿಂಗ್ ಅವರು ಎದೆನೋವು ಮತ್ತು ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದಾರೆ. ಕೊವಿಡ್-19 ಲಸಿಕೆಗೂ ಮಣಿಪಾಲ್ ಸಿಂಗ್ ಅವರ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ವೈದ್ಯಕೀಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಲಸಿಕೆ ಪಡೆದುಕೊಳ್ಳುವುದಕ್ಕಿಂತಲೂ ಮೊದಲೇ ಅವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ದೆಹಲಿ: ಕೊರೊನಾ ಲಸಿಕೆ ಪಡೆದ 51 ಮಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ
ಜನವರಿ.16ರ ಶನಿವಾರ ಮಧ್ಯಾಹ್ನದ ವೇಳೆಗೆ ಮಣಿಪಾಲ್ ಸಿಂಗ್ ಅವರಿಗೆ ಕೊರೊನಾ ಲಸಿಕೆಯನ್ನು ಹಾಕಿಸಲಾಗಿತ್ತು. ಅದಾಗಿ ಮರುದಿನ ಭಾನುವಾರ ಅವರಲ್ಲಿ ಉಸಿರಾಟ ತೊಂದರೆ ಮತ್ತು ಎದೆನೋವು ಕಾಣಿಸಿಕೊಂಡಿತ್ತು. ಅವರ ಸಾವಿಗೆ ಕಾರಣವೇನು ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತದೆ. ಮೃತ ವ್ಯಕ್ತಿಯ ಮರಣೋತ್ತರ ಸಮೀಕ್ಷೆ ನಡೆಸಲಾಗಿದೆ ಎಂದಿದ್ದಾರೆ.
"ಕೊರೊನಾ ಲಸಿಕೆಗೂ ಸಿಬ್ಬಂದಿ ಸಾವಿಗೂ ನಂಟಿಲ್ಲ"
ಮಣಿಪಾಲ್ ಸಿಂಗ್ ಅವರ ಸಾವಿನಲ್ಲಿ ಲಸಿಕೆಯ ಅಡ್ಡಪರಿಣಾಮದಿಂದ ಆಗಿರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಕೊವಿಡ್-19 ಲಸಿಕೆ ಪಡೆದ ನಂತರದಲ್ಲಿ ಶನಿವಾರ ಕೂಡಾ ಅವರು ರಾತ್ರಿ ಪಹರೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆಗ ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ ಎಂದು ಮೊರದಾಬಾದ್ ಮುಖ್ಯ ವೈದ್ಯಾಧಿಕಾರಿ ಎಂ.ಸಿ. ಗಾರ್ಗ್ ತಿಳಿಸಿದ್ದಾರೆ.
ಮರಣೋತ್ತರ ಸಮೀಕ್ಷೆ ವರದಿಯಲ್ಲಿ ಇರುವುದೇನು?
ಮೊರದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಣಿಪಾಲ್ ಸಿಂಗ್ ಅವರ ಸಾವಿಗೆ ಲಸಿಕೆಯ ಅಡ್ಡ ಪರಿಣಾಮ ಕಾರಣವಲ್ಲ. ಬದಲಿಗೆ ತೀವ್ರ ಹೃದಯಾಘಾತ ಮತ್ತು ಉಸಿರಾಟ ಸಂಬಂಧಿ ಕಾಯಿಲೆಯಿಂದ ಅವರು ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ತಂದೆ ಆರೋಗ್ಯ ಸ್ಥಿತಿಯ ಬಗ್ಗೆ ಮಗನ ಮಾತುಗಳು
"ನಮ್ಮ ತಂದೆ ಲಸಿಕೆ ಪಡೆದುಕೊಳ್ಳುವುದಕ್ಕಿಂತ ಮೊದಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಲಸಿಕೆ ಪಡೆದುಕೊಂಡ ನಂತರದಲ್ಲಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಲಸಿಕೆ ಕೇಂದ್ರದಿಂದ ಹೊರಟರು. ನಾನು ಅವರನ್ನು ಮನೆಗೆ ಕರೆದುಕೊಂಡು ಬಂದೆ. ಅವರಲ್ಲಿ ಉಸಿರಾಟ ತೊಂದರೆ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ಅವರಲ್ಲಿ ಮೊದಲೇ ನಿಮೋನಿಯಾ ಸಂಬಂಧಿತ ಕಾಯಿಲೆಯಿದ್ದು, ಸಾಮಾನ್ಯ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದರು. ಆದರೆ ಮನೆಗೆ ಕರೆದುಕೊಂಡು ಬಂದ ಬಳಿಕ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು ಎಂದು ಮಣಿಪಾಲ್ ಸಿಂಗ್ ಅವರ ಪುತ್ರ ವಿಶಾಲ್ ತಿಳಿಸಿದ್ದಾರೆ.
ಕೊರೊನಾ ಲಸಿಕೆ ವಿತರಣೆ ಕಾರ್ಯ ಹೇಗಿದೆ?
ದೇಶಾದ್ಯಂತ ಜನವರಿ.16ರಂದು ಕೊರೊನಾ ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಮೊದಲ ದಿನ ದೇಶಾದ್ಯಂತ 1.91 ಲಕ್ಷ ಜನರಿಗೆ ಲಸಿಕೆಯನ್ನು ನೀಡಲಾಗಿದ್ದು, ಉತ್ತರ ಪ್ರದೇಶದಲ್ಲಿ ಶನಿವಾರ ಒಟ್ಟು 22643 ವೈದ್ಯಕೀಯ ಸಿಬ್ಬಂದಿ ಲಸಿಕೆ ನೀಡಲಾಗಿತ್ತು. ರಾಜ್ಯದಲ್ಲಿ ಜನವರಿ.22ರ ಶುಕ್ರವಾರ ಎರಡನೇ ಬಾರಿ ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.