ದೇಶಭ್ರಷ್ಟ ಆರ್ಥಿಕ ಅಪರಾಧಿ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರ್ತಿಲ್ಲ
ಲಂಡನ್, ಜೂನ್ 4: ಉದ್ದೇಶಪೂರ್ವಕ ಸುಸ್ತಿದಾರ, ದೇಶಭ್ರಷ್ಟ ಆರ್ಥಿಕ ಅಪರಾಧಿ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಜೂನ್ ಮೊದಲ ವಾರದ ವೇಳೆಗೆ ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಆದರೆ, ಈ ಪ್ರಕ್ರಿಯೆ ವಿಳಂಬವಾಗಿದೆ. ಮಲ್ಯರನ್ನು ಭಾರತಕ್ಕೆ ಕರೆತರಲಾಗುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಮಲ್ಯ ಅವರ ಆಪ್ತವಲಯ ಹೇಳಿದೆ.
ಇಂಗ್ಲೆಂಡಿನಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಮೇ 14ರಂದು ವಜಾಗೊಂಡಿದ್ದು, ನಂತರ ಸುಪ್ರೀಂಕೋರ್ಟ್ ನಲ್ಲಿ ಮರು ಅರ್ಜಿ ಹಾಕುವ ಅವಕಾಶ ಕಳೆದುಕೊಂಡಿದ್ದರು. ಹೀಗಾಗಿ, ಮಲ್ಯರನ್ನು ಇನ್ನು 28ದಿನಗಳಲ್ಲಿ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ನಿರೀಕ್ಷಿಸಲಾಗಿತು.
ಈ ಕುರಿತಂತೆ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದ್ದು, ಪ್ರೀತಿ ಅವರು ಹಸ್ತಾಂತರ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿ ಅಂತಿಮ ಅಂಕಿತ ಇನ್ನೂ ಹಾಕಿರದ ಕಾರಣ, ಮಲ್ಯ ಸದ್ಯಕ್ಕಂತೂ ಭಾರತಕ್ಕೆ ಬರುತ್ತಿಲ್ಲ.
ಮಲ್ಯಗೆ ಭಾರಿ ಹಿನ್ನಡೆ, ಭಾರತಕ್ಕೆ ಹಸ್ತಾಂತರಿಸಲು 28 ದಿನ ಗಡುವು
ಕೆಲ ಮಾಧ್ಯಮಗಳಲ್ಲಿ ಮಲ್ಯರನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆ ತರಲಾಗುತ್ತಿದ್ದು, ಮುಂಬೈನಲ್ಲಿ ಅವರನ್ನು ವಶಕ್ಕೆ ಪಡೆಯಲು ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿನಿರ್ದೇಶನಾಲಯವು ಸಿದ್ಧವಾಗಿದೆ ಎಂದು ವರದಿ ಮಾಡಲಾಗಿತ್ತು.
ಕೆಲ ಮಾಧ್ಯಮಗಳಿಂದ ವೈರಲ್ ಆದ ಸುದ್ದಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಡನ್ನಿನಲ್ಲಿರುವ ರಾಯಭಾರ ಕಚೇರಿ ಹಾಗೂ ಮಲ್ಯ ಅವರ ವಕೀಲ ಆನಂದ್ ದುಬೆ, ಪರಿಸ್ಥಿತಿ ಬದಲಾವಣೆಯಾಗಿಲ್ಲ, ಬಹುಶಃ ಸಿಬಿಐ ಹಳೆ ಹೇಳಿಕೆ ಆಧಾರದ ಮೇಲೆ ಮಲ್ಯರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸುದ್ದಿ ಮಾಡಿರಬಹುದು ಎಂದಿದ್ದಾರೆ. ಈಗ ಇದೇ ವೈರಲ್ ಆಗಿ ಮಲ್ಯ ಇನ್ನೇನು ಮುಂಬೈಗೆ ಬಂದಿಳಿಯುತ್ತಿದ್ದಾರೆ. ಅವರಿಗಾಗಿ ಜೈಲು ಕಾದಿರಿಸಲಾಗಿದೆ ಎಂದು ಚರ್ಚೆ ನಡೆಯುತ್ತಿದೆ.
ಹಸ್ತಾಂತರ ಪ್ರಕ್ರಿಯೆ ಆರಂಭವಾಗಿಲ್ಲ
ಹಸ್ತಾಂತರ ಪ್ರಕ್ರಿಯೆ ವಿರುದ್ಧ ಅಪೀಲ್ ಮಾಡುವ ಕಾನೂನು ಅವಕಾಶವನ್ನು ಮಲ್ಯ ಕಳೆದುಕೊಂಡಿದ್ದಾರೆ. ಆದರೆ, ಈ ಕುರಿತಂತೆ ಲಂಡನ್ ಕೋರ್ಟ್ ಆದೇಶದಂತೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ.
ಮಲ್ಯರನ್ನು ಭಾರತಕ್ಕೆ ಕರೆದೊಯ್ಯುವುದಿದ್ದರೆ ಹೀಥ್ರೂ ವಿಮಾನ ನಿಲ್ದಾಣದ ತನಕ ಲಂಡನ್ ಮೆಟ್ರೋಪಾಲಿಟನ್ ಪೊಲೀಸರ ವಶದಲ್ಲಿರಬೇಕಾಗುತ್ತದೆ. ಹೀಗಾಗಿ, ಲಂಡನ್ ಪೊಲೀಸರು ಈ ಸುದ್ದಿಯನ್ನು ಅಲ್ಲಗೆಳೆದಿರುವುದರಿಂದ ಮಲ್ಯ ಸದ್ಯಕ್ಕೆ ಭಾರತಕ್ಕೆ ಬರುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಮಲ್ಯ ಆರೋಪಿ
ವಿಜಯ್ ಮಲ್ಯ ಅವರಿಂದ 1, 145 ಬಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್(1 GBP = 94.7784 INR) ಸಾಲದ ಮೊತ್ತ ಹಿಂಪಡೆಯಲು ಎಸ್ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟ ಯತ್ನಿಸುತ್ತಿದೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ಮಲ್ಯರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯ, ಸಿಬಿಐ ಮನವಿ ಸಲ್ಲಿಸಿವೆ. ಸುಮಾರು 11,000 ಕೋಟಿ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಮಲ್ಯ ಪ್ರಮುಖ ಆರೋಪಿಯಾಗಿದ್ದಾರೆ.
MLAT ಎಂಬ ಒಪ್ಪಂದ
A mutual legal assistance treaty (MLAT) ಎಂದು ಕರೆಯುವ ಒಪ್ಪಂದಕ್ಕೆ ಭಾರತ ಮತ್ತು ಇಂಗ್ಲೆಂಡ್ 1995ರಲ್ಲಿ ಸಹಿ ಮಾಡಿವೆ. ಈ ಪರಸ್ಪರ ಕಾನೂನು ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಕ್ಕೆ ಬೇಕಾದ ವ್ಯಕ್ತಿಯನ್ನು ಪರಸ್ಪರ ಹಸ್ತಾಂತರ ಮಾಡಿಕೊಳ್ಳಲು ಅವಕಾಶ ಇದೆ. ಇಲ್ಲಿ ತನಕ ಈ ಒಪ್ಪಂದ ಬಳಸಿಕೊಂಡು ಒಬ್ಬರನ್ನು ಮಾತ್ರ ಇಂಗ್ಲೆಂಡಿನಿಂದ ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ವಿನುಭಾಯಿ ಪಟೇಲ್ ಅವರು ಗಡಿಪಾರು ಮಾಡಿದರೂ ನನ್ನ ಅಭ್ಯಂತರವಿಲ್ಲ ಎಂದಿದ್ದರಿಂದ ಕೆಲಸ ಸುಲಭವಾಗಿತ್ತು. ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆ ತರಲು ಇಲ್ಲಿನ ತನಿಖಾ ಸಂಸ್ಥೆಗಳಿಗೆ ಕನಿಷ್ಟ 10 ರಿಂದ 15 ವರ್ಷಗಳಾದರೂ ಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕಾನೂನಿನಲ್ಲಿ ಬದಲಾವಣೆ ತರಲಾಗಿದ್ದು, ಮಲ್ಯ ಭಾರತಕ್ಕೆ ಬರುವ ಕಾಲ ಸನ್ನಿಹಿತ ಎಂಬ ಸುದ್ದಿಯೂ ಇದೆ.