ಗಂಗಾ ನದಿ ಬಳಿ ಶವಕ್ಕೆ ಪೆಟ್ರೋಲ್, ಟೈರ್ ಬಳಸಿ ಅಂತ್ಯಸಂಸ್ಕಾರ: 5 ಮಂದಿ ಪೊಲೀಸರ ಅಮಾನತು
ಲಕ್ನೋ, ಮೇ 18: ಕಳೆದ ಒಂದು ವಾರದಿಂದ ರಾಶಿಗಟ್ಟಲೆ ಕೊರೊನಾ ಸೋಂಕಿತರ ಶವಗಳು ಗಂಗಾನದಿಯಲ್ಲಿ ತೇಲುತ್ತಿವೆ.
ಬಿಹಾರದಲ್ಲಿ ಮೊದಲು 150ಕ್ಕೂ ಹೆಚ್ಚು ಶವಗಳು ಕಾಣಿಸಿಕೊಂಡಿದ್ದು, ಉತ್ತರ ಪ್ರದೇಶದಿಂದ ಬಂದ ಶವಗಳಿವು ಎಂದು ಆರೋಪಿಸಲಾಗಿತ್ತು. ಬಳಿಕ ಉತ್ತರ ಪ್ರದೇಶದ ಗಂಗಾನದಿ ತೀರದಲ್ಲೂ ಕೂಡ ಹಲವು ಶವಗಳು ಪತ್ತೆಯಾಗಿದ್ದವು.
ಬಿಹಾರದ ನಂತರ ಇದೀಗ ಉತ್ತರ ಪ್ರದೇಶದ ಗಂಗಾ ತೀರದಲ್ಲಿ ತೇಲುತ್ತಿವೆ ಹೆಣಗಳ ರಾಶಿ
ಆ ಎಲ್ಲಾ ಶವಗಳನ್ನು ಹೊರಕ್ಕೆ ತೆಗೆದು ಅಂತ್ಯ ಸಂಸ್ಕಾರ ನಡೆಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು, ಆದರೆ ಶವಸಂಸ್ಕಾರಕ್ಕೆ ಪೆಟ್ರೋಲ್ ಹಾಗೂ ಟೈರ್ ಬಳಸಿ ಅಂತ್ಯಸಂಸ್ಕಾರ ಬಡೆಸಿದ್ದಕ್ಕಾಗಿ ಐವರು ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಈ ಘಟನೆಯ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.ನಿನ್ನೆ ದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋವೊಂದರಲ್ಲಿ ಮೃತ ವ್ಯಕ್ತಿಯೊಬ್ಬರ ಶವದ ಅಂತಸಂಸ್ಕಾರ ಮಾಡುವಾಗ ಪೊಲೀಸರು ಕಂಡುಬಂದಿದ್ದಾರೆ ಎಂದು ಎಸ್ ಪಿ ವಿಪಿನ್ ಟಾಡಾ ಹೇಳಿದ್ದಾರೆ.
ಗಂಗಾ ನದಿಯ ತಟದಲ್ಲಿ ತೇಲಿಬರುವ ಶವಗಳಿಗೆ ಮೇ 15 ರಂದು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮೃತದೇಹದ ಮೇಲೆ ಟೈರ್ ಇಟ್ಟು, ಪೆಟ್ರೋಲ್ ಸುರಿದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಪೊಲೀಸ್ ಠಾಣೆ ಎಸ್ ಹೆಚ್ ಒ ಸಂಜಯ್ ತ್ರಿಪಾಠಿ ಹೇಳಿದ್ದಾರೆ.
ಅಂತಿಮ ಸಂಸ್ಕಾರದ ವೇಳೆಯಲ್ಲಿ ಪೊಲೀಸರು ಅಸೂಕ್ಷ್ಮತೆಯನ್ನು ಪ್ರದರ್ಶಿಸಿದ್ದಾರೆ. ಐವರು ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಲಾಗಿದ್ದು, ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.