ಲಖಿಂಪುರ ಖೇರಿ ಗಲಭೆ: ಕಾರಿನಲ್ಲಿದ್ದ ಬಿಜೆಪಿ ನಾಯಕ ಸೇರಿ ನಾಲ್ವರ ಬಂಧನ
ಲಕ್ನೋ, ಅಕ್ಟೋಬರ್ 18: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದುನಾಲ್ವರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಸೇರಿ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ರೈತರ ಮೇಲೆ ಹರಿದ ಕಾರಿನಲ್ಲಿ ಆರೋಪಿಗಳು ಇದ್ದರು ಎಂಬ ಮಾಹಿತಿ ಸಿಕ್ಕಿದೆ.
ಬಂಧಿತರನ್ನು ಸುಮಿತ್ ಜೈಸ್ವಾಲ್, ಶಿಶುಪಾಲ್, ನಂದನ್ ಸಿಂಗ್ ಬಿಷ್ಟ್ ಹಾಗೂ ಸತ್ಯ ಪ್ರಕಾಶ್ ತ್ರಿಪಾಠಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳನ್ನು ಲಖಿಂಪುರ ಖೇರಿ ಪೊಲೀಸರು ಹಾಗೂ ಎಸ್ಡಬ್ಲ್ಯೂಎಟಿ ತಂಡದ ಅಪರಾಧ ವಿಭಾಗವು ಬಂಧಿಸಿದೆ.
ಆರೋಪಿ ಸತ್ಯ ಪ್ರಕಾಶ್ ತ್ರಿಪಾಠಿ ಬಳಿ ಇದ್ದ ಲೈಸೆನ್ಸ್ ಹೊಂದಿರುವ ರಿವಾಲ್ವರ್ ಹಾಗೂ ಮೂರು ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಮಿತ್ ಜೈಸ್ವಾಲ್ ಬಿಜೆಪಿ ನಾಯಕನಾಗಿದ್ದು, ಆತ ಈ ವಾಹನವನ್ನು ಚಲಾಯಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿತ್ತು. ಈತ ಇದಕ್ಕೂ ಮುನ್ನ ಅನಾಮಧೇಯ ರೈತರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲು ಮಾಡಿದ್ದ. ಈ ದೂರಿನ ಆಧಾರದಲ್ಲಿ ಎಫ್ಐಆರ್ ಕೂಡಾ ದಾಖಲು ಆಗಿತ್ತು. ತನ್ನ ಕಾರಿನ ಚಾಲಕ, ಸ್ನೇಹಿತ ಹಾಗೂ ಇತರೆ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ರೈತರು ಥಳಿಸಿ ಕೊಂದಿದ್ದಾರೆ ಎಂದು ಈತ ಆರೋಪ ಮಾಡಿದ್ದ.
ಸುಮಿತ್ ಜೈಸ್ವಾಲ್ ರೈತರ ಮೇಲೆ ಕಾರು ಚಲಾಯಿಸಿದ ಬಳಿಕ ಕಾರಿನಿಂದ ಇಳಿದು ಓಡುವ ದೃಶ್ಯವು ವೈರಲ್ ವಿಡಿಯೋದಲ್ಲಿ ಕಂಡು ಬಂದಿತ್ತು. ಆದರೆ ಈ ಘಟನೆ ನಡೆದ ಮೂರು ದಿನಗಳ ನಂತರ ಸುಮಿತ್ ಜೈಸ್ವಾಲ್ ರೈತರು ತನ್ನ ಚಾಲಕನನ್ನು ಥಳಿಸಿ ಕೊಂದಿದ್ದಾರೆ ಎಂದು ಹೇಳಿಕೊಂಡು ದೂರು ದಾಖಲು ಮಾಡಿದ್ದ.
ಹಾಗೆಯೇ ಜನರು ಕಾರಿನಲ್ಲಿದವ ಮೇಲೆ ಹಲ್ಲೆ ಮಾಡಿದ ಸಂದರ್ಭದಲ್ಲಿ ತಾನು ಹಾಗೂ ತನ್ನ ಸ್ನೇಹಿತ ಶುಭಂ, ಕಾರು ಚಾಲಕ ಹರಿ ಓಂ ಕಾರಿನಲ್ಲೇ ಇದ್ದೆವು ಎಂದು ಬಿಜೆಪಿ ನಾಯಕ ಹೇಳಿಕೊಂಡಿದ್ದಾರೆ. ಜನರು ಕೋಲುಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಕೂಡಾ ಹೇಳಿದ್ದಾರೆ.
ಅಕ್ಟೋಬರ್ 3 ರಂದು ಮೂರು ವಾಹನಗಳು ರಭಸವಾಗಿ ರೈತರ ಮೇಲೆ ಹರಿದು ಹೋಗಿದ್ದು, ನಾಲ್ವರು ರೈತರು ಸೇರಿದಂತೆ ಓರ್ವ ಪತ್ರಕರ್ತ ಸಾವನ್ನಪ್ಪಿದ್ದಾರೆ. ಈ ಕಾರುಗಳ ಪೈಕಿ ಒಂದು ಕಾರು ಕೇಂದ್ರ ಸಚಿವ ಅಜಯ್ ಮಿಶ್ರಾರಿಗೆ ಸೇರಿದ್ದು ಆಗಿದೆ. ಅಜಯ್ ಮಿಶ್ರಾರ ಪುತ್ರ ಕೂಡಾ ಕಾರಲ್ಲಿ ಇದ್ದರು ಎಂದು ರೈತರು ಆರೋಪ ಮಾಡಿದ್ದಾರೆ.
ಈ ಹಿನ್ನೆಲೆ ಎಫ್ಐಆರ್ ದಾಖಲು ಮಾಡಿದ ಹಲವು ದಿನಗಳ ಬಳಿಕ ಅಂದರೆ ಅಕ್ಟೋಬರ್ 9 ರಂದು ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾರ ಬಂಧಿಸಲಾಗಿತ್ತು. ಪೊಲೀಸರು ಸುಮಾರು ಹನ್ನರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಹೇಳಿ ಆಶಿಶ್ ಮಿಶ್ರಾರನ್ನು ಬಂಧಿಸಿದ್ದರು. ಈ ಬಂಧನವು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿದ ಬಳಿಕ ನಡೆದಿದೆ.
ಇನ್ನು ರೈತರ ವಿರುದ್ಧ ದೂರು ದಾಖಲು ಮಾಡಿರುವ ಬಿಜೆಪಿ ನಾಯಕ ಸುಮಿತ್ ಜೈಸ್ವಾಲ್, "ಅಜಯ್ ಮಿಶ್ರಾರ ಬೆಂಗಾವಲು ವಾಹನಗಳ ಮೇಲೆ ಪ್ರತಿಭಟನಾನಿರತ ರೈತರು ದಾಳಿ ನಡೆಸಿದ್ದಾರೆ. ಕಾರು ಸಂಚಾರ ಮಾಡುತ್ತಿರಲಿಲ್ಲ. ಪ್ರತಿಭಟನಾಕಾರರೇ ಕಾರಿನ ಮೇಲೆ ದಾಳಿ ನಡೆಸಿದ್ದಾರೆ," ಎಂದು ಕೂಡಾ ದೂರಿನಲ್ಲಿ ಉಲ್ಲೇಖ ಮಾಡಿದ್ದಾನೆ.
"ನಾವು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಇದ್ದೆವು. ಆದರೆ ಅಲ್ಲಿನ ಭಯದ ವಾತಾವರಣವಿತ್ತು. ರೈತರು ಕೋಲುಗಳಿಂದ, ಕಲ್ಲುಗಳಿಂದ ನಮ್ಮ ಮೇಲೆ ಹಲ್ಲೆ ಮಾಡಲು ಆರಂಭ ಮಾಡಿದರು. ನಮ್ಮ ಮೇಲೆ ದೌರ್ಜನ್ಯ ಮಾಡಿದರು," ಎಂದು ಕೂಡಾ ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.
ಇನ್ನು ಅಷ್ಟೇ ಅಲ್ಲದೇ ಆ ಪ್ರತಿಭಟನಾನಿರತರು "ಖಾಲಿಸ್ತಾನ ಜಿಂದಾಬಾದ್" ಎಂದು ಘೋಷಣೆ ಕೂಗಿದ್ದಾರೆ. ಕಾರಿನ ಮೇಲೆ ಹತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ವಿಡಿಯೋ ಬೆಳಕಿಗೆ ಬಂದಿಲ್ಲ. ಬದಲಾಗಿ ರೈತರ ಮೇಲೆ ಕಾರು ಹರಿದು ಹೋದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.