ಬ್ರಿಟನ್ ಸಂಸತ್ನಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಕ್ಕೆ ಭಾರತ ತೀವ್ರ ಆಕ್ರೋಶ
ಲಂಡನ್, ಸೆಪ್ಟೆಂಬರ್ 24: ಬ್ರಿಟನ್ ಸಂಸತ್ನಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ ಮಾಡಿರುವುದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಯುಕೆ ಆಲ್ಪಾರ್ಟಿ ಮಾರ್ಲಿಮೆಂಟರಿ ಗ್ರೂಪ್ ಸದಸ್ಯರು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಕುರಿತು ಚರ್ಚೆ ನಡೆಸಿದರು.
ಕಾಶ್ಮೀರವು ಭಾರತದ ಅವಿಭಾಜ್ಯ ಪ್ರದೇಶವಾಗಿದೆ, ಯಾವುದೇ ವೇದಿಕೆಯಲ್ಲಾಗಲಿ ಒಂದು ವಿಷಯವನ್ನು ಪ್ರಸ್ತಾಪಿಸುವ ಮೊದಲು ಆ ವಿಷಯ ಕುರಿತ ವಾಸ್ತವಾಂಶದ ಅರಿವಿರಬೇಕು ಎಂದು ಭಾರತ ಹೇಳಿದೆ.
ಭಾರತಕ್ಕೆ ಆಗಮಿಸುವಂತೆ ಕಮಲಾ ಹ್ಯಾರಿಸ್ ಆಹ್ವಾನಿಸಿದ ಮೋದಿ
ಬ್ರಿಟನ್ ಸಂಸತ್ನ ಕೆಳಮನೆಯಲ್ಲಿ ಕೆಲವು ಸಂಸದರು ಕಾಶ್ಮೀರ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಕೋರಿದ್ದವು. ಪಾಕಿಸ್ತಾನ ಮೂಲದ, ಲೇಬರ್ ಪಾರ್ಟಿ ಸಂಸದರಾದ ನಾಜ್ ಶಾ ಅವರು ಭಾರತದ ಪ್ರಧಾನಿ ಕುರಿತು ಬಳಸಿದ ಭಾಷೆ ನಿರಾಶೆ ಮೂಡಿಸುವಂತಿದೆ. ಇದು ಸಂಸತ್ ಒದಗಿಸಿರುವ ವೇದಿಕೆಯ ದುರುಪಯೋಗವಾದಂತಿದೆ ಎಂದು ಭಾರತ ಹೇಳಿದೆ.
ಕಾಶ್ಮೀರದಲ್ಲಿ ಮಾನವ ಹಕ್ಕುಗಳು ಎಂಬ ವಿಷಯ ಕುರಿತು ಚರ್ಚೆ ಕೋರಿ ಸರ್ವ ಪಕ್ಷ ಸಂಸದೀಯ ಗುಂಪು ಸೂಚನೆ ಮಂಡಿಸಿತ್ತು. ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ, ಆದರೆ, ಈ ವಿವಾದ ಕುರಿತು ಭಾರತ ಹಾಗೂ ಪಾಕಿಸ್ತಾನ ರಾಜಕೀಯವಾದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ವಿಷಯದಲ್ಲಿ ಪರಿಹಾರ ಕ್ರಮ ಸೂಚಿಸುವುದು ಇಲ್ಲವೇ ಮಧ್ಯಸ್ಥಿಕೆ ವಹಿಸುವುದು ಬ್ರಿಟನ್ನ ಕೆಲಸವಲ್ಲ ಎಂದು ಹೇಳಿದ್ದಾರೆ.
ಈ ಕುರಿತು ವಿದೇಶ, ಕಾಮನ್ವೆಲ್ತ್ ಅಭಿವೃದ್ಧಿ ಕಚೇರಿ ಅಧೀನದ ಏಷ್ಯಾ ವಿದ್ಯಾಮಾನಗಳ ಸಚಿವೆ ಅಮಂಡಾ ಮಿಲ್ಲಿಂಗ್ ಪ್ರತಿಕ್ರಿಯಿಸಿ ಕಾಶ್ಮೀರ ವಿವಾದ ದ್ವಿಪಕ್ಷೀಯ ವಿಷಯ ಎಂಬ ಬ್ರಿಟನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಸರ್ಕಾರವು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುವುದರ ಜತೆಗೆ ಕಾಶ್ಮೀರಿ ಜನರ ಆಶಯಗಳನ್ನು ಗಣನೆಗೆ ತೆಗೆದುಕೊಂಡು ಭಾರತ ಮತ್ತು ಪಾಕಿಸ್ತಾನ ಶಾಶ್ವತ ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕು. ಯುಕೆ ಪರಿಹಾರವನ್ನು ಸೂಚಿಸಲು ಅಥವಾ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಮಿಲ್ಲಿಂಗ್ ಹೇಳಿದರು.
ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನ ಸಚಿವರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ದಾಳಿಯನ್ನು ಖಂಡಿಸಿದರು ಹಾಗೂ ಕಾಶ್ಮೀರ ಭಾರತದ ಅವಿಭಾಜ್ಯ ಸಂಗ ಎಂದು ಹೇಳಿದರು.
ಈ ಹಿಂದೆ ವಿಶ್ವ ಸಂಸ್ಥೆಯಲ್ಲೂ ಕಾಶ್ಮೀರದ ವಿಷಯ ಪ್ರಸ್ತಾಪವಾಗಿತ್ತು. ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ(ಯುಎನ್ಎಚ್ಆರ್ ಸಿ)ಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ನರಮೇಧಕ್ಕೆ ಕಾರಣ ಭಾರತ ಎಂದು ಹೇಳುತ್ತಿರುವ ಪಾಕಿಸ್ತಾನವನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಈ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಮಾತನಾಡಿದ ಭಾರತದ ಶಾಶ್ವತ ಆಯೋಗದ ಮೊದಲ ಕಾರ್ಯದರ್ಶಿ ಸೆಂಥಿಲ್ ಕುಮಾರ್, ವಿಶ್ವಸಂಸ್ಥೆ ಮಾನವ ಹಕ್ಕುಗಳ ವೇದಿಕೆಯನ್ನು ಪಾಕಿಸ್ತಾನ ದುರುಪಯೋಗಪಡಿಸಿಕೊಳ್ಳುತ್ತಿದ್ದು ಬೇರೆಯವರಿಗೆ ಸಲಹೆ ಕೊಡುವ ಮೊದಲು ತನ್ನ ದೇಶದ ಮಾನವ ಹಕ್ಕುಗಳ ಸ್ಥಿತಿಗತಿ ಬಗ್ಗೆ ಪಾಕಿಸ್ತಾನ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ತಿರುಗೇಟು ನೀಡಿದ್ದರು.
ಪಾಕಿಸ್ತಾನದಲ್ಲಿ ಮಾನವೀಯತೆ, ಮನುಷ್ಯರ ವಿರುದ್ಧ ಅಪರಾಧಗಳು ನಡೆಯುತ್ತಲೇ ಇರುತ್ತವೆ. ಮನುಷ್ಯರು ಬಲವಂತದಿಂದ ಕಣ್ಮರೆಯಾಗುವುದು, ಹಿಂಸಾಚಾರ, ಬಲವಂತದ ಸಾಮೂಹಿಕ ಸ್ಥಳಾಂತರ, ಕಾನೂನು ಬಾಹಿರ ಹತ್ಯೆಗಳು, ಸೇನಾ ಕಾರ್ಯಾಚರಣೆಗಳು, ಚಿತ್ರಹಿಂಸೆ ನೀಡುವ ಶಿಬಿರಗಳು, ಬಂಧನ ಕೇಂದ್ರಗಳು ಮತ್ತು ಮಿಲಿಟರಿ ಶಿಬಿರಗಳು ಬಲೂಚಿಸ್ತಾನದಲ್ಲಿ ಸಾಮಾನ್ಯ ಸಂಗತಿಗಳಾಗಿವೆ ಎಂದು ನಿನ್ನೆ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ ಪ್ರಸ್ತಾಪಿಸಿದ್ದರು.
ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಗೊಳಿಸಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಈ ನಿರ್ಧಾರದ ಹಿಂದೆ ಯಾವುದೇ ಹೊರಗಿನ ಪ್ರಚೋದನೆಗಳಿಲ್ಲ. ಇದು ಭಾರತಕ್ಕೆ ಸಂಬಂಧಿಸಿದ ವಿಷಯ. ಜಮ್ಮು-ಕಾಶ್ಮೀರದ ಜನರು ಈ ನಿರ್ಧಾರವನ್ನು ಸ್ವಾಗತಿಸಿದ್ದು ಈ ವಿಚಾರದಲ್ಲಿ ಬಹಳ ಮುಂದೆ ಸಾಗಿದ್ದೇವೆ ಎಂದರು.
ಮಾನವ ಹಕ್ಕುಗಳ ಮಂಡಳಿ ಮತ್ತು ಅದರ ಕಾರ್ಯವಿಧಾನವನ್ನು ದುರುಪಯೋಗಪಡಿಸಿಕೊಂಡ ದೇಶ ಪಾಕಿಸ್ತಾನ. ನರಮೇಧವನ್ನು ಉಂಟುಮಾಡುವ ದಕ್ಷಿಣ ಏಷ್ಯಾದ ಏಕೈಕ ದೇಶ ಪಾಕಿಸ್ತಾನ ಇಂದು ಬೇರೆಯವರ ಮೇಲೆ ಆರೋಪ ಹೊರಿಸುತ್ತಿದೆ ಎಂದು ಆರೋಪಿಸಿದ್ದರು.