ಕಟ್ಟುಕಥೆ ನಿಲ್ಲಿಸಿ, ನಾನು ದುಡ್ಡು ಕದ್ದಿಲ್ಲ: ವಿಜಯ್ ಮಲ್ಯ ಅಳಲು
ಲಂಡನ್, ಡಿಸೆಂಬರ್ 6: ಬ್ಯಾಂಕುಗಳಿಂದ ಪಡೆದ ಸಾಲದ ಮೊತ್ತವನ್ನು ಸಂಪೂರ್ಣವಾಗಿ ವಾಪಸ್ ಮಾಡುವುದಾಗಿ ಹೇಳಿರುವ ಉದ್ಯಮಿ ವಿಜಯ್ ಮಲ್ಯ, ಮತ್ತೆ ಟ್ವಿಟ್ಟರ್ನಲ್ಲಿ ತಮ್ಮ ಅಹವಾಲು ತೋಡಿಕೊಂಡಿದ್ದಾರೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್ನನ್ನು ದುಬೈನಿಂದ ಭಾರತಕ್ಕೆ ಗಡಿಪಾರು ಮಾಡಿದ ಬೆನ್ನಲ್ಲೇ ಆರ್ಥಿಕ ಅಪರಾಧಿಯಾಗಿರುವ ವಿಜಯ್ ಮಲ್ಯ ಅವರನ್ನು ಕೂಡ ಗಡಿಪಾರು ಮಾಡುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಾಲದ ಅಸಲು ಶೇ 100ರಷ್ಟನ್ನು ಬ್ಯಾಂಕ್ ಗಳಿಗೆ ವಾಪಸ್ ಮಾಡ್ತೀನಿ: ಮಲ್ಯ
ಲಂಡನ್ನಲ್ಲಿ ಆಶ್ರಯ ಪಡೆದಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ವಿಚಾರದಲ್ಲಿ ಅಲ್ಲಿನ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಇತ್ತ ವಿಜಯ್ ಮಲ್ಯ, ಪಡೆದ ಸಾಲದ ಶೇ 100ರಷ್ಟು ಅಸಲು ಮೊತ್ತವನ್ನು ಮರಳಿಸುವುದಾಗಿ ಭರವಸೆ ನೀಡಿದ್ದಾರೆ.
ಮಲ್ಯ ಕೈತಪ್ಪಲಿದೆ ಲಂಡನ್ನಿನ ಬಂಗಲೆ, ಚಿನ್ನದ ಕಮೋಡ್!
ಆದರೆ, ತಮ್ಮನ್ನು ಹಣ ಕದ್ದವನು ಎಂದು ಮಾತ್ರ ಕರೆಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
'ಮಲ್ಯ ಮೇಲಿರುವ 'ಆರ್ಥಿಕ ಅಪರಾಧಿ' ಟ್ಯಾಗ್ ಕಳಚಲು ಸಾಧ್ಯವಿಲ್ಲ'
ತಮ್ಮ ಗಡಿಪಾರಿಗೂ, ಇತ್ತೀಚೆಗೆ ದುಬೈನಿಂದ ಆದ ಗಡಿಪಾರಿಗೂ ಸಂಬಂಧವೇನು ಎಂದು ಮಲ್ಯ ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದಾರೆ.
Respectfully to all commentators, I cannot understand how my extradition decision or the recent extradition from Dubai and my settlement offer are linked in any way. Wherever I am physically,my appeal is “Please take the money”. I want to stop the narrative that I stole money
— Vijay Mallya (@TheVijayMallya) 6 December 2018
'ಎಲ್ಲ ಕಾಮೆಂಟೇಟರ್ಗಳನ್ನು ಗೌರವಿಸುತ್ತಾ, ನನ್ನ ಗಡಿಪಾರು ನಿರ್ಧಾರ ಅಥವಾ ಇತ್ತೀಚಿನ ದುಬೈನಿಂದ ಗಡಿಪಾರು ಘಟನೆ ಮತ್ತು ನನ್ನ ಸೆಟ್ಲ್ಮೆಂಟ್ ಆಫರ್ ನಡುವೆ ಯಾವ ಸಂಬಂಧವಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ನಾನು ಎದುರಿಗೆ ಬಂದಾಗ ಮನವಿ ಮಾಡುವುದಿಷ್ಟು, ದಯವಿಟ್ಟು ಹಣ ತೆಗೆದುಕೊಳ್ಳಿ. ನಾನು ಹಣ ಕದ್ದಿದ್ದೇನೆ ಎಂದು ಕಥೆ ಸೃಷ್ಟಿಯನ್ನು ನಿಲ್ಲಿಸುವುದನ್ನು ನಾನು ಬಯಸುತ್ತೇನೆ' ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.