ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ
ಲಕ್ನೋ, ಸಪ್ಟೆಂಬರ್.30: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶೇಷ ತನಿಖಾ ತಂಡವುವನ್ನು ರಚಿಸಿದ್ದಾರೆ.
ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಏಳು ದಿನಗಳಲ್ಲೇ ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.
ಹತ್ರಾಸ್ ಅತ್ಯಾಚಾರ ಕೇಸ್: ರಾತ್ರಿ 2.30ಕ್ಕೆ ಸಂತ್ರಸ್ತೆ ಅಂತ್ಯಕ್ರಿಯೆ
ಈ 19 ವರ್ಷದ ಯುವತಿ ಮೇಲಿನ ಅತ್ಯಾಚಾರ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂ ಮಾತನಾಡಿದ್ದೇನೆ. ಈ ಘೋರ ಕೃತ್ಯವನ್ನು ಎಸಗಿದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಮೋದಿ ಕೂಡಾ ಸೂಚಿಸಿದ್ದಾರೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಹತ್ರಾಸ್ ನಲ್ಲಿ ತೀವ್ರಗೊಂಡ ಪ್ರತಿಭಟನೆ
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಯುವತಿ ಮೇಲೆ ಕ್ರೌರ್ಯ ತೋರಿದ ನಾಲ್ವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯು ಉಗ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಮತ್ತು ಪೊಲೀಸರ ನಡೆ ಬಗ್ಗೆ ಪ್ರತಿಭಟನಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಬಂಧಿಕರನ್ನು ಹೊರಗಿಟ್ಟು ಸಂತ್ರಸ್ತೆಯ ಅಂತ್ಯಕ್ರಿಯೆ
ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 20 ವರ್ಷದ ಯುವತಿ ಅಂತ್ಯ ಸಂಸ್ಕಾರವನ್ನು ಪೊಲೀಸರು ಮಧ್ಯರಾತ್ರಿ 2.30ರ ಸಮಯದಲ್ಲಿ ನೆರವೇರಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಂತ್ಯಸಂಸ್ಕಾರಕ್ಕೂ ಮೊದಲು ನಡೆದ ಘಟನೆಯ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, ಸಾಕಷ್ಟು ಗೊಂದಲ ಸೃಷ್ಟಿಸಿದೆ. ಸಂತ್ರಸ್ತೆಯ ಸಂಬಂಧಿಕರಿಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ ನೀಡದೇ, ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ಹೊತ್ತೊಯ್ಯಲಾಗಿದೆ. ಈ ವೇಳೆ ಅಸಹಾಯಕ ಸ್ಥಿತಿಯಲ್ಲಿ ಸಂತ್ರಸ್ತೆಯ ತಾಯಿ ಕಣ್ಣೀರು ಹಾಕಿರುವುದು ಕರುಳು ಹಿಂಡುವಂತಿದೆ.
ಉತ್ತರ ಪ್ರದೇಸ ಪೊಲೀಸರು ಹೇಳುವುದೇನು?
ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಸಂಬಂಧಿಸಿದಂತೆ ದೇಹದಲ್ಲಿ ಯಾವುದೇ ಗುರುತು ಪತ್ತೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ನಾಲಿಗೆ ತುಂಡು ಮಾಡಲಾಗಿದೆ ಎಂಬ ವರದಿಗಳು ಸುಳ್ಳು ಎಂದು ಹೇಳಿದ್ದಾರೆ. 'ಹತ್ರಾಸ್ ಅಥವಾ ಅಲಿಗಡದ ವೈದ್ಯರಾಗಲೀ ಲೈಂಗಿಕ ದೌರ್ಜನ್ಯ ನಡೆದ ಲಕ್ಷಣಗಳನ್ನು ದೃಢಪಡಿಸಿಲ್ಲ. ವಿಧಿವಿಜ್ಞಾನ ನೆರವಿನೊಂದಿಗೆ ವೈದ್ಯರು ಈ ವಿಷಯವನ್ನು ತನಿಖೆ ಮಾಡಿದ್ದಾರೆ. ಸಂತ್ರಸ್ತೆಯ ಖಾಸಗಿ ಅಂಗಗಳಲ್ಲಿ ಅತ್ಯಾಚಾರದ ಕುರುಹುಗಳು ಕಂಡುಬಂದಿಲ್ಲ' ಎಂದು ಹತ್ರಾಸ್ ಎಸ್ಪಿ ವಿಕ್ರಾಂತ್ ವೀರ್ ತಿಳಿಸಿದ್ದಾರೆ.
ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ಸಾವು
ಕುಟುಂಬದವರ ಜತೆ ಹೊಲದಲ್ಲಿ ಹುಲ್ಲು ಕೀಳುತ್ತಿದ್ದ ಯುವತಿಯನ್ನು ಎಳೆದೊಯ್ದ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಯುವತಿಗೆ ತೀವ್ರ ಗಾಯವಾಗಿದ್ದು, ಆಕೆ ನಾಲಿಗೆ ಕತ್ತರಿಸಿ ಹೋಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿ ಮಂಗಳವಾರ ಬೆಳಗ್ಗೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಸಂತ್ರಸ್ತೆ ಕುಟಂಬಸ್ಥರಿಗೂ ಭಾಗವಹಿಸಲು ಅವಕಾಶ ನೀಡದೇ ಪೊಲೀಸರೇ ಮಧ್ಯರಾತ್ರಿ 2.30ರ ಸಂದರ್ಭದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.