ಬೆಲೆ ಏರಿಕೆ: 'ಶೇ. 95 ರಷ್ಟು ಭಾರತೀಯರಿಗೆ ಪೆಟ್ರೋಲ್ ಅಗತ್ಯವಿಲ್ಲ' ಎಂದ ಯುಪಿ ಸಚಿವ
ಲಕ್ನೋ, ಅಕ್ಟೋಬರ್ 21: ದೇಶದಲ್ಲಿ ದಿನ ಕಳೆದಂತೆ ಪೆಟ್ರೋಲ್ ಹಾಗೂ ಅನಿಲ ದರವು ಏರಿಕೆ ಆಗುತ್ತಲೇ ಇದೆ. ಈ ಬಗ್ಗೆ ಮಾಧ್ಯಮಗಳು ಉತ್ತರ ಪ್ರದೇಶದ ಸಚಿವರೊಬ್ಬರನ್ನು ಪ್ರಶ್ನಿಸಿದಾಗ, "ಶೇಕಡ 95 ರಷ್ಟು ಭಾರತೀಯರಿಗೆ ಪೆಟ್ರೋಲ್ ಬೇಕಾಗಿಲ್ಲ," ಎಂದು ಹೇಳುವ ಮೂಲಕ ಈಗ ಪೇಚಿಗೆ ಸಿಲುಕಿದ್ದಾರೆ.
ಸತತ ಎರಡನೇ ದಿನ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ಈಗ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈಗಾಗಲೇ ಹಲವಾರು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆಯು ನೂರರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಜಲೌನ್ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಸಚಿವ ಉಪೇಂದ್ರ ತಿವಾರಿ, "ಶೇಕಡ 95 ರಷ್ಟು ಭಾರತೀಯರಿಗೆ ಪೆಟ್ರೋಲ್ ಬೇಕಾಗಿಲ್ಲ. ಬೆರಳೆಣಿಕೆಯಷ್ಟು ಮಂದಿ ನಾಲ್ಕು ಚಕ್ರಗಳ ವಾಹನವನ್ನು ಓಡಿಸುತ್ತಾರೆ" ಎಂದರು.
'ಉಚಿತ ಲಸಿಕೆಗೆ ಹಣ ಬರುವುದು ಎಲ್ಲಿಂದ, ಇಲ್ಲಿಂದಲೇ'!, ಪೆಟ್ರೋಲ್ ಬೆಲೆ ಬಗ್ಗೆ ಕೇಂದ್ರ ಸಚಿವರ ಹೇಳಿಕೆ
"ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಲು ವಿರೋಧ ಪಕ್ಷಗಳಿಗೆ ಈಗ ಯಾವುದೇ ವಿಷಯಗಳು ಇಲ್ಲ. 2014 ಕ್ಕಿಂತ ಮುಂಚೆ ಹಾಗೂ ಈಗಿನ ದರದ ಬಗ್ಗೆ ನೀವು ತುಲನೆ ಮಾಡಿ ನೋಡಬಹುದು. ದೇಶದ ತಲಾ ಆದಾಯವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ಆಡಳಿತದಲ್ಲಿ ದ್ವಿಗುಣಗೊಂಡಿದೆ," ಎಂದು ಸಚಿವರು ಹೇಳಿದರು.
"ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆ ಸಂಬಂಧಿಸಿ ಮಾತನಾಡುವುದಾದರೆ, ಈಗ ಪೆಟ್ರೋಲ್ ಅಗತ್ಯವಿರುವವರು ಹಾಗೂ ಚತುಶ್ಚಕ್ರ ವಾಹನವನ್ನು ಓಡಿಸುವವರು ಬೆರಳೆಣಿಕೆಯಷ್ಟು ಮಂದಿ. ಪ್ರಸ್ತುತ ಶೇಕಡ 95 ರಷ್ಟು ಮಂದಿಗೆ ಪೆಟ್ರೋಲ್ ಅಗತ್ಯವಿಲ್ಲ," ಎಂದು ಯುಪಿ ಸಚಿವ ಉಪೇಂದ್ರ ತಿವಾರಿ ಅಭಿಪ್ರಾಯ ಪಟ್ಟಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಈಗಾಗಲೇ ಆರ್ಥಿವಾಗಿ ತತ್ತರಿಸಿರುವ ಜನರಿಗೆ ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಇನ್ನಷ್ಟು ಸಂಕಷ್ಟವನ್ನು ಉಂಟು ಮಾಡಿದೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆಯು ಲೀಟರ್ಗೆ 103.18 ರೂಪಾಯಿ ಆಗಿದೆ. ಇನ್ನು ಮೆಟ್ರೋ ನಗರದಲ್ಲಿ ಪೆಟ್ರೋಲ್ ಬೆಲೆಯು ಇನ್ನಷ್ಟು ಅಧಿಕವಾಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯು ರೂಪಾಯಿ 112.44 ಆಗಿದೆ. ಡಿಸೇಲ್ ಬೆಲೆ 103.26 ಆಗಿದೆ.
ಕೋವಿಡ್ ನಿಯಂತ್ರಣಕ್ಕೆ ಹಣ ಹೊಂದಿಸಲು ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ!
"ಸರ್ಕಾರ ನೂರು ಕೋಟಿಗೂ ಅಧಿಕ ಮಂದಿಗೆ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡಿದೆ. ಇನ್ನು ಕೋವಿಡ್ ಚಿಕಿತ್ಸೆಯನ್ನು ಕೂಡಾ ಸರ್ಕಾರವೇ ಉಚಿತವಾಗಿ ನೀಡಿದೆ. ಮನೆ ಮನೆಗೆ ಔಷಧಿಯನ್ನು ಸರಬರಾಜು ಮಾಡಲಾಗಿದೆ," ಎಂದು ಕೂಡಾ ಸಚಿವರು ಹೇಳಿಕೊಂಡಿದ್ದಾರೆ. ಇನ್ನು ಈ ಹಿಂದೆಯೂ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬಗ್ಗೆ ಪ್ರಶ್ನೆ ಕೇಳಿದಾಗ ಸಕಾರವು ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುತ್ತಿದೆ ಎಂದು ಉಲ್ಲೇಖ ಮಾಡಿದ್ದರು.
''ಉಚಿತ ಲಸಿಕೆಗೆ ಹಣ ಬರುವುದು ಪೆಟ್ರೋಲ್ನಿಂದಲೇ''
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಪೆಟ್ರೋಲ್ ಅನ್ನು ನೀರಿಗೆ ಹೋಲಿಕೆ ಮಾಡಿದ್ದಾರೆ, ಮಿನರಲ್ ನೀರಿಗೆಯೇ ಅಷ್ಟು ಬೆಲೆ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ "ಉಚಿತ ಲಸಿಕೆಗೆ ಹಣ ಬರುವುದು ಹೇಗೆ, ಇಲ್ಲಿಂದಲೇ," ಎಂದಿದ್ದರು. ವರದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ, "ಪೆಟ್ರೋಲ್ ಬೆಲೆಯು ಹೆಚ್ಚಾಗಿಲ್ಲ ಆದರೆ ತೆರಿಗೆಯನ್ನು ಅಧಿಕವಾಗಿ ವಿಧಿಸಲಾಗುತ್ತಿದೆ. ಇದು ಸಂಪನ್ಮೂಲವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಮಾಡಲಾಗಿದೆ," ಎಂದು ಹೇಳಿಕೊಂಡಿದ್ದಾರೆ. "ಪೆಟ್ರೋಲ್ ದರವು 40 ರೂಪಾಯಿ ಆಗಿದೆ. ಅಸ್ಸಾಂ ಸರ್ಕಾರವು ಅದಕ್ಕೆ 28 ರೂಪಾಯಿ ತೆರಿಗೆಯನ್ನು ವಿಧಿಸುತ್ತದೆ. ಪೆಟ್ರೋಲಿಯಂ ಸಚಿವಾಲಯವು 30 ರೂಪಾಯಿ ತೆರಿಗೆ ವಿಧಿಸುತ್ತದೆ. ಕೊನೆಗೆ ಪೆಟ್ರೋಲ್ ಬೆಲೆಯು 98 ಆಗುತ್ತದೆ. ಆದರೆ ನೀವು ಹಿಮಾಲಯ ನೀರು ಕುಡಿಯುವುದಾದರೆ ಅದರ ಬೆಲೆ ಬಾಟಲಿಗೆ ನೂರು ರೂಪಾಯಿ ಆಗಿದೆ. ಪೆಟ್ರೋಲ್ಗಿಂತ ನೀರಿನ ಬೆಲೆ ಅಧಿಕವಾಗಿದೆ," ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)