ಕನಿಕಾ ಸಂಪರ್ಕಿಸಿದ್ದ 266 ಮಂದಿ ಪರೀಕ್ಷೆ, 60 ಜನರಿಗೆ ನೆಗಿಟಿವ್
ಲಕ್ನೌ, ಮಾರ್ಚ್ 23: ಬಾಲಿವುಡ್ ಗಾಯಕಿ ಕನಿಕಾ ಕಪೂರ್ಗೆ ಕೊರೊನಾ ಸೋಂಕು ದೃಢವಾಗುತ್ತಿದ್ದಂತೆ, ಆಕೆಯ ಜೊತೆ ಸಂಪರ್ಕದಲ್ಲಿದ್ದವರಿಗೆಲ್ಲಾ ಆತಂಕ ಹೆಚ್ಚಾಗಿತ್ತು. ಲಂಡನ್ನಿಂದ ಲಕ್ನೌಗೆ ಬಂದಿದ್ದ ಕನಿಕಾ ಮೂರು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿತ್ತು.
ಇದೀಗ, ಕನಿಕಾ ಕಪೂರ್ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಹುಡುಕಿ ಅವರ ರಕ್ತದ ಮಾದರಿ ಸಂಗ್ರಹಿಸುವ ಕಾರ್ಯ ಮುಗಿದಿದೆ ಎಂದು ತಿಳಿದು ಬಂದಿದೆ. ಇದುವರೆಗೂ ಕನಿಕಾ ಕಪೂರ್ ಜತೆ ಸಂಪರ್ಕದಲ್ಲಿದ್ದ 266 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 60ಕ್ಕೂ ಹೆಚ್ಚು ಜನರಿಗೆ ನೆಗಿಟಿವ್ ಬಂದಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಕನಿಕಾ ಕಪೂರ್ ವಿಚಾರದಲ್ಲಿ ತಪ್ಪು ಆಗಿದ್ದೆಲ್ಲಿ? ಕೊರೊನಾ ಸೋಂಕಿತೆ ಬಚ್ಚಿಟ್ಟ ಸತ್ಯ
ಈ ಬಗ್ಗೆ ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಸ್ಪಷ್ಟನೆ ನೀಡಿದ್ದು, 'ಉಳಿದವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ರೋಗ ಲಕ್ಷಣ ಕಂಡುಬಂದವರನ್ನು ಪರೀಕ್ಷಿಸಿದ್ದು, ಅವರ ಮೇಲೂ ನಿಗಾವಹಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
ಕನಿಕಾ ಕಪೂರ್ ಜೊತೆ ಪಾರ್ಟಿಯಲ್ಲಿದ್ದವರ ಪೈಕಿ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಮಗ ಸಂಸದ ದುಶ್ಯಂತ್, ಉತ್ತರ ಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್, ಮಾಜಿ ಕೇಂದ್ರ ಸಚಿವ ಜತೀನ್ ಪ್ರಸಾದ್ ಸೇರಿದಂತೆ ಇನ್ನು ಹಲವರಿದ್ದರು. ಇವರೆಲ್ಲರಿಗೂ ಕೊರೊನಾ ನೆಗಿಟಿವ್ ಬಂದಿದೆ.
ಈ ಕುರಿತು ಉತ್ತರ ಪ್ರದೇಶದ ಆರೋಗ್ಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ''ಕೊರೊನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವುದು ಬಹಳ ಕಷ್ಟದ ಕೆಲಸ. ಆದರೆ, ಕನಿಕಾ ಕಪೂರ್ ಜೊತೆ ಪಾರ್ಟಿಯಲ್ಲಿದ್ದವರ ಖಚಿತ ಮಾಹಿತಿ ಮತ್ತು ಅವರು ಉತ್ತಮವಾಗಿ ಸಹಕರಿಸಿದ ಹಿನ್ನೆಲೆ ಸುಲಭವಾಯಿತು' ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿತೆ ಕನಿಕಾ ಜೊತೆ ಪಾರ್ಟಿಯಲ್ಲಿದ್ದ ವಸುಂಧರಾ ರಾಜೇ ಸೇಫ್
ಮಾರ್ಚ್ 9 ರಂದು ಲಂಡನ್ನಿಂದ ಮುಂಬೈಗೆ ಬಂದು, ಅಲ್ಲಿಂದ ಲಕ್ನೌಗೆ ಬಂದಿದ್ದ ಕನಿಕಾ ಕಪೂರ್ ಮಾರ್ಚ್ 15 ರಂದು ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮಾರ್ಚ್ 20 ರಂದು ಆಕೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.