ಭಗತ್ ಸಿಂಗ್ ಮರಣದಂಡನೆ ದೃಶ್ಯದ ನಾಟಕ ಅಭ್ಯಾಸದ ವೇಳೆ 10 ವರ್ಷದ ಯುಪಿ ಬಾಲಕ ಮೃತ್ಯು
ನವದೆಹಲಿ, ಜು.31: ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಬೇಕಿದ್ದ ನಾಟಕಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನೇಣು ಬಿಗಿದ ದೃಶ್ಯವನ್ನು ಅಭ್ಯಾಸ ಮಾಡುತ್ತಿದ್ದ ವೇಳೆ ಉತ್ತರ ಪ್ರದೇಶದ ಬಾಬತ್ ಹಳ್ಳಿಯ 10 ವರ್ಷದ ಬಾಲಕ ಗುರುವಾರ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಕುನ್ವರ್ಗಾಂವ್ ಜಿಲ್ಲೆಯ ಭುರೆ ಸಿಂಗ್ ಪುತ್ರ ಶಿವಂ ಇತರೆ ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಬೇಕಿದ್ದ ನಾಟಕಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ರನ್ನು ಗಲ್ಲಿಗೇರಿಸುವ ದೃಶ್ಯವನ್ನು ಅಭ್ಯಾಸ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ಶನಿವಾರ ಪಿಟಿಐಗೆ ತಿಳಿಸಿದರು. ಪೊಲೀಸರಿಗೆ ಮಾಹಿತಿ ನೀಡದೆ ಕುಟುಂಬದವರು ಶವದ ಅಂತಿಮ ವಿಧಿವಿಧಾನಗಳನ್ನು ನಡೆಸಿದರು ಎಂದು ಕೂಡಾ ಹೇಳಲಾಗಿದೆ.
ಮಗುವಿನ ಕುಟುಂಬವು ಹೇಗೆ ಸಾವನ್ನಪ್ಪಿದರು ಎಂಬುದರ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸಿದೆ ಬದೌನ್ನ ಎಸ್ಎಸ್ಪಿ ಸಂಕಲ್ಪ್ ಶರ್ಮಾ ಮಾಹಿತಿ ನೀಡಿದರು. ಕುನ್ವರಗಾಂವ್ ಪೊಲೀಸ್ ಠಾಣೆಯ ಎಸ್ಎಚ್ಒ ನೇತೃತ್ವದ ಪೊಲೀಸ್ ತಂಡವನ್ನು ಶುಕ್ರವಾರ ಗ್ರಾಮಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.
ಇನ್ನು "ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ" ಎಂದು ಬದೌನ್ನ ಎಸ್ಎಸ್ಪಿ ಸಂಕಲ್ಪ್ ಶರ್ಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಶಿವಮ್ ಭಗತ್ ಸಿಂಗ್ ಗಲ್ಲಿಗೇರಿಸುವ ದೃಶ್ಯವನ್ನು ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಬೇಕಿದ್ದ ನಾಟಕಕ್ಕಾಗಿ ಅಭ್ಯಾಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಆತ ತನ್ನ ಕುತ್ತಿಗೆಗೆ ಕುಣಿಕೆಯನ್ನು ಕಟ್ಟಿದ್ದಾನೆ. ಆದರೆ ಆತ ನಿಂತಿದ್ದ ಸ್ಟೂಲ್ ಜಾರಿಬಿದ್ದು, ನೇಣು ಬಿಗಿದಂತಾಯಿತು. ಅಲ್ಲಿದ್ದ ಇತರ ಮಕ್ಕಳು ಗಾಬರಿಗೊಂಡು ಸಹಾಯಕ್ಕಾಗಿ ಕಿರುಚಲು ಆರಂಭಿಸಿದರು. ಹತ್ತಿರದ ಕೆಲವು ನಿವಾಸಿಗಳು ಸ್ಥಳಕ್ಕಾಗಮಿಸಿ, ಕುಣಿಕೆ ಕತ್ತರಿಸಿ ಶಿವಂನನ್ನು ಕೆಳಕ್ಕೆ ಇಳಿಸಿದರು ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.
ಇನ್ನು ಇಂತಹುದ್ದೆ ಘಟನೆ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲೇ ನಡೆದಿದೆ. ಬಂದೂಕಿನೊಂದಿಗೆ ಸೆಲ್ಫಿ ಕ್ಲಿಕ್ಕಿಸುವಾಗ ಗುಂಡು ಹಾರಿ ಮಹಿಳೆ ಮೃತಪಟ್ಟಿರುವ ಘಟನೆಯು ಕಳೆದ ವಾರ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಮಹಿಳೆ ರಾಧಿಕಾ ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನೊಂದಿಗೆ ಸೆಲ್ಫಿ ಕ್ಲಿಕ್ಕಿಸುವಾಗ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ ಪೋಷಕರು ತಮ್ಮ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ದೂರು ನೀಡಿದ್ದಾರೆ.
ಮಹಿಳೆಯ ಮನೆಯವರದ್ದು ಸಣ್ಣ ಆಭರಣ ವ್ಯವಹಾರವಿದೆ, ಚುನಾವಣೆ ಸಮಯದಲ್ಲಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದ ಬಂದೂಕನ್ನು ಆಕಾಶ್ ಗುರುವಾರ ವಾಪಸ್ ತಂದಿದ್ದ, ಬಂದೂಕಿನ ಜತೆ ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ರಾಧಿಕಾ ಹಠ ಮಾಡಿದ್ದಳು. ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಬಂದೂಕಿನಲ್ಲಿ ಗುಂಡು ಇರುವುದು ಮಹಿಳೆಗೆ ಗೊತ್ತಿರಲಿಲ್ಲ, ನಳಿಕೆ ಎಳೆದ ಪರಿಣಾಮ ಗುಂಡು ಹಾರಿದೆ. ಬಳಿಕ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಈ ವರ್ಷವೂ ಕೂಡಾ ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಸರಳವಾಗಿ ನಡೆಯಲಿದೆ. ಕಳೆದ ವರ್ಷ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸರಳವಾಗಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿತ್ತು. ಈ ವರ್ಷ ಕೋವಿಡ್ ಕಾರಣದಿಂದಾಗಿ ಶಾಲೆಗಳಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗದು ಎಂಬ ಕಾರಣದಿಂದಾಗಿ ಕೆಲವೊಂದು ಶಾಲೆಗಳು ಈಗಲೇ ಆನ್ಲೈನ್ನಲ್ಲೇ ಕೆಲವೊಂದು ಪೂರ್ವಭಾವಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಪ್ರಬಂಧ ಬರೆಯಲು, ಚಿತ್ರ ಬಿಡಿಸಲು, ಧೀರ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಧರಿಸಿ ಛಾಯಾಚಿತ್ರಗಳನ್ನು ಕಳುಹಿಸಲು ಪೋಷಕರಿಗೆ ತಿಳಿಸಿದೆ. ಹಾಗೆಯೇ ಕೆಲವೊಂದು ಶಾಲೆಗಳು ಮಕ್ಕಳಲ್ಲಿ ನಾಟಕವನ್ನು ಮಾಡಿಸಲು ಅಭ್ಯಾಸ ನಡೆಸುತ್ತಿದೆ ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)