ಗರ್ಭಿಣಿಯನ್ನು ಬೀದಿಗೆ ಬಿಟ್ಟಿದ್ದ ಉಗ್ರರು, ಈಗ ಆಕೆಯ ಬ್ರಿಟನ್ ಪೌರತ್ವವೂ ಹೋಯ್ತು..!
ಆಕೆ ಇನ್ನೂ ಜಗತ್ತು ಅರಿಯದ ವಯಸ್ಸಿನಲ್ಲಿ ಮನಸ್ಸು ಕೆಡಿಸಿಕೊಂಡಿದ್ದಳು. ಉಗ್ರ ಹುಳಕ್ಕಾಗಿ ಸ್ವರ್ಗದಂತಹ ಊರು, ಮನೆ ಬಿಟ್ಟು ಹೋಗಿದ್ದಳು. ತಪ್ಪುಗಳ ಮೇಲೆ ತಪ್ಪು ಮಾಡಿಕೊಂಡ ಆಕೆಯ ಬದುಕು ಇದೀಗ ನರಕ. ಹೌದು ನಾವು ಹೇಳುತ್ತಿರುವುದು ಶಮಿಮಾ ಬೇಗಂ ಕಥೆಯನ್ನು.
ಬ್ರಿಟನ್ ಪ್ರಜೆಯಾಗಿದ್ದ ಶಮಿಮಾ ಬೇಗಂ ತನ್ನ 15 ವಯಸ್ಸಿನಲ್ಲೇ ಐಎಸ್ಐಎಸ್ (ISIS) ಉಗ್ರರಿಗಾಗಿ ಮನೆ, ಊರು ಬಿಟ್ಟು ಹೋಗಿದ್ದಳು. ಆದರೆ ಹೀಗೆ ಹೋದವಳು ಐಎಸ್ಐಎಸ್ ಉಗ್ರನನ್ನು ಮದುವೆ ಕೂಡ ಆಗಿದ್ದಳು. ಆ ನಂತರವೇ ಆಕೆಗೆ ತಿಳಿದಿದ್ದು ತಾನು ನರಕ ಸೇರಿದ್ದೀನಿ ಎಂದು. ಈ ಸತ್ಯ ಗೊತ್ತಾಗುವ ಹೊತ್ತಿಗೆ ಸಮಯ ಕೈಮೀರಿತ್ತು. ಶಮಿಮಾ ಬೇಗಂ ಬ್ರಿಟನ್ ಪೌರತ್ವ ರದ್ದು ಮಾಡಲಾಗಿತ್ತು.
ಈ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾದ ಶಮಿಮಾ ಬೇಗಂ, ಮೊದಲಿಗೆ ಬ್ರಿಟನ್ನ ಕೆಳ ನ್ಯಾಯಾಲದಲ್ಲಿ ಗೆಲುವು ಕಂಡಿದ್ದಳು. ಆದರೆ ತೀರ್ಪನ್ನು ಪ್ರಶ್ನೆ ಮಾಡಿ ಬ್ರಿಟನ್ ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಜಯವಾಗಿದೆ. ಶಮಿಮಾ ಬೇಗಂ ಬ್ರಿಟನ್ ಪೌರತ್ವ ಕಳೆದುಕೊಂಡಿರುವುದು ಕನ್ಫರ್ಮ್ ಆಗಿದೆ.
ಇಂತಹ ಪರಿಸ್ಥಿತಿ ಬೇಕಿತ್ತಾ..?
ಚೆಂದದ ಬದುಕು, ಅಗತ್ಯವಿರುವ ಎಲ್ಲವೂ ಕೈಗೆ ಸಿಗುವಾಗ ಶಮಿಮಾ ಬೇಗಂ ಮನಸ್ಸು ಕೆಡಿಸಿಕೊಂಡಳು. ಈ ತಪ್ಪಿಗೆ ಈಗ ನರಕ ಅನುಭವಿಸುವಂತಾಗಿದೆ. 15 ವಯಸ್ಸಿನಲ್ಲೇ ಉಗ್ರರಿಗಾಗಿ ಊರುಬಿಟ್ಟು, ಚೆಂದದ ದೇಶದ ಪೌರತ್ವ ತೊರೆದು ಉಗ್ರನನ್ನ ಮದುವೆ ಆಗಿದ್ದಳು. ಆದರೆ 2019ರಲ್ಲಿ ಬ್ರಿಟನ್ ಅಧಿಕಾರಿಗಳಿಗೆ ಸಿಕ್ಕಿದ್ದ ಈಕೆ ತುಂಬು ಗರ್ಭಿಣಿಯಾಗಿದ್ದಳು. ಅಂದಿನಿಂದಲೂ ಊರಿಗೆ ಮರಳಲು ಪ್ರಯತ್ನ ನಡೆಸಿದ್ದ ಶಮಿಮಾ ಬೇಗಂಗೆ ಅಂತಿಮವಾಗಿ ದೊಡ್ಡ ನಿರಾಸೆ ಎದುರಾಗಿದೆ. ಬ್ರಿಟನ್ ಸುಪ್ರೀಂಕೋರ್ಟ್, ಶಮಿಮಾ ಬೇಗಂ ಪೌರತ್ವ ರದ್ದು ಮಾಡಿರುವ ನಿರ್ಧಾರವನ್ನು ಸ್ವಾಗತಿಸಿದೆ. ಈ ವಿಚಾರದಲ್ಲಿ ನಾವು ರಾಜಿ ಆಗಲು ಸಾಧ್ಯವಿಲ್ಲ ಎಂದಿದೆ.
ಭದ್ರತೆ ವಿಚಾರದಲ್ಲಿ ರಾಜಿ ಆಗಲ್ಲ..!
ಬ್ರಿಟನ್ ಸುಪ್ರೀಂಕೋರ್ಟ್ ತೀರ್ಪು ನೀಡುವ ಸಂದರ್ಭದಲ್ಲಿ ಹೇಳಿರುವ ಒಂದೊಂದು ಮಾತು ಕೂಡ ಉಗ್ರ ಕ್ರಿಮಿಗಳನ್ನು ಬೆಂಬಲಿಸುವವರಿಗೆ ಎಚ್ಚರಿಕೆ ನೀಡಿದಂತಿದೆ. ಜನರ ಭದ್ರತೆ ಹಾಗೂ ದೇಶದ ಸ್ಥಿರತೆ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ. ಇಂತಹ ಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿದ ಬ್ರಿಟನ್ ಸುಪ್ರೀಂಕೋರ್ಟ್, ಬ್ರಿಟನ್ ಸರ್ಕಾರದ ತೀರ್ಮಾನಕ್ಕೆ ಬೆಂಬಲ ಸೂಚಿಸಿದೆ. ಈ ಮೂಲಕ ಶಮಿಮಾ ಬೇಗಂ ಪೌರತ್ವ ರದ್ದು ಮಾಡಿದ್ದು ಸರಿಯಾದ ನಿರ್ಧಾರ ಎಂದು ತಿಳಿಸಿದೆ. ಇದು ಕೆಲ ಉಗ್ರ ಪೋಷಕರಿಗೆ ಎಚ್ಚರಿಕೆ ಎಂಬರ್ಥದಲ್ಲಿ ಮಾತನಾಡಿದೆ.
ಅಪ್ಪನಿಗೂ ಬೇಡವಾದ ಮಗಳು..!
ಶಮಿಮಾ ಬೇಗಂ ಪರಿಸ್ಥಿತಿ ಹೇಗಾಗಿತ್ತು ಎಂದರೆ, ಸ್ವತಃ ಆಕೆಯ ತಂದೆ ಕೂಡ ನನ್ನ ಮಗಳು ಮರಳಿ ಇಲ್ಲಿಗೆ ಬರುವುದು ಬೇಡ ಎಂದಿದ್ದರು. 2019ರಲ್ಲಿ ತನ್ನ ನಾಪತ್ತೆಯಾದ ಮಗಳು ಸಿರಿಯಾ ನಿರಾಶ್ರಿತರ ಕ್ಯಾಂಪ್ನಲ್ಲಿ ಸಿಕ್ಕಿರುವ ಮಾಹಿತಿಗೆ ಪ್ರತಿಕ್ರಿಯಿಸಿದ್ದ ಅಹ್ಮದ್ ಅಲಿ, ನನ್ನ ಮಗಳು ವಾಪಸ್ ಬ್ರಿಟನ್ಗೆ ಬರುವುದು ಬೇಡ ಎಂದಿದ್ದರು. ಈ ಮೂಲಕ ಹೆತ್ತವರು ಕೂಡ ಮಗಳ ವಿರುದ್ಧ ರೊಚ್ಚಿಗೇಳುವಂತಾಗಿತ್ತು. ಅತಿ ಸಣ್ಣ ವಯಸ್ಸಲ್ಲಿ ಉಗ್ರರ ಮಾತಿಗೆ ಮರುಳಾಗಿ ನರಕ ಸೇರಿದ್ದವಳ ಬದುಕು ಇನ್ನಷ್ಟು ಅಸ್ತವ್ಯಸ್ತವಾಗಿ ಹೋಗಿದೆ.
ಯುವತಿ, ಯುವಕರೇ ಟಾರ್ಗೆಟ್..!
ಸೈಕೋ ಉಗ್ರರಿಗೆ ಜಗತ್ತಿನ ನಾನಾ ಮೂಲೆಗಳಲ್ಲಿ ವಾಸವಿರುವ ಯುವತಿ, ಯುವಕರೇ ಟಾರ್ಗೆಟ್ ಆಗಿದ್ದಾರೆ. ಇಲ್ಲಿ ದೇಶ ಹಾಗೂ ರಾಜ್ಯಗಳ ಗಡಿ ಪ್ರಶ್ನೆಯಾಗುವುದೇ ಇಲ್ಲ. ಅದು ಅಮೆರಿಕ ಇರಲಿ, ಆಸ್ಟ್ರೇಲಿಯಾ ಇರಲಿ. ಪಾಕಿಸ್ತಾನವೇ ಆಗಿರಲಿ, ಪ್ಯಾಲೆಸ್ತೇನ್ ಆಗಿರಲಿ. ಒಟ್ಟಿನಲ್ಲಿ ಉಗ್ರರಿಗೆ ಬೇಕಿರುವುದು ತಮ್ಮ ಮಾತನ್ನು ಕೇಳುವ ಯುವಕ, ಯುವತಿಯರು. ಹೀಗೆ ಚಿಕ್ಕ ವಯಸ್ಸಿನಲ್ಲೇ ಉಗ್ರರ ಮಾತಿಗೆ ಮರುಳಾಗಿ ತಪ್ಪು ಹಾದಿಯಲ್ಲಿ ಹೆಜ್ಜೆ ಇಡುವ ಇವರೆಲ್ಲಾ ನರಕ ಸೇರಿ ನರಳಾಡುತ್ತಾರೆ. ನಮ್ಮ ದೇಶದ ವಿವಿಧ ಭಾಗಗಳಿಂದ ಐಎಸ್ಐಎಸ್ ಉಗ್ರ ಪಡೆ ಸೇರಿದ ಅನೇಕ ಯುವಕರನ್ನ ನೋಡಿದ್ದೇವೆ. ಹೀಗಾಗಿ ಸರ್ಕಾರಗಳು ಮಕ್ಕಳ ಮನಸ್ಸು ಕೆಡಿಸುವ ಉಗ್ರರ ಖತರ್ನಾಕ್ ಪ್ಲ್ಯಾನ್ಗಳ ಬಗ್ಗೆ ಅಲರ್ಟ್ ಆಗಬೇಕಿದೆ. ಇಲ್ಲವಾದರೆ ಭವಿಷ್ಯಕ್ಕೆ ಗಂಡಾಂತರ ಗ್ಯಾರಂಟಿ.