ಯುಪಿ ಚುನಾವಣೆ; ಸಮಾಜವಾದಿ ಪಕ್ಷದಿಂದ ಮೈತ್ರಿ ಘೋಷಣೆ!
ಲಕ್ನೋ, ಅಕ್ಟೋಬರ್ 20; ಸಮಾಜವಾದಿ ಪಕ್ಷ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಸ್ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದೆ. 2017ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಜಯಗಳಿಸಿತ್ತು, ಎಸ್ಬಿಎಸ್ಪಿ 3 ಸ್ಥಾನ ಗೆದ್ದಿತ್ತು.
ಬುಧವಾರ ಸಮಾಜವಾದಿ ಪಕ್ಷ ಓಂ ಪ್ರಕಾಶ್ ರಾಜ್ಭರ್ ನೇತೃತ್ವದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ) ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಸಮಾಜವಾದಿ ಪಕ್ಷಕ್ಕೆ ಬೆಂಬಲ ಘೋಷಿಸಿದ ಶರದ್ ಪವಾರ್: ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟಿಗೆ ಕರೆ
ಹಿಂದುಳಿದವರು, ದಲಿತರು, ಮಹಿಳೆಯರು, ಯುವಕರ ಪರವಾಗಿ ಕೆಲಸ ಮಾಡಲು ಎರಡೂ ಪಕ್ಷಗಳು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿವೆ. ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣಲಿದೆ ಎಂದು ಸಮಾಜವಾದಿ ಪಕ್ಷ ತನ್ನ ಟ್ವೀಟ್ನಲ್ಲಿ ಹೇಳಿದೆ.
ಸಮಾಜವಾದಿ ಪಕ್ಷವನ್ನು ಸೋಲಿಸಲು ಯಾವ ಪ್ರಯತ್ನಕ್ಕೂ ಸಿದ್ಧ: ಮಾಯಾವತಿ
ಓಂ ಪ್ರಕಾಶ್ ರಾಜ್ಭರ್ ಈಗಾಗಲೇ ಚುನಾವಣೆಗಾಗಿಯೇ 'ಭಾಗಿದಾರಿ ಸಂಕಲ್ಪ ಮೋರ್ಚಾ' ಎಂಬುವುದನ್ನು ಹುಟ್ಟುಹಾಕಿದ್ದಾರೆ. ಎಐಎಂಐಎಂ ಈಗಾಗಲೇ ಈ ಮೋರ್ಚಾಗೆ ಬೆಂಬಲವನ್ನು ನೀಡಿದೆ. ಈಗ ಸಮಾಜವಾದಿ ಪಕ್ಷ ಎಸ್ಬಿಎಸ್ಪಿ ಜೊತೆ ಮೈತ್ರಿಗೆ ಒಪ್ಪಿಗೆ ನೀಡಿದೆ.
2022 ರ ಚುನಾವಣೆ: ಉತ್ತರಾಖಂಡ, ಗೋವಾ, ಮಣಿಪುರದ ಆಡಳಿತ ಉಳಿಸಿಕೊಳ್ಳುವತ್ತ ಬಿಜೆಪಿ ಚಿತ್ತ
ಮಾಧ್ಯಮಗಳ ಜೊತೆ ಮಾತನಾಡಿದ ಓಂ ಪ್ರಕಾಶ್ ರಾಜ್ಭರ್, "ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಮಾಜವಾದಿ ಪಕ್ಷ ಮತ್ತು ಎಸ್ಬಿಎಸ್ಪಿ ಕೈ ಜೋಡಿಸಿವೆ. ಅಕ್ಟೋಬರ್ 27ರಂದು ನಡೆಯುವ ಕಿಸಾನ್ ಮಹಾ ಪಂಚಾಯತ್ಗೆ ಅಖಿಲೇಶ್ ಯಾದವ್ ಆಹ್ವಾನಿಸಿದ್ದೇನೆ" ಎಂದು ಹೇಳಿದ್ದಾರೆ.
ಲಕ್ನೋದಲ್ಲಿ ಕಳೆದ ತಿಂಗಳು ನಡೆದಿದ್ದ ಸಮಾಜವಾದಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ್ದ ಅಖಿಲೇಶ್ ಯಾವದ್, "ಯಾವುದೇ ದೊಡ್ಡ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಚಿಕ್ಕಪುಟ್ಟ ಪಕ್ಷಗಳನ್ನು ಒಟ್ಟುಗೂಡಿಸಲಾಗುತ್ತದೆ" ಎಂದು ಘೋಷಣೆ ಮಾಡಿದ್ದರು.
ಸಚಿವರಾಗಿದ್ದರು; ಅಚ್ಚರಿಯ ವಿಚಾರವೆಂದರೆ ಓಂ ಪ್ರಕಾಶ್ ರಾಜ್ಭರ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿದ್ದರು. 2019ರಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಬಳಿಕ ಅವರು 10 ಚಿಕ್ಕಪಕ್ಷಗಳನ್ನು ಸೇರಿಸಿಕೊಂಡು 'ಭಾಗಿದಾರಿ ಸಂಕಲ್ಪ ಮೋರ್ಚಾ' ಸ್ಥಾಪಿಸಿದರು. ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ) ಸಹ ಇದರ ಭಾಗವಾಗಿದೆ. ಅಸಾದುದ್ದೀನ್ ಓವೈಸಿ ಸಹ ಈ ಮೋರ್ಚಾ ಬೆಂಬಲಿಸಿದ್ದಾರೆ.
ಬಿಜೆಪಿಗೆ ಮತ್ತೆ ಅಧಿಕಾರ; 2022ರ ಫೆಬ್ರವರಿ ಅಥವ ಮಾರ್ಚ್ನಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸಿ-ವೋಟರ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.
ಉತ್ತರ ಪ್ರದೇಶ ವಿಧಾನಸಭೆ 403 ಸ್ಥಾನಗಳನ್ನು ಹೊಂದಿದೆ. ಸಮೀಕ್ಷೆಯ ಪ್ರಕಾರ ಚುನಾವಣೆಯಲ್ಲಿ ಬಿಜೆಪಿ 241 ರಿಂದ 249 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಪುನಃ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ಸಮಾಜವಾದಿ ಪಕ್ಷ 130-138 ಸ್ಥಾನಗಳನ್ನು ಪಡೆಯುವ ಮೂಲಕ 2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಮಾಯಾವತಿ ನೇತೃತ್ವದ ಬಿಎಸ್ಪಿ 15 ರಿಂದ 9 ಮತ್ತು ಕಾಂಗ್ರೆಸ್ 3 ರಿಂದ 7 ಸ್ಥಾನಗಳನ್ನು ಪಡೆಯಲಿದೆ.
ಸಿ-ವೋಟರ್ ಸಮೀಕ್ಷೆಯ ಪ್ರಕಾರ ಮುಖ್ಯಮಂತ್ರಿ ಹುದ್ದೆಗೆ ಅಖಿಲೇಶ್ ಯಾದವ್, ಮಾಯಾವತಿ, ಪ್ರಿಯಾಂಕ ಗಾಂಧಿ ಅವರಿಗಿಂತ ಯೋಗಿ ಆದಿತ್ಯನಾಥ್ಗೆ ಹೆಚ್ಚಿನ ಮತಗಳು ಸಿಕ್ಕಿವೆ.
2017ರ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳಲ್ಲಿ ಜಯಗಳಿಸಿ ಸರ್ಕಾರ ರಚನೆ ಮಾಡಿದೆ. ಸಮಾಜವಾದಿ ಪಕ್ಷ 47 ಪಕ್ಷ, ಕಾಂಗ್ರೆಸ್ 7, ಆರ್ಎಲ್ಡಿ 1, ಆಪ್ನಾ ದಲ್ 9, ಎಸ್ಬಿಎಸ್ಪಿ 3 ಮತ್ತು ಇತರರು 1 ಕ್ಷೇತ್ರದಲ್ಲಿ ಜಯಗಳಿಸಿದ್ದರು.
2022ರಲ್ಲಿ ಗೋವಾ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರಲ್ಲಿ ಪಂಜಾಬ್ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ.