ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಅಡ್ಡಿಯಿಲ್ಲ: ಲಂಡನ್ ಕೋರ್ಟ್
ಲಂಡನ್, ಫೆಬ್ರವರಿ 25: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಹಗರಣದಲ್ಲಿ ಭಾರತಕ್ಕೆ ಬೇಕಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ಆಭರಣ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಬಹುದು ಎಂದು ಬ್ರಿಟನ್ ನ್ಯಾಯಾಲಯ ಗುರುವಾರ ಹೇಳಿದೆ. ಭಾರತದಲ್ಲಿನ ಜೈಲುಗಳ ಸ್ಥಿತಿ ಚೆನ್ನಾಗಿಲ್ಲ ಹಾಗೂ ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದು ನೀರವ್ ಮೋದಿ ವಾದವನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
ಸುಮಾರು 14,000 ಕೋಟಿ ರೂ ವಂಚನೆ ಪ್ರಕರಣದಲ್ಲಿ ಸಿಲುಕಿ ದೇಶದಿಂದ ಪರಾರಿಯಾಗಿದ್ದ ನೀರವ್ ಮೋದಿ, ಭಾರತಕ್ಕೆ ತಮ್ಮನ್ನು ಗಡಿಪಾರು ಮಾಡದಂತೆ ಎರಡು ವರ್ಷಗಳಿಂದ ನಡೆಸುತ್ತಿರುವ ಕಾನೂನು ಹೋರಾಟದಲ್ಲಿ ಸೋಲು ಅನುಭವಿಸಿದಂತಾಗಿದೆ.
ಮೆಹುಲ್ ಚೋಕ್ಸಿಯ 14.45 ಕೋಟಿ ಮೊತ್ತದ ಆಸ್ತಿ ಮುಟ್ಟುಗೋಲು
ನೀರವ್ ಮೋದಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತಾದ ಮೇಲ್ನೋಟದ ಪುರಾವೆಗಳನ್ನು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ನ ಜಿಲ್ಲಾ ನ್ಯಾಯಾಧೀಶ ಸಾಮ್ಯುಯೆಲ್ ಗೂಜೀ ಒಪ್ಪಿಕೊಂಡರು. ಇವುಗಳಲ್ಲಿ ಅನೇಕ ವಿಚಾರಗಳು ಭಾರತದಲ್ಲಿ ವಿಚಾರಣೆ ನಡೆಸಲು ಅರ್ಹವಾಗಿವೆ. ಅವರನ್ನು ಶಿಕ್ಷೆಗೆ ಒಳಪಡಿಸಬಹುದಾದ ಪುರಾವೆಗಳಿವೆ ಎಂದು ಹೇಳಿದರು.
ಭಾರತದಲ್ಲಿನ ಕಾರಾಗೃಹ ಗುಣಮಟ್ಟ ತೃಪ್ತಿದಾಯಕವಾಗಿದೆ. ಬ್ಯಾರಕ್ 12 ಅನ್ನು ಬಂಧನಕ್ಕೆ ಯೋಗ್ಯ ಎಂದು ಪರಿಗಣಿಸಬಹುದಾಗಿದೆ. ವಾಸ್ತವವಾಗಿ ಅವರು ಈಗ ಲಂಡನ್ನ ಬಂಧನದಲ್ಲಿರುವ ಜೈಲಿಗಿಂತಲೂ ಬ್ಯಾರಕ್ 12ರ ಸ್ಥಿತಿ ಉತ್ತಮವಾಗಿದೆ ಎಂದು ಕೋರ್ಟ್ ಹೇಳಿತು. ಜತೆಗೆ ಭಾರತದಲ್ಲಿ ನೀರವ್ ಮೋದಿಗೆ ನೀಡಲು ಉದ್ದೇಶಿಸಿರುವ ವೈದ್ಯಕೀಯ ಸಿದ್ಧತೆಯೂ ಒಪ್ಪುವ ರೀತಿಯಲ್ಲಿದೆ ಎಂದು ತಿಳಿಸಿತು.
ಕ್ಷಮಾದಾನ ಕೋರಿದ ನೀರವ್ ಮೋದಿಯ ತಂಗಿ ಮತ್ತು ಭಾವ: ಸಾಕ್ಷ್ಯ ಹೇಳಲು ಸಿದ್ಧ
'ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡುವುದು ಮಾನವಹಕ್ಕುಗಳಿಗೆ ಪೂರಕವಾಗಿ ಇದೆ ಎನ್ನುವುದು ನನಗೆ ತೃಪ್ತಿ ನೀಡಿದೆ. ಈ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವರಿಗೆ ಅಧಿಕಾರವಿದೆ. ನೀರವ್ ಮೋದಿಯನ್ನು ಗಡಿಪಾರು ಮಾಡಿದರೆ ನ್ಯಾಯ ಸಿಗುವುದಿಲ್ಲ ಎನ್ನುವುದಕ್ಕೆ ಯಾವ ಸಾಕ್ಷ್ಯವೂ ಇಲ್ಲ' ಎಂದ ನ್ಯಾಯಾಧೀಶರು, ಭಾರತ ಸರ್ಕಾರ ಸಲ್ಲಿಸಿದ್ದ ದಾಖಲೆಗಳನ್ನು ಅಂಗೀಕರಿಸಿದರು.