ಟ್ರಕ್-ಬಸ್ ಡಿಕ್ಕಿಯಾಗಿ ಬೆಂಕಿ: 20 ಮಂದಿ ಸಾವು, ಪ್ರಧಾನಿ ಸಂತಾಪ
ಲಕ್ನೋ, ಜನವರಿ 11: ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಘೊನೊಐ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಜೈಪುರ ಕಡೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಉಂಟಾದ ಬೆನ್ನಲ್ಲೇ ಬಸ್ಗೆ ಬೆಂಕಿ ತಗುಲಿ ದುರ್ಘಟನೆ ಘಟಿಸಿದೆ. ಘಟನೆಯಲ್ಲಿ ಟ್ರಕ್ಗೂ ಬೆಂಕಿ ತಗುಲಿದೆ.
ನೆಲಮಂಗಲದಲ್ಲಿ ಮಾಜಿ ಶಾಸಕರ ಕಾರು ಸೇರಿದಂತೆ ಸರಣಿ ಅಪಘಾತ
ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಅವಘಡ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಬಸ್ನಲ್ಲಿ ಒಟ್ಟು 46 ಪ್ರಯಾಣಿಕರಿದ್ದರು. ಇದರಲ್ಲಿ ನಿನ್ನೆಯೇ 20 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಕನೌಜ್ ಎಂಬಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದನ್ನು ಕೇಳಿ ದುಃಖವಾಯಿತು. ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಸಾವಿಗೀಡಾದವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಾ, ಗಾಯಗೊಂಡವರು ಬೇಗ ಗುಣಮುಖರಾಗಲು ಬಯಸುತ್ತೇನೆಂದು ಇಂದು ಬೆಳಗ್ಗೆ ಹಿಂದಿಯಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ತಿಳಿಸಿದ್ದಾರೆ.