ಯುವಕನ ಕುತ್ತಿಗೆಗೆ ಹಗ್ಗ ಹಾಕಿ, ಬೈಕ್ ನಲ್ಲಿ 15 ಕಿ.ಮೀ. ಎಳೆದೊಯ್ದು ಬಿಸಾಡಿದರು
ಲಖನೌ, ಸೆಪ್ಟೆಂಬರ್ 25: ಇಪ್ಪತ್ತೊಂದು ವರ್ಷದ ಯುವಕನ ಕುತ್ತಿಗೆಗೆ ಹಗ್ಗ ಹಾಕಿ, ಅದನ್ನು ಮೋಟಾರ್ ಸೈಕಲ್ ಗೆ ಕಟ್ಟಿ ಹದಿನೈದು ಕಿಲೋಮೀಟರ್ ಗೂ ಹೆಚ್ಚು ದೂರದ ತನಕ ಎಳೆದೊಯ್ದ ಘಟನೆ ಮೀರತ್ ನಲ್ಲಿ ಮಂಗಳವಾರ ನಡೆದಿದೆ. ಯುವಕನ ದೇಹದಲ್ಲಿ ಗುಂಡಿನ ಗಾಯ ಆಗಿದೆ. ಇನ್ನು ಎಡ ಪಾದವೇ ಇಲ್ಲ.
ಯುವಕ ಮುಕುಲ್ ಕುಮಾರ್ ನನ್ನು ಹಗ್ಗ ಹಾಕಿ ಎಳೆದೊಯ್ಯುವ ಮುನ್ನ ಗುಂಡಿಟ್ಟು ಕೊಲ್ಲಲಾಗಿತ್ತೇ ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಖಾತ್ರಿ ಇಲ್ಲ. ಆದರೆ ದೇಹದಲ್ಲಿ ಹಲವೆಡೆ ಗಾಯಗಳಾಗಿವೆ. ಅದರಲ್ಲೂ ಮುಖ ಹಾಗೂ ತಲೆಯ ಹಲವೆಡೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಎಡ ಪಾದವೇ ಇಲ್ಲ. ಮುಕುಲ್ ವಾಸವಿದ್ದ ಹಾಪುರ ಜಿಲ್ಲೆಯ ಮಂಡಿ ಪ್ರದೇಶದ ಬಳಿಯಿಂದ ಹದಿನೈದು ಕಿಲೋಮೀಟರ್ ಉದ್ದಕ್ಕೂ ರಕ್ತದ ಗುರುತುಗಳು ಕಂಡುಬಂದಿವೆ.
ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ 16 ವರ್ಷದ ಯುವತಿಯ ಕತ್ತು ಕೊಯ್ದು ಹತ್ಯೆ
ದೇಹವನ್ನು ಅಷ್ಟು ದೂರಕ್ಕೆ ಬೈಕ್ ನಲ್ಲಿ ಎಳೆದೊಯ್ದು, ಮೀರತ್ ನ ಖರ್ ಖೋಡ ಪ್ರದೇಶದಲ್ಲಿ ಹಾಕಲಾಗಿದೆ. ಶವದ ಬಳಿಯೇ ಮೋಟಾರ್ ಸೈಕಲ್ ದೊರೆತಿದೆ. ವಿರೂಪಗೊಂಡಿದ್ದ ಶವವನ್ನು ದಾರಿಹೋಕರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತುಂಬಾ ಸಂಕೋಚ ಸ್ವಭಾವದ ಮುಕುಲ್ ಗೆ ಯಾರ ಜತೆಗೂ ಶತ್ರುತ್ವ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಸ್ನೇಹಿತರ ಮಧ್ಯದ ಭಿನ್ನಾಭಿಪ್ರಾಯದಲ್ಲಿ ಈ ಘಟನೆ ನಡೆದಿರಬಹುದು. ಫೋನ್ ಕರೆಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಇನ್ನಷ್ಟು ಮಾಹಿತಿ ಸಿಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.