ಉನ್ನಾವೋ ರೇಪ್: 11 ನೇ ತರಗತಿ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಪೊಲೀಸರು ಗಪ್ ಚುಪ್!
ಲಕ್ನೋ, ಜುಲೈ 31: ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಧೈರ್ಯವಾಗಿ ಹೇಗೆ ಎದುರಿಸಬೇಕು? ಆರೋಪ ಸಾಬೀತುಪಡಿಸಲು ಹೇಗೆ ನೆರವಾಗಬೇಕು ಎಂಬಿತ್ಯಾದಿ ವಿಷಯಗಳನ್ನು ಕುರಿತು ಮಾಹಿತಿ ನೀಡುತ್ತಿದ್ದ ಪೊಲೀಸರಿಗೆ ವಿದ್ಯಾರ್ಥಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ತಡವರಿಸಬೇಕಾದ ಸನ್ನಿವೇಶ ಏರ್ಪಟ್ಟಿತ್ತು!
ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಬಾರಾಬಂಕಿ ಎಂಬಲ್ಲಿಯ ಶಾಲೆಯೊಂದರಲ್ಲಿ. ತಮ್ಮ ಮೇಲೆ ನಡೆವ ದೌರ್ಜನ್ಯವನ್ನು ಮಹಿಳೆಯರು ಧೈರ್ಯವಾಗಿ ಎದುರಿಸುವ ಕುರಿತು ತರಬೇತಿ ನೀಡುವ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉತ್ತರ ಪ್ರದೇಶದಾದ್ಯಂತ ಮಾಡಲಾಗುತ್ತಿದೆ.
ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ ಕುಲದೀಪ್ ಅಮಾನತು
ಈ ಕಾರ್ಯಕ್ರಮದ ಭಾಗವಾಗಿ ಆನಂದ್ ಭವನ್ ಎಂಬ ಶಾಲೆಯಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. "ನಿಮ್ಮ ಮೇಲೆ ದೌರ್ಜನ್ಯ ನಡೆದರೆ ಅದನ್ನು ನೀವೇ ಧೈರ್ಯವಾಗಿ ಎದುರಿಸಬೇಕು. ನಂತರ ನ್ಯಾಯ ಸಿಗುವವರೆಗೂ ನೀವು ಹೋರಾಡಬೇಕು" ಎಂದು ಪೊಲೀಸರು ಹೇಳುತ್ತಿದ್ದರು.
ಈ ಸಂದರ್ಭದಲ್ಲಿ ಎದ್ದು ನಿಂತ 11ನೇ ತರಗತಿಯ ವಿದ್ಯಾರ್ಥಿನಿ, "ನೀವು ಹೇಳುತ್ತೀರಿ, ನಾವು ಧ್ವನಿ ಏರಿಸಬೇಕು ಎಂದು. ನಮಗೆ ಗೊತ್ತು ಒಬ್ಬ ಮಹಿಳೆಯ ಮೇಲೆ ಬಿಜೆಪಿ ನಾಯಕರೊಬ್ಬರು ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆಯನ್ನು ಕೊಲ್ಲಲು ಅಪಘಾತ ಮಾಡಿಸಿದ್ದಾರೆ. ಆಕೆ ಗಂಭೀರ ಸ್ಥಿತಿಯಲ್ಲಿದ್ದರೆ, ಆಕೆಯ ಇಬ್ಬರು ಸಂಬಂಧಿಗಳು ಮೃತಪಟ್ಟಿದ್ದಾರೆ. ಇದು ಸಹಜ ಅಪಘಾತವಲ್ಲ ಎಂಬುದಕ್ಕೆ ಸಾಕ್ಷಿ ಸಂತ್ರಸ್ತೆ ಇದ್ದ ಕಾರಿಗೆ ಗುದ್ದಿದ್ದ ಟ್ರಕ್ ನ ನಂಬರ್ ಪ್ಲೇಟ್ ಗೆ ಕಪ್ಪು ಬಣ್ಣ ಬಳಿದಿದ್ದು. ಸಾಮಾನ್ಯ ಜನರು ನಮ್ಮ ಮೇಲೆ ದೌರ್ಜನ್ಯ ಎಸಗಿದರೆ ನಾವು ಧ್ವನಿ ಎತ್ತಬಹುದು ಸರಿ. ಆದರೆ ಪ್ರಭಾವಿಗಳಾದರೆ ಏನು ಮಾಡಬೇಕು? ನಮಗೆ ಗೊತ್ತು ಅವರ ವಿರುದ್ಧ ದೂರು ನೀಡಿದರೆ ಯಾವ ಕ್ರಮವನ್ನೂ ನೀವು ಕೈಗೊಳ್ಳುವುದಿಲ್ಲ! ಅದರಿಂದ ಯಾವ ಉಪಯೋಗವೂ ಇಲ್ಲ. ಅಕಸ್ಮಾತ್ ನಾವು ಪ್ರತಿಭಟನೆ ಮಾಡಿದರೆ ನ್ಯಾಯ ನೀಡುವ ಭರವಸೆಯನ್ನು ನೀವು ಕೊಡುತ್ತೀರಾ? ನಮ್ಮ ಭದ್ರತೆಯ ಬಗ್ಗೆ ಗ್ಯಾರಂಟಿ ಕೊಡುತ್ತೀರಾ? ಪ್ರತಿಭಟಿಸಿದ್ದಕ್ಕೆ ನನಗೂ ಏನೂ ಆಗುವುದಿಲ್ಲ ಎಂದು ಹೇಗೆ ನಂಬುವುದು?" ಎಂದು ಆಕೆ ಪ್ರಶ್ನಿಸಿದ್ದರು.
ಶಾಸಕನ ಜತೆ 'ಸೆಟ್ಲ್' ಮಾಡ್ಕೋ: ಅತ್ಯಾಚಾರ ಸಂತ್ರಸ್ತೆಗೆ ಪೊಲೀಸರ ಸಲಹೆ!
ಈ ಪ್ರಶ್ನೆಯನ್ನು ನಿರೀಕ್ಷಿಸದ ಪೊಲೀಸರು ಏನು ಉತ್ತರಿಸಬೇಕೆಂದೇ ತಿಳಿಯದೆ ತಡವರಿಸಿದ್ದಾರೆ. ಅಷ್ಟರಲ್ಲಿ ತರಗತಿಯಲ್ಲಿದ್ದ ಮಕ್ಕಳೆಲ್ಲರೂ ಚಪ್ಪಾಳೆ ತಟ್ಟಿ ಆಕೆಯ ಪ್ರಶ್ನೆಗೆ ಮೆಚ್ಚುಗೆ ಸೂಚಿಸಿದ್ದಾರೆ.
2017 ರ ಜೂನ್ 4 ರಂದು ಉತ್ತರ ಪ್ರದೇಶದ ಉನ್ನಾವೋ ದಲ್ಲಿ ಇಲ್ಲಿನ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನ್ಗಾರ್, ತನ್ನ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸ್ವತಃ ಸಂತ್ರಸ್ಥೆ ಆರೋಪಿಸಿದ್ದರು. ಈ ಘಟನೆಯಾಗಿ ಒಂದು ವಾರದ ನಂತರ ಮತ್ತೆ ಮೂವರು ಸೇನ್ಗಾರ್ ಸಹಚರರು ಆಕೆಯನ್ನು ಅಪಹರಿಸಿ, ಸುಮಾರು ಒಂಬತ್ತು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ಆದರೆ ಮಗಳು ಕಾಣೆಯಾಗಿದ್ದಾಳೆಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರಿಂದ ಆಕೆಯನ್ನು ಮನೆಯ ಬಳಿ ಬಿಟ್ಟು ಹೋಗಿದ್ದರು.
ನಂತರ ಸಂತ್ರಸ್ತೆ ಈ ಕುರಿತು ಪೊಲೀಸರಿಗೆ ದೂರು ನೀಡಿದರು. ಕುಲದೀಪ್ ಅವರೂ ಆರೋಪಿ ಎಂಬುದು ತಿಳಿಯುತ್ತಿದ್ದಂತೆಯೇ ದೂರು ದಾಖಲಿಸಿಕೊಳ್ಳಲು ಪೊಲೀಸರು ಒಪ್ಪಿರಲಿಲ್ಲ. ಆದರೆ ಮಾಧ್ಯಮಗಳಲ್ಲಿ ಈ ಘಟನೆ ಜೋರು ಸದ್ದು ಮಾಡುತ್ತಿದ್ದಂತೆಯೇ ಅಂಜಿದ ಪೊಲೀಸರು ದೂರು ದಾಖಲಿಸಿದ್ದರು.
ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಬಿಚ್ಚಿಟ್ಟ ಆ ಕರಾಳ ದಿನದ ನೆನಪು...
ನ್ಯಾಯ ಕೇಳಿ ಪೊಲೀಸ್ ಸ್ಟೇಶನ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂತ್ರಸ್ತೆಯ ತಂದೆಯೂ ಠಾಣೆಯಲ್ಲೇ ಅಸುನೀಗಿದ್ದು ಈ ಘಟನೆಗೆ ಮತ್ತಷ್ಟು ಗಂಭೀರ ಸ್ವರೂಪ ನೀಡಿತ್ತು. ಉತ್ತರ ಪ್ರದೇಶ ಸರ್ಕಾರ ಈ ಪ್ರಕರಣವನ್ನು ಸಿಬಿಐ ಗೆ ವಹಿಸಿತ್ತು. ಕುಲದೀಪ್ ಸೇನ್ಗಾರ್ ನನ್ನು ಬಂಧಿಸಲಾಗಿತ್ತು.
ಆದರೆ ಇತ್ತೀಚೆಗೆ ಸಂತ್ರಸ್ತೆಯ ಕಾರು ಅಪಘಾತಕ್ಕೊಳಗಾದ ನಂತರ ಮತ್ತೊಮ್ಮೆ ಈ ಘಟನೆ ಬೆಳಕಿಗೆ ಬಂದಿದ್ದು, ಬೇಕೆಂದೇ ಸೇನ್ಗಾರ್ ಜೈಲಿಲ್ಲಿದ್ದುಕೊಂಡು ಪ್ರಭಾವ ಬೆಳೆಸಿ ಆಕೆಯ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ. ಈ ಎಲ್ಲ ಬೆಳವಣಿಗೆಯ ನಂತರ ಸೇನ್ಗಾರ್ ನನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ.