ಹತ್ರಾಸ್ ಸಂತ್ರಸ್ತೆ ಸಹೋದರನ ಭದ್ರತೆಗೆ ಇಬ್ಬರು ಗನ್ ಮ್ಯಾನ್!
ಲಕ್ನೋ, ಅಕ್ಟೋಬರ್.05: ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಹಿನ್ನೆಲೆ ಕುಟುಂಬ ಸದಸ್ಯರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಸರ್ಕಾರದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕುಮಾರ್ ಅವಸ್ಥಿ ತಿಳಿಸಿದ್ದಾರೆ.
ಹತ್ರಾಸ್ ದಲಿತ ಯುವತಿ ಸಹೋದರ ಸೇರಿದಂತೆ ಇಡೀ ಕುಟುಂಬಕ್ಕೆ ಜೀವ ಬೆದರಿಕೆಯಿದೆ ಎನ್ನಲಾಗಿದ್ದು, ಸಂತ್ರಸ್ತೆ ಸಹೋದರನ ಭದ್ರತೆಗಾಗಿ ಇಬ್ಬರು ಗನ್ ಮ್ಯಾನ್ ಗಳನ್ನು ನೇಮಿಸಲಾಗಿದೆ. ಸಂತ್ರಸ್ತೆ ನಿವಾಸದ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಹತ್ರಾಸ್ ಸಂತ್ರಸ್ತೆ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದ ವರದಿ!
ಕಳೆದ ಭಾನುವಾರವಷ್ಟೇ ಸಂತ್ರಸ್ತೆ ನಿವಾಸಕ್ಕೆ ಭೇಟಿ ನೀಡಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್, ಸಂತ್ರಸ್ತೆ ಕುಟುಂಬ ಸದಸ್ಯರಿಗೆ Y ಹಂತದ ಭದ್ರತೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರವು ಈ ತೀರ್ಮಾನ ತೆಗೆದುಕೊಂಡಿದೆ.
ಸಂತ್ರಸ್ತೆ ಕುಟುಂಬ ಸದಸ್ಯರಿಗೆ ಖಾಕಿ ಪಡೆ ಕಾವಲು
ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬ ಸದಸ್ಯರ ಭದ್ರತೆಗಾಗಿ ಅವರ ನಿವಾಸದ ಸುತ್ತ 12 ರಿಂದ 15 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆ ಪೊಲೀಸ್ ಕಣ್ಗಾವಲು ಹಾಕಲಾಗಿದೆ ಎಂದು ಹತ್ರಾಸ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಮೂವರು ಎಸ್ಎಚ್ಓ, ಒಬ್ಬ ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಶ್ರೇಣಿಯ ಅಧಿಕಾರಿ ಮತ್ತು ಪೊಲೀಸ್ ಕಾನ್ಸ್ ಟೇಬಲ್ ರನ್ನು ನಿಯೋಜಿಸಲಾಗಿದೆ.
ಸಂತ್ರಸ್ತೆ ಕುಟುಂಬಸ್ಥರ ಭದ್ರತೆ ಬಗ್ಗೆ ಜಿಲ್ಲಾಡಳಿತದ ಲಕ್ಷ್ಯ
ಹತ್ರಾಸ್ ಗ್ರಾಮದ ಸಂತ್ರಸ್ತೆ ನಿವಾಸದ ಸುತ್ತ ಪೊಲೀಸ್ ಕಣ್ಗಾವಲಿನ ಜೊತೆಗೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜೊತೆ ಭದ್ರತೆ ಮತ್ತು ಗ್ರಾಮದಲ್ಲಿನ ಪರಿಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆ ಮತ್ತು ಲಕ್ಷ್ಯ ವಹಿಸುವಂತೆ ಜಿಲ್ಲಾಡಳಿತಕ್ಕೂ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ.
ಸಂತ್ರಸ್ತೆ ಕುಟುಂಬ ಸದಸ್ಯರಿಗೆ Y ಭದ್ರತೆ ನೀಡುವಂತೆ ಒತ್ತಾಯ
ಭಾನುವಾರ ಹತ್ರಾಸ್ ನಲ್ಲಿ ಪರಿಸ್ಥಿತಿ ಕೊಂಚ ತಿಳಿಕೊಳ್ಳುತ್ತಿದ್ದಂತೆ ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿ ಮಾಡಲು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಜೊತೆಗೆ ಐವರಿಗೆ ಪೊಲೀಸರು ಅನುಮತಿ ನೀಡಿದ್ದರು. ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಸಂಬಂಧಿಕರ ಭೇಟಿ ಬಳಿಕ ಮಾತನಾಡಿದ ಆಜಾದ್, ಇಡೀ ಕುಟುಂಬಕ್ಕೆ ಭದ್ರತೆ ಅವಶ್ಯಕತೆಯಿದೆ ಎಂದಿದ್ದರು. ಜಿಲ್ಲಾಡಳಿತವೇ ಅವರಿಗೆ ಬೆದರಿಕೆ ಹಾಕಿರುವ ಆರೋಪವೂ ಇದೆ. ಈ ಹಿನ್ನೆಲೆ ಕುಟುಂಬಕ್ಕೆ Y- ಹಂತದ ಭದ್ರತೆ ನೀಡಬೇಕು. ನೀವು ಅವರಿಗೆ 'Y' ಹಂತದ ಭದ್ರತೆ ನೀಡುತ್ತಿರೋ ಅಥವಾ ಅವರನ್ನೆಲ್ಲ ನಾನು ನಮ್ಮ ಮನೆಗೆ ಕರೆದುಕೊಂಡು ಹೋಗಬೇಕಾ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಪ್ರಶ್ನೆ ಮಾಡಿದ್ದರು.
ಅತ್ಯಾಚಾರ ನಡೆದಿಲ್ಲ ಎಂದ ವಿಧಿವಿಜ್ಞಾನ ಪ್ರಯೋಗಾಲಯ
ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ದೇಹದ ಯಾವುದೇ ಭಾಗದಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಗುರುತು ಪತ್ತೆಯಾಗಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಗ್ರಾದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯವು 19 ವರ್ಷದ ಅತ್ಯಾಚಾರ ಸಂತ್ರಸ್ತೆಯ ದೇಹದ ಮಾದರಿ ಪರೀಕ್ಷೆ ನಡೆಸಿತು. ಸೋಮವಾರ ಪರೀಕ್ಷೆಯ ಅಂತಿಮ ವರದಿ ನೀಡಿದ್ದು, ಸಂತ್ರಸ್ತೆಯ ದೇಹದಲ್ಲಿ ವೀರ್ಯ ಮಾದರಿ ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.